ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೊನ್ನಾವರ ಕಡೆಯಿಂದ ಅತೀ ವೇಗವಾಗಿ ಬಂದ ಅಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಭೀಕರ ಘಟನೆ ತಾಲೂಕಿನ ಶಿರೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯಲ್ಲಿ ಹೊನ್ನಾವರದ ನಿವಾಸಿಗಳಾದ ಲೋಕೇಶ್ ಮಾಧವ ನಾಯ್ಕ್, ಅವರ ಪತ್ನಿ ಜ್ಯೋತಿ ನಾಯ್ಕ್, ಗಜಾನನ ಲಕ್ಷ್ಮಣ ನಾಯ್ಕ್ ಮೃತಪಟ್ಟಿದ್ದಾರೆ. ಅಂಬುಲೆನ್ಸಿನಲ್ಲಿದ್ದ ಮಂಜುನಾಥ, ಶಶಾಂತ್ ನಾಯಕ್, ಗೀತಾ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕೊಂಡೊಯ್ಯಲಾಗಿದೆ. ಅಂಬ್ಯುಲೆನ್ಸ್ ಚಾಲಕ ರೋಷನ್ ರೋಡ್ರಿಗಸ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬ್ಯಾರಿಕೇಡ್ ಸರಿಸಲು ಹೊದ ಟೋಲ್ ಸಿಬ್ಬಂದಿಗೆ ಸಂಬಾಜೆ ಗೋರ್ಪಡೆ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಜಾನನ ನಾಯ್ಕ್ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಕುಟುಂಬಿಕರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.