ಉಡುಪಿ: ಪ್ರಶಸ್ತಿಗಾಗಿ ಯಾವುದೇ ಪ್ರಭಾವ ಬೀರದೆ ಸಾಧನೆಯನ್ನೆ ಪರಿಗಣಿಸಿ ಸನ್ಮಾನಿಸುವುದರಿಂದ ಸಂಸ್ಥೆಯ ಗೌರವ ಹೆಚ್ಚುವುದರೊಂದಿಗೆ ಸನ್ಮಾನ ಪಡೆದವರಿಗೂ ತೃಪ್ತ ಭಾವ ಮೂಡುತ್ತದೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ ಹೇಳಿದರು.
ರಂಗಭೂಷಣ ಸಂಸ್ಥೆಯವರು ಉಡುಪಿಯಲ್ಲಿ ಏರ್ಪಡಿಸಿದ ಸಾಹಿತ್ಯ ಸಂವಾದ ಹಾಗೂ ಸಾಹಿತ್ಯ ಕೃಷಿಕರಿಗೆ ಗುರು ಮುಖೇನ ಗೌರವಾರ್ಪಣೆ ನೀಡುವ ವಿಶಿಷ್ಟ ಕಾರ್ಯಕ್ರಮದಲ್ಲಿ ಸನ್ಮಾನದ ನಂತರ ಮಾತನಾಡುತ್ತಾ
ಇಂತಹ ಸಾಹಿತ್ಯಕ ಕಾರ್ಯಕ್ರಮದೊಂದಿಗೆ ಸದಭಿರುಚಿಯ ಸಾಹಿತಿಗಳನ್ನು ಗೌರವಿಸುವ ಮೂಲಕ ಇಂದಿನ ಯುವಕರಲ್ಲಿ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಲು ಸಾಧ್ಯವಿದೆ ಎಂದರು.
ಪ್ರವಾಸೀ ಸಾಹಿತ್ಯದಲ್ಲಿ 'ಜಾದೂಗಾರನ ಜರ್ನಿ' ಹಾಗೂ 'ಜಗದೊಳಗಿನ ಜಾದೂ' ಎಂಬ ವಿನೂತನ ಕೃತಿ ಗಳ ಮೂಲಕ 40 ದೇಶದ ವಿವಿಧ ಘಟನೆಗಳನ್ನು ಕಟ್ಟಿ ಕೊಟ್ಟ ಓಂಗಣೇಶ್ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕೃತಿಗಳ ವಿತರಣೆಯೊಂದಿಗೆ ತನ್ನದೆ ರೀತಿಯಲ್ಲಿ ಎಲೆಮರೆಯಲ್ಲಿ ಸಾಧನೆ ಗೈದ ಸೀತಾ ಬುಕ್ ಹೌಸ್ನ ಶಾಂಭವಿ ಪ್ರಭು ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮುರಳೀಧರ ಉಪಾದ್ಯರವರನ್ನು ಅವರ ಶಿಷ್ಯೆ ಶಾಂಭವಿಯವರು ಗೌರವಿಸಿದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ ಎಸ್ ಎನ್ ಹೆಬ್ಬಾರ್ ಮುಖ್ಯ ಅತಿಥಿಯಾಗಿದ್ದರು. ಉಡುಪಿಯ ಪ್ರೊ||ಶಂಕರ್, ಉಪಸ್ಥಿತರಿದ್ದರು.
ರಂಗಭೂಷಣದ ನಿರ್ದೇಶಕರಾದ ಲಕ್ಷ್ಮಣ ಶೆಣೈ ಸ್ವಾಗತಿಸಿದರು, ರಾಘವೇಂದ್ರ ಕಿಣಿ ನಿರೂಪಿಸಿ, ಶಶಿಭೂಷಣ ಕಿಣಿ ವಂದನೆ ಗೈದರು.