ಬ್ಯಾಸ್ಗಿ ರಜಿಯಾಗ್ ಬೊಂಬೈಯರ್ ಬಂದೀರಾ....?

       ಮೊದಲಿಂದ್ಲೂ ನಮ್ಮೂರ್ ಮಂದಿ ಮುಂಬೈಗೆ ಹೋಟ್ಲ್ ಕೆಲ್ಸ, ಬ್ಯಾಂಕ್, ಕಛೇರಿ ಕೆಲ್ಸ ಅಂದೇಳಿ ಎಷ್ಟ್ ಜನ ಹೋಯಿರ್ ಗೊತಿತಾ? ಹಾಗಂದ್ಹೇಳಿ ಇವ್ರೆಲ್ಲಾ ಪೂರಾ ಕಲ್ತ್ ಊರ್ ಬಿಟ್ಟರಲ್ಲ. ಅಲ್ಲ್ ಹೋಯಿ ಕಲ್ತ್ ಕೆಲ್ಸದಾಗೆ ಬಡ್ತಿ ತಕಂಡರ್. ಕೆಲವರ್ ಸ್ವಂತ ಅಂಗ್ಡಿ, ಹೋಟ್ಲ ವ್ಯಾಪಾರ ಮಾಡ್ದರ್. ಊರ್ ಬಿಟ್ರೂ ಇಲ್ಲಿ ಜನರನ್ನ ಮರ್ತರಲ್ಲಕಾಣಿ, ಆದ್ ಇವ್ರ ದೊಡ್ಗುಣ. ಇಲ್ಲಿ ಶಾಲೆ, ದೈದ್ ಮನಿ, ದೇವಸ್ಥಾನ ಯಾವ್ದಕ್ಕೇ ಆದ್ರೂ ದುಡ್ಡ್ ಕೊಡ್ತ್ರ್. ಅವ್ರಿಂದ ಎಷ್ಟ್ ಕಡೆ ಜೀರ್ಣೋದ್ಧಾರ ಆಯ್ತ್! ಇನ್ನ್ ಪೈಕಿಯರ್ ಯಾರೇ ಇರ್ಲಿ- ಅವ್ರ ಕಷ್ಟಕ್ಕೆ ಸಹಾಯ ಮಾಡ್ತ್ರ್. ಬಿಟ್ ಕೊಡೂದಿಲ್ಲೆ. ದೂರಿದ್ರು ಹತ್ರ ಇದ್ಹಾಂಗೆ. 
      ಈ ಬ್ಯಾಸ್ಗಿ ರಜೆ ಬಂದ್ರೆ ಇವ್ರೆಲ್ಲ 'ಒಂದ್ಸಾರಿ ಊರಿಗ್ ಹೋಯಿ ಬಪ್ಪೋ' ಅಂದ್ಕ ಬಪ್ಪ್ ರಿವಾಜ್. ಈಗಳ್ ನಮ್ಮೂರ ಬಸ್, ಅಂಗ್ಡಿಹೋಟ್ಲ್, ಹಬ್ಬ, ಮಡಿ ಚಪ್ರ ಎಲ್ಲ್ ಕಂಡ್ರೂ ಜಿಗಿ ಗುಟ್ಟೂ ಜನ. ಇವ್ರ ಮಕ್ಳಿಗೆ ಎಲ್ಲಾ ಭಾಷಿಯೂ ಬತ್ತತ್. ಈ ಎರ್ಡ್ ತಿಂಗಳ ಹಿಂದಿ, ಮರಾಠಿ, ಗುಜರಾತಿ, ಜತೆಗೆ ಕನ್ನಡ ಮಾತಾಡೂ ಮಕ್ಳ್ ನಮ್ಮೂರಾಗೆ ಸಿಕ್ತೊ. ಅಲ್ಲೆಲ್ಲ ಬರೀ ಫ್ಲಾಟಲ್ಲೇ ದಿನ ದೂಡಿದ ಇವ್ಕೆ ಇಲ್ಲ್ ಸೊಕ್ಕೂಕೆ ಬೇಕಾದಷ್ಟ್ ಗುಡ್ಡೆ, ಗೆದ್ದೆ ಬಯ್ಲ್. ಅಯ್ಯಯ್ಯ... ಮನಿ ಒಳ್ಗೆ ಬೆಕ್ಕಿನ ಸಂಸಾರ, ಹೊರ ಜಗಲೀಲ ನಾಯೀದ್, ಮನಿ ಹತ್ರ ಗಂಟಿಕೊಟ್ಗಿ! ಕೋಳಿಗೂಡ್! ಮೆಟ್ಲಾಗೆ ಎರಿನ್ ಸಾಲ್, ಜಗಲಿ ಬದೀಲಿಪ್ಪ ಮಾಯಿನ ಮರದಾಗೆ ಚೌಳಿಕೊಟ್ಟೆ! ಇದನ್ನೆಲ್ಲಾ ಕಂಡ್ ಅವ್ಕೆ ಯಾವ್ದೊ ಮಾಯಾಲೋಕಕ್ಕೆ ಬಂದಾಂಗಾತ್ತೆ! ಇನ್ನ್ ಹಿತ್ಲ್ ಬದೀಲಿ ನೇತಾಡ್ಕ ತೂಗೂಕೆ, ಹತ್ಕ ಪಟ್ಟಾಂಗ ಹೊಡೂಕೆ, ಗಾಳಿಗ್ ಬಿದ್ರ್ ಹೆಕ್ಕ್ ತಿಂಬ್ಕೆ ಮಾಯಿನ ಮರ, ಗೋಯ್ ಮರ- ಎಷ್ಟ್ ಲಾಯ್ಕಿತ್ತ್ ಈ ಹೊಳೆ, ಗುಡ್ಡೆ ಎಲ್ಲ ಅಂದ್ಕ ಕೊಣ್ಕಂತ್ ತಿರಗ್ತೊ.  ಒರ್ಲಿ ಹುಂತ ಕಂಡ್ ಅಠ್ಞಿ ಏಜ್ಝಿ ಅಂದ್ಕ ಖುಷಿ ಪಡ್ತೊ. 
        ಬಚ್ಚಲ್ ಮನೆಯಾಗೆ ದರ್ಲೆ ಕಸ ಹಾಕಿ ಕಿಚ್ಚೊಟ್ಟೂದೂ ಅವ್ಕ್ ಒಂದ್ ಗಮ್ಮತ್ತೇ. ನಾಕ್ ಹಲ್ಸಿನ ಹಣ್ಣ್ನ ಸೊಳೆಗೆ ಕಷ್ಟಪಡೂ ಬೊಂಬೈ ಪ್ಯಾಟೆಗಿಂತ ಇಲ್ಲಿ ಗನ ಹಲ್ಸಿನ ಹಣ್ಣ್ ಇಡೀಡಿ ತಕಬಂದ್ ಕುರ್ಕಂಡ್ ಒಂದೊಂದೇ ಶೇಡೀನೆ ತಿಂಬಾಗೆ ಖೂಷಿ ಆಯ್ದೆ ಇರತ್ತಾ? ನಂ ಭಾಷೆ ಗುತ್ತಾಯ್ದಿರೆ ಅಪ್ಪ ಅಬ್ಬಿ ಕೂಡ್ ಕೇಡ್ಕಂಡ್ ಪಟಾಪಟ್ ಉತ್ತರ ಕೊಡ್ತೋ- ಅದೇ ನಮ್ಗ್ ಖುಷಿ ಆಪ್ದ್. ಉತ್ತರ ಭಾರತದ ಪ್ರವಾಸ ಹೋದಾಳಿಕೆ ಎಂತದೊ ಕೆಲ್ಸಕ್ಕೆ ಒಬ್ರ್ ಆ ಊರಲ್ಲ್ ಪರಿಚಯ ಇದ್ದರ್ ನಂಗೂ  ಬೇಕಿದ್ದೀತ್. ಎಂತ ಮಾಡೂದ್? ಆದ್ರೂ ಕಾಂಬೊ..... ಅಂದ್ಕ...... ಸೀದಾ ನಂಬದಿ ಬ್ಯಾಂಕಿಗೆ ನುಗ್ನೆ. 'ಹ್ವಾಯ್, ಇಲ್ಲ್ ಯಾರಾರೂ ನಂ ಬದಿಯರ್ ಇದ್ರಾ......? ಕೇಂಡೆ, ಮೂರ್ ಜನ ಹತ್ರ ಬಂದ್ ಮಾತಾಡ್ಸಿ 'ಎಂತ ಆಯ್ಕ' ಅಂತ ವಿಚಾರ್ಸ್ರ್. ಊರ್ ಮನಿ ಮತ್ತ್ ನಮ್ಮವ್ರ್ ಅಂಬ್ ಸೆಳ್ತ ಅಂದ್ರ್ ಅದ್ ಕಾಣಿ. ಅಂದಿನು ಚಿಟ್ಕಿ ಹೊಡೂದ್ರಾಗೆ ನನ್ನ ಕೆಲ್ಸ ಆಯ್ತ್! ಹಾಂಗಾಯಿ ಊರ್ ಬಿಟ್ಟ್ ಹೋದರ್ ರಜಿಗೆ ಊರಿಗೆ ಬಂದಾಳಿಕೆ ನಾವೂ ಅವ್ರಿಗ್ ಅಷ್ಟೇ ಪ್ರೀತಿ ತೋರ್ಸ್ವೊ....... ಆಗ್ದಾ? ಅವ್ರ ಮಕ್ಳಿಗೆ ನಿಮ್ಮೂರ ದೇವಸ್ಥಾನ, ತೇರ್ ಹಬ್ಬ ತೋರ್ಸಿನಿ. ಈ ಬದಿ ತಟ್ಟೀರಾಯ, ತೋರಣ, ಪತಾಕೆ, ವಾಗ್ಲ, ಪಲ್ಲಕ್ಕಿ, ದೈವದ ಮನೆ ಉರು ಪಾಣಾರ ಆಟ, ಯಕ್ಷಗಾನ, ಡಕ್ಕೆ ಬಲಿ, ನಾಗಮಂಡಲ ಎಲ್ಲ ಅವೂ ಕಾಣ್ಲಿ..... ಹಬ್ಬದ ಗುಡೆ ಸಕ್ರೆ ಕಡ್ಡಿ, ಪತ್ತಾಸು, ವಾಲ್ಬೆಲ್ಲದ ರುಚಿ ಇದೆಲ್ಲ ಮಕ್ಕಳಾಟಿಕೇಲೇ ಖುಷಿ ಪಡ್ಕ್. ಹಲಸಿನ ಹಣ್ಣಿನ ಕಡುಬು- ಪಾಯಸ, ಬರಿಯಕ್ಕಿ ದೋಸೆ-ಜೋನಿ ಬೆಲ್ಲ, ಬೇಯ್ಸಿದ ಅವ್ಡೆ, ಉಸುಳಿ-ಎಳ್ಳು ಬಾಯ್ರು, 
       ಹೀಂಗೆ ಎಲ್ಲ ನೀವ್ ಮನೇಲೆ ಮಾಡಿ ಅವ್ರಿಗೆ ಸಮ್ಮಾನ ಮಾಡಿ. ಈ ಬದ್ಕಗೆ ನಾಕ್ ಜನ ನಮ್ಮರ್ ಜತೆಗೆ ಖುಷಿ ಪಡೂದ್ ಬಿಟ್ರೆ ಮತ್ತೆಂತ ಇತ್ತೇ? ಮುಂಬಯಿ ಪ್ಯಾಟೆಯಾಂಗೆ ಕೂತದ್ದಕ್ಕೆ ನಿತ್ತದ್ದಕ್ಕೆ ದುಡ್ಡ್ ಹೊಡಿ! ಅಲ್ಲಿ ಈಚರ್ಿಗ್ ತೂಗ್ರೆ ಇಲ್ಲ್ ಎಲ್ಲಾದೂ ಸೋಬಿಯೆ. ಅಲ್ಲೆಲ್ಲ ಬದ್ಕ್ ಅಂದ್ರ್ ಎಂತ ಅಂತ್ರಿ? ಬೆಳಗಾತೆದ್ದ್ ಬಸ್, ರೈಲ್ ಅಂದ್ಕ ಓಡೂದ್... ಎಲ್ಲ್ ಹೋರೂ ದೊಡ್ಡ ದೊಡ್ಡ ಕ್ಯೂ ಮತ್ತ್ ಟ್ರಾಫಿಕ್ ಜಾಮ್. ಅದ್ರಗೆ ದುಡ್ಕಂತ್ ಇದ್ದ ನಮ್ ಜನಕ್ಕೆ ಇಲ್ಲಿಗ್ ಬಂದ್ ನಾಕ್ದಿನ ಇದ್ರೆ ಮನಸಿಗ್      'ಅಯ್ಯಬ್ಬ' ಅನ್ಸತ್ತ್. ಮಕ್ಕಳಾಟಿಕೇಲಿ ಆಡದ್ದ್, ಉರುಡ್ಕಂಡದ್ದ್, ಬಿದ್ದದ್ದ್-ಮತ್ತ್ ಆಗಳಿಕೆ ಇದ್ದ್ ಅಜ್ಜಿ, ಅಜ್ಜಮಾವ ಎಲ್ಲರ್ ನೆನಪಾತ್ತ್. ಆ ನೆನಪನ್ನೇ ಹಳೇ ಕತೆಯಾಯಿ ಹೇಳಿ ಎಲ್ಲರ್ ಜತೆ ಹಂಚ್ಕಂಡ್ರೂ ಖುಷಿ ಆತ್ತ್, ಮನಸ್ ಹಗೂರಾತ್ತ್.
       ಇಷ್ಟೆಲ್ಲಾ ಆಪಾಗೆ ರಜೆ ಮುಗಿತ್ತ್. ನಾಂವ್ ಕಟ್ಟಿ ಕೊಟ್ಟ ತಿಂಡಿ ಹಣ್ಣ್ ಜತೆಗೆ ಅವ್ರ್ ನೆನಪಾಗೆ ಕಟ್ಕಂಡ್ 'ಊರ್' ತಕ ವಾಪಸ್ 'ಅಣ್ಣಾ, ಬತ್ತೆ' ಅಂತ ಹೊರಡ್ವಾಗೆ ಅವ್ರ ಕಣ್ಣಗೂ ಎಯ್ಡ್ ಹನಿ. ನಮ್ಮ ಕಣ್ಣಾಗೂ ಎಯ್ಡ್ ಹನಿ. ಇದ್ಕೇ ಹೇಳೂದ್ 'ಹೆತ್ತ ಕರಳ್..... ಎಳಿತ್ತ್!!.
- ಎಸ್. ಬಾಲಚಂದ್ರ ಕರ್ಣಿಕ್, ಕಿದಿಯೂರು.