ತಾಲೂಕು ಪಂಚಾಯತ್‌ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್‌ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಮಾಜಿ ಶಾಸಕ ಹಾಲಾಡಿ ಬಣದ ಬಿಜೆಪಿಯ ದೀಪಿಕಾ ಎಸ್‌. ಶೆಟ್ಟಿ ಹಾಗೂ ಉಪಾಧ್ಯಕ್ಷೆಯಾಗಿ ಹೇಮಾವತಿ ಆರ್‌. ಪೂಜಾರಿ ಆಯ್ಕೆಯಾಗಿದ್ದಾರೆ.
      ಚುನಾವಣೆಯನ್ನು ಸಹಾಯಕ ಕಮಿಷನರ್‌ ಸದಾಶಿವ ಪ್ರಭು ನೆರವೇರಿಸಿಕೊಟ್ಟರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ ಹಾಗೂ ತಹಶೀಲ್ದಾರ್‌ ರಾಜು ಮೊಗವೀರ ಸಹಕರಿಸಿದರು.
      ತಾ.ಪಂ. ಒಟ್ಟು ಸದಸ್ಯ ಬಲ 35. ಇದರಲ್ಲಿ 22 ಬಿಜೆಪಿ, 12 ಕಾಂಗ್ರೆಸ್‌, ಓರ್ವ ಸಿಪಿಎಂ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿತ್ತು. ಆಯ್ಕೆ ಪ್ರಕ್ರಿಯೆ ಸಂದರ್ಭ ಬಿಜೆಪಿಯ ಉಚ್ಚಾಟಿತ ಇಬ್ಬರು ಸದಸ್ಯರಾದ ಪ್ರಸನ್ನ ಕುಮಾರ್‌ ಮತ್ತು ಗೌರಿ ದೇವಾಡಿಗ ಹಾಗೂ ಪೂರ್ಣಿಮಾ ಖಾರ್ವಿ, ಕಾಂಗ್ರೆಸ್‌ನ ಶಾರದಾ ದೇವಾಡಿಗ, ಸಿಪಿಎಂನ ಶಶಿಕಲಾ ಗೈರುಹಾಜರಾಗಿದ್ದರು. ಬಿಜೆಪಿಯಿಂದ ದೀಪಿಕಾ ಶೆಟ್ಟಿ ಹಾಗೂ ಲಲಿತಾ ಶೆಟ್ಟಿ ಹಾಗೂ ಕಾಂಗ್ರೆಸ್‌ನಿಂದ ಜಯಲಕ್ಷ್ಮೀ ರಾವ್‌ ನಾಮಪತ್ರ ಸಲ್ಲಿಸಿದ್ದರು. ಲಲಿತಾ ಶೆಟ್ಟಿ ನಾಮಪತ್ರ ಹಿಂದೆಗೆದುಕೊಂಡರು. ಕೈ ಎತ್ತುವ ಮೂಲಕ ನಡೆದ ಮತದಾನದಲ್ಲಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ದೀಪಿಕಾ ಎಸ್‌. ಶೆಟ್ಟಿ ಅವರು 19 ಮತ ಗಳಿಸಿದರೆ, ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ ಜಯಲಕ್ಷ್ಮೀ 11 ಮತ ಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹೇಮಾವತಿ ಪೂಜಾರಿ ಹಾಗೂ ಚಂದ್ರಾವತಿ ಕೊಠಾರಿ, ಕಾಂಗ್ರೆಸ್‌ನಿಂದ ಸಾವಿತ್ರಿ ಅಳ್ವೆಗದ್ದೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಚಂದ್ರಾವತಿ ಕೊಠಾರಿ ನಾಮಪತ್ರ ವಾಪಸ್‌ ತೆಗೆದುಕೊಂಡಿದ್ದರು. ಹೇಮಾವತಿ ಪೂಜಾರಿ 19 ಮತ ಗಳಿಸಿದರೆ ಸಾವಿತ್ರಿ ಅಳ್ವೆಗದ್ದೆ 11 ಮತ ಪಡೆದುಕೊಂಡರು.