ಇರಬೇಕು ಆತ್ಮ ವಿಶ್ವಾಸ ಶ್ವಾಸ ಇರೋ ತನಕ...


        ಆತ್ಮ ಎಂದರೆ ನಾನು , ವಿಶ್ವಾಸ ಎಂದರೆ ನಂಬಿಕೆ. ನನ್ನಲ್ಲಿ ನನಗಿರುವ ನಂಬಿಕೆಯೆ ಆತ್ಮವಿಶ್ವಾಸ. ದೇವರನ್ನು ನಂಬುವುದಕ್ಕಿಂತ ಮೊದಲು ನಮ್ಮನ್ನು ನಾವು ನಂಬಬೇಕು. ಯಾರೇ ಆಗಲಿ ಜೀವನದಲ್ಲಿ ಆಸ್ತಿ ಅಂತಸ್ತು ಹಣ ಎಲ್ಲವನ್ನು ಸಂಪೂರ್ಣವಾಗಿ ಕಳೆದುಕೊಂಡು ಬದುಕಬಹುದು ಎಂದಾದರೆ ಅದು ಆತ್ಮವಿಶ್ವಾಸದಿಂದ ಮಾತ್ರ ಸಾಧ್ಯ.
        ಅದಕ್ಕೆ ಮುನಿಶ್ರೀ ತರುಣ ಸಾಗರ ಹೇಳುತ್ತಾರೆ," ಜೀವನದ ಹೋರಾಟದಲ್ಲಿ ಕೆಲವೊಮ್ಮೆ ಗೆಲ್ಲುವಿರಿ, ಕೆಲವೊಮ್ಮೆ ಸೋಲುವಿರಿ, ಕೆಲವೊಮ್ಮೆ ಬೀಳುವಿರಿ,ಕೆಲವೊಮ್ಮೆ ಪರಾಜಯದ ಪಾಲಾಗಬಹುದು.ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಬಂಧುತ್ವ ಸಂಬಂಧಗಳುನಮುರಿದು ಹೋಗಲಿ ಚಿಂತಿಸುವ ಅಗತ್ಯವಿಲ್ಲ.ಕೆಲಸ ಕಾರ್ಯಗಳು ನಿಂತು ಹೋಗಲಿ ಚಿಂತೆ ಇಲ್ಲ.ಮನೆ ಮಠ ಮುರಿದು ಹೋಗಲಿ ಚಿಂತೆ ಇಲ್ಲ.ಆತ್ಮವಿಶ್ವಾಸ ಎಂಬುದೊಂದು ಇದ್ದರೆ ಮುರಿದು ಹೋದದ್ದೆಲ್ಲಾ ಸರಿಹೋಗಿ ಬಿಡುತ್ತದೆ". ಆತ್ಮವಿಶ್ವಾಸ ಇರುವವನು ಯಾರನ್ನು ಅವಲಂಬಿಸಿರುವುದಿಲ್ಲ. ಆ ವ್ಯಕ್ತಿ ಎಲ್ಲೂ ಧೈರ್ಯಗೆಡುವುದಿಲ್ಲ. ವ್ಯಕ್ತಿಯಲ್ಲಿರುವ ಸಕಾರಾತ್ಮಕ ಯೋಚನೆಗಳೆ ಹಾಗೂ ಮಾನಸಿಕ, ಭೌದ್ಧಿಕ ಬಲಗಳ ಆತ್ಮವಿಶ್ವಾಸದ ಗುಟ್ಟು.

     ಒಂದು ಪಕ್ಷಿ ಕೊಂಬೆಯ ಮೇಲೆ ಕೂರುತ್ತದೆ. ಆ ಕೊಂಬೆ ಯಾವ ಸಮಯದಲ್ಲಾದರೂ ಮುರಿದು ಬೀಳಬಹುದು.ಆದರೆ ಆ ಪಕ್ಷಿಗೆ ಚಿಂತೆಯಿಲ್ಲ.ಅದು ಇನ್ನೊಂದು ಜಾಗದಲ್ಲಿ ಹೋಗಿ ಕೂರುತ್ತದೆ.ಆ ಪಕ್ಷಿ ನಂಬಿದ್ದು ಕೊಂಬೆಯನ್ನಲ್ಲ, ತನ್ನ ರೆಕ್ಕೆಯನ್ನು.. ಅಂತೆಯೇ ಯಾವತ್ತೂ ನಮ್ಮ ಬಲದ ಮೇಲೆಯೇ ನಂಬಿಕೆ ಇಡಬೇಕು.ಅಂದ ಹಾಗೆ ಸಾವಿಗೆ ಬಲವು ದಾರಿಯಾದರೆ,ಬದುಕಿಗೆ ಒಂದೇ ದಾರಿ ಅದು ಆತ್ಮವಿಶ್ವಾಸ. ಹೇಳದೇ ಕೇಳದೆ ಅಕಾಸ್ಮಾತಾಗಿ ಸಾವು ಬಂದು ಬಿಡುತ್ತದೆ.ಆಗ ಮನುಷ್ಯನ ಅಸಹಾಯಕತೆ ಪರಮಾವಧಿಗೇರುತ್ತದೆ.ಬಾಳಿನ ಭರವಸೆಯಲ್ಲ ಕ್ಷಣಾರ್ಧದಲ್ಲಿ ಮಾಯವಾಗುವಾಗ, ಎಂಥ ಧೃಢ ಹ್ರದಯವೂ ತತ್ತರಿಸುತ್ತದೆ. ಈ ಹೊತ್ತು ಜೀವಂತವಾಗಿರುವ ವ್ಯಕ್ತಿಯೇ, ನಾಳೆ ಮಣ್ಣಿನಲ್ಲಿ ಮಣ್ಣಾಗುವುದನ್ನು ಕಣ್ಣಾರೆ ಕಾಣುವಾಗ ಎಂಥ ಎದೆಯೂ ತಲ್ಲುಣಿಸುತ್ತದೆ. ದಿನ ನಿತ್ಯವೂ ಇತರರ ಸಾವನ್ನು ನೋಡುವ ವ್ಯಕ್ತಿ, ತನ್ನವರು ತೀರಿಕೊಂಡಾಗ ಒಂದು ಕ್ಷಣ ಚಕಿತನಾಗುತ್ತಾನೆ, ಸಂತಾಪ ಪಡುತ್ತಾನೆ. ಬಳಿಕ ಎಲ್ಲರೂ ಒಂದು ದಿನ ಹೋಗಬೇಕಲ್ಲ ಎಂಬ ಸಾಂತ್ವನದ ಮಾತನ್ನು ಮೆಲುಕಾಡಬಹುದು.ಆದರೆ ಸಾವು ಏನು? ಸಾವಿನ ಆಚೆಗೆ ಏನು? ಎಂಬುದನ್ನು ಆತ ಯೋಚಿಸಲಾರ. ಕೆಲ ದಿನಗಳ ಬಳಿಕ ಮೆಲ್ಲನೆ ನೋವನ್ನು ಮರೆಯುತ್ತಾನೆ. ತಿರುಗಿ ತನ್ನ ದೈನಂದಿನ ಚಟುವಟಿಕಟಗಳಲ್ಲಿ ತೊಡಗುತ್ತಾನೆ. ತನಗೆ ಸಾವು ಬಂದಾಗ ಯಾವ ಸಿದ್ಧತೆಯೂ ಇಲ್ಲದೇ ಹೋಗುತ್ತಾನೆ. ಮನಷ್ಯ ಜೀವನ ನೀರಮೇಲಿನ ಗುಳ್ಳೆಯೆಂದು ತಿಳಿದು ಒಂದಲ್ಲ ಒಂದು ದಿನ ನಾವು ಸಾಯುತ್ತೇವೆ ಎಂಬ ಭಾವನೆ ಬೆಳೆಸಿಕೊಂಡು ಇಂದೇ ಊಟ, ನಿದ್ದೆ ಬಿಟ್ಟು ಸಾವಿನ ದಾರಿ ಕಾಯಲು ಸಾಧ್ಯವೇ?
    ಜೀವನದಲ್ಲಿ ಕಷ್ಟಗಳು ಎಲ್ಲರನ್ನು ಒಂದೇ ರೀತಿ ಕಂಗೆಡಿಸುತ್ತವೆ ಎನ್ನಲಾಗದು. ಕೆಲವರು ಸಣ್ಣಪುಟ್ಟ ತೊಂದರೆಗಳಿಗೂ ಖಿನ್ನರಾಗಿ ಬಿಡುವ ಅಪ್ರಭುದ್ಧರು.ಕೆಲವರು ನಗುತ್ತಲೇ ನೋವನ್ನು ನೊಗುವವರು. ಮನುಷ್ಯನಲ್ಲಿ ವೈವಿಧ್ಯ, ವೈಶಿಷ್ಟ್ಯಗಳಿರುವಂತೆ ಅವರು ಎದುರಿಸುವ ಸಮಸ್ಯೆಗಳಲ್ಲೂ ವೈವಿಧ್ಯ, ವೈಶಿಷ್ಟ್ಯಗಳಿರುತ್ತದೆ. ಬಾಲ್ಯ, ಯೌವನಾವಸ್ಥೆಗಳಲ್ಲಿ,ದೈಹಿಕ ಶಕ್ತಿ ಚೆನ್ನಾಗಿರುವಾಗ, ಕಲಪನೆಯ ಕನಸು ಕಾಣುತ್ತ ಭವಿಷ್ಯದ ಚಿತ್ರಸೌಧಗಳನ್ನು ಕಟ್ಟಬಹುದು. ಸೋಲು, ಹತಾಶೆ, ವಿರೋಧ, ದುರ್ಬಲತೆ, ಅಸಹಾಯಕತೆಗೆ ತತ್ತರಿಸದೆ,ಸೋಲೆಂಬ ತೆರೆಗಳು ಬಂದು ಅಪ್ಪಳಿಸಿದಾಗ ಮನಸ್ಸಿನ ದುಗುಡವನ್ನು ದೂರಮಾಡಿ,ಅನಿವಾರ್ಯವನ್ನು ಎದುರಿಸಲು ಸಿದ್ಧವಾಗಬೇಕು. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಮತ್ತು ಬೌದ್ಧಿಕವಾಗಿ ತಮ್ಮನ್ನು ತಾವು ಕೆಳಗಿದ್ದೇವೆಂದು ತಿಳಿದುಕೊಂಡವರು ಮೊದಲು ತಮ್ಮ ಕೀಳರಿಮೆಯಿಂದ ಹೊರಬರಬೇಕು. ನಮ್ಮಲ್ಲಿ ಸುಪ್ತವಾಗಿರುವ ಅಪಾರ ಶಕ್ತಿಯಲ್ಲಿ ಅಚಲ ವಿಶ್ವಾಸವಿಡುವುದು ಅತ್ಯಂತ ಅವಶ್ಯಕ ಮಾತ್ರವಲ್ಲ, ಮೊದಲ ಕರ್ತವ್ಯವೂ ಹೌದು.ನಾವು ನಿಂತ ಸ್ಥಾನದಿಂದ ಮೊದಲು ಏರಲು ಪ್ರಯತ್ನಿಸಬೇಕು. ನಮ್ಮ ಅಭಿರುಚಿಯ ಕೆಲಸದಲ್ಲಿ ಮೆಲ್ಲಮೆಲ್ಲನೆ ಮೇಲೇರುತ್ತ ದುರ್ಬಲಗೊಳಿಸುವ ನಿಷೇಧಾತ್ಮಕ ಭಾವನೆಯನ್ನು ಹೊರತಳ್ಳಬೇಕು. ಈ ಮೂಲಕ ಆತ್ಮವಿಶ್ವಾಸವನ್ನು ವೃದ್ಧಿಸುವ ಉಪಾಯವನ್ನು ಕಂಡುಕೊಳ್ಳಬೇಕು. ಇದು ಒಂದೇ ದಿನದಲ್ಲಿ ಆಗುವ ಕೆಲಸವಲ್ಲದಿದ್ದರೂ ತಾಳ್ಮೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಮೊದಲುಅಸಾಧ್ಯವೆಂದು ತೋರಿದರೂ ಕೊನೆಯಲ್ಲಿ ಸಾಧ್ಯವಾಗಿಯೇ ಆಗುತ್ತದೆ.

       ತಾಳ್ಮೆ ಹಾಗೂ ಪ್ರಾಮಾಣಿಕ ಪ್ರಯತ್ನಕ್ಕೆ ಸ್ಪೂರ್ತಿಯಾಗಿ ಹಿನ್ನೆಲೆಯಲ್ಲಿ ಕಲಸ ಮಾಡುವ ಶಕ್ತಿಯೇ ಆತ್ಮವಿಶ್ವಾಸ, ತನ್ನಲ್ಲಿ ತನಗೆ ನಂಬಿಕೆ. ತನ್ನ ಅಂತರ್ಯದ ಆಳದಲ್ಲಿ ಅಪಾರ ಶಕ್ತಿ ಇದೆ ಎಂಬ ನಂಬಿಕೆ. ಈ ನಂಬಿಕೆ ಅಥವಾ ವಿಶ್ವಾಸದ ಅಭಾವವೇ ಭಯ, ಸಂಶಯಗಳಿಗೂ,ಕಾರ್ಯಹೀನತೆಗೂ, ಎಲ್ಲಾ ತೆರನಾದ ದೌರ್ಬಲ್ಯಗಳಿಗೂ ಕಾರಣವಾಗುತ್ತದೆ. ತನಗೆ ಕೊಡಲ್ಲಟ್ಟ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡೇ ಮೇಲೇರಬೇಕೆಂಬ ದೃಷ್ಠಿಕೋನಕ್ಕೂ ಈ ವಿಶ್ವಾಸವೇ ತಳಹದಿ. ತನ್ನಲ್ಲಿರುವ ಅಪಾರ ಶಕ್ತಿಯಲ್ಲಿ ನಂಬಿಕೆ ಉಂಟಾದಾಗ ತನ್ನ ವ್ಯಕ್ತಿತ್ವ ಹಾಗೂ ಭವಿಷ್ಯದ ನಿರ್ಮಾತೃ ತಾನೇ ಎಂಬುದನ್ನು ತಿಳಿದುಕೊಂಡಾಗ ಪ್ರತಿಯೊಬ್ಬನೂ ತನ್ನ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿಯಲು ಯತ್ನಿಸುತ್ತಾನೆ. ನೆಲದ ಮೇಲೆ ಬಿದ್ದಾಗ ನೆಲವನ್ನೇ ಆಧರಿಸಿ ಮೇಲೇರಿ ನಿಂತಂತೆ ಎದ್ದು ನಿಲ್ಲುವುದರಲ್ಲಿ ಸಂದೇಹವೇ ಇಲ್ಲ.
    ನಾವು ಯಾವುದೇ ಕಾರ್ಯವನ್ನು ಕೈಗೊಳ್ಳಬೇಕಾದರೆ ಮುಂದಾಲೋಚನೆ ಜೊತೆ, ಪೂರ್ವ ತಯಾರಿ ಬೇಕು ಇಲ್ಲದಿದ್ದರೆ ಮನೆಗೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡಿದಂತಾಗುವುದು. ಏನೇ ಆಗಲಿ ಸಾಧಿಸಿದರೆ ಅಬಳ ನುಂಗಬಹುದು ಎಂಬ ಮಾತಿನಂತೆ ಯಾವುದೇ ಕೆಲಸವಾಗಲಿ ನಾನು ಮಾಡಿಯೇ ಮಾಡುತ್ತೇನೆ ಎಂಬ ಧೃಢ ನಂಬಿಕೆ ಇದ್ದರೆ ಏನನ್ನೂ ಸಾಧಿಸಬಹುದು. ಆದರೆ ಕೆಲವು ಸಂಧರ್ಭಗಳಲ್ಲಿ ನಮ್ಮ ಅತಿಯಾದ ಆತ್ಮ ವಿಶ್ವಾಸ ನಮ್ಮ ಯೋಜನೆಯನ್ನೇ ಬುಡಮೇಲು ಮಾಡಬಹುದು. ಆರೋಗ್ಯವಂತ ಆತ್ಮವಿಶ್ವಾಸವಿದ್ದರೆ ಅಸಾಧ್ಯವಾದುದು ಯಾವುದು ಇಲ್ಲ.
                                                                                                                    - ಚೈತ್ರಾ ಚಂದನ್ ಪಡುಕೋಣೆ

ಕುಂದಾಪ್ರ ಡಾಟ್ ಕಾಂ- editor@kundapra.com