ಸಂಭ್ರಮದಿ ಜರುಗಿದ ಆದಿಗ್ರಾಮೋತ್ಸವ 2014



ಅಜೆಕಾರು: “ಜಾತಿ ಮತ ಬೇಧ ಮರೆತು ನಾವೆಲ್ಲರೂ ಒಂದೇ…………” ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಗ್ರಾಮೋತ್ಸವಗಳ ತಾಯಿ ಬೇರು ಆದಿಗ್ರಾಮೋತ್ಸವ ಇಲ್ಲಿನ ಕುರ್ಪಾಡಿ ಯುವ ವೃಂದ ಹಾಗೂ ನಾಗರಿಕರ ಸಹಯೋಗದೊಂದಿಗೆ ಕುರ್ಪಾಡಿಯ ಆಕಾಶಬೆಟ್ಟು ಬಾಕಿಮಾರುಗದ್ದೆಯ ಗ್ರಾಮೋತ್ಸವ ಮಂಟಪದಲ್ಲಿ ಸಂಭ್ರಮದಿಂದ ಜರುಗಿತು.
ಪಕ್ಕಿಲ ಮೂಜಿ ತುಳು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಾಯಕ ನಟರಾದ ಪ್ರಕಾಶ ಕಾಬೆಟ್ಟು ಆದಿ ಗ್ರಾಮೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಒಂದು ಗ್ರಾಮವೆಂದರೆ ಒಂದು ಕುಟುಂಬವಿದ್ದಂತೆ. ಗ್ರಾಮಸ್ಥರೆಲ್ಲರೂ ಕುಟುಂಬಸ್ಥರು. ಗ್ರಾಮಸ್ಥರೆಲ್ಲರೂ ಸೇರಿ ಆಯೋಜಿಸುವ ಈ ಉತ್ಸವ ವಿಶೇಷವಾದುದು ಎಂದು ಹೇಳಿದರು. 
ಗ್ರಾಮೀಣ ದೀಪಸ್ತಂಭದಲ್ಲಿ ಅತಿಥಿಗಳು ಮತ್ತು ಊರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಸಾಮೂಹಿಕ ಚಾಲನೆ ನೀಡಿದರು.
ಕರ್ನಾಟಕ ಮುಸ್ಲಿಂ ಜಮಾತ್ ಕೌನ್ಸಿಲ್‍ನ ಕಾರ್ಯದರ್ಶಿ ಅಬುಸುಪಿಯಾನ್ ಮದನಿ ಮಾತನಾಡುತ್ತಾ ಧರ್ಮ, ಪಂಗಡಗಳ ಹೆಸರಿನಲ್ಲಿ ಸಂಘರ್ಷಗಳನ್ನು ನೋಡುತ್ತಿದ್ದೇವೆ. ಸಮಾಜದಲ್ಲಿರುವ ಕೆಲವು ವಿಷಜಂತುಗಳಿಂದ ಸಂಘರ್ಷಗಳು ಏರ್ಪಡುತ್ತಿದ್ದು ಒಂದು ಗುಂಪು ಮಾಡುವ ಕೆಟ್ಟ ಕಾರ್ಯಕ್ಕೆ ಇಡೀ ಸಮುದಾಯದವರನ್ನು ದೂಷಿಸುವುದು ಸರಿಯಲ್ಲ.
ಒಳ್ಳೆಯದನ್ನು ಬಯಸಿ, ಒಳ್ಳೆಯದಕ್ಕೆ ಹೆಚ್ಚಿನ ಮಹತ್ವ ನೀಡಿ ಒಳ್ಳೆಯ ಸಂಘವನ್ನು ಕಟ್ಟಿಕೊಳ್ಳಬೇಕಾಗಿದೆ. ಎಲ್ಲಾ ಮತ, ಧರ್ಮದವರನ್ನು ಒಗ್ಗೂಡಿಸಿಕೊಂಡು ನಡೆಸುತ್ತಿರುವ ಆದಿ ಗ್ರಾಮೋತ್ಸವದ ಉದ್ದೇಶವೂ ಕೂಡ ಒಳ್ಳೆಯ ಸಂದೇಶವನ್ನು ನೀಡುವುದೇ ಆಗಿದೆ ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳದ ನಿಕಟಪೂರ್ವ ಶಾಸಕ ಎಚ್. ಗೋಪಾಲ ಭಂಡಾರಿ ಮಾತನಾಡಿ ಒಂದು ಕಾರ್ಯಕ್ರಮ ಆಯೋಜಿಸುವಾಗ ಟೀಕೆ ಟಿಪ್ಪಣಿಗಳು ಸಹಜವಾಗಿಯೇ ಎದುರಾಗುತ್ತದೆ. ಸಂಘಟಕರುಗಳು ಅವುಗಳ ಬಗ್ಗೆ ಚಿಂತಿಸದೇ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು. ಗ್ರಾಮದವರನ್ನು ಒಗ್ಗೂಡಿಸಿಕೊಂಡು ದಶಕಗಳಿಂದ ನಡೆಸುತ್ತಿರುವ ಈ ಕಾರ್ಯಕ್ರಮ ವಿಶೇಷವಾದುದು ಎಂದರು.
ಹಳ್ಳಿ ಕ್ರೀಡೋತ್ಸವದ ಪ್ರವರ್ತಕ ಶಾಸ್ತಾವು ಭೂತನಾಥೇಶ್ವರ ದೇವಳದ ಆಡಳಿತ ಮೋಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಅವರಿಗೆ ಆದಿಗ್ರಾಮೋತ್ಸವ ಗೌರವ, ಜನಪದ ಕಲಾವಿದ; ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ ಕಲ್ಮಾಡಿ ಅವರಿಗೆ ಗ್ರಾಮ ಗೌರವÀ ಪ್ರದಾನಿಸಲಾಯಿತು.
ಗ್ರಾಮೋತ್ಸವ ಯುವ ಗೌರವ ವಿಜೇತರಾದ ಪಾಲಾಕ್ಷ ಸುವರ್ಣ ಬೆಳ್ತಂಗಡಿ,  ಸುನಿಲ್ ಹೆಚ್. ಜಿ. ಬೈಂದೂರು, ಸುಮಿತ್ ಕೌಡೂರ್, ಸತೀಶ್ ಪೆರ್ಡೂರು, ರವಿ ಪೂಜಾರಿ ನೆಲ್ಲಿಕಟ್ಟೆ, ಪ್ರಶಾಂತ ಶೆಟ್ಟಿ, ಯಶೋಧರ್ ಬಂಗೇರಾ, ಮೊಹಮ್ಮದ್ ಮಾಸ್ತಿಕಟ್ಟೆ, ಜಿ.ಎಸ್.ಪುರಂದರ ಪುರೋಹಿತ್, ಗೀತಾ ಆಚಾರ್ಯ, ರಕ್ಷಾ ಕಾರ್ಕಳ, ಸುರೇಶ್ ಕುರ್ಪಾಡಿ, ಅವರನ್ನು ಗೌರವಿಸಲಾಯಿತು.
ಗ್ರಾಮೋತ್ಸವ ಸಾಂಸ್ಥಿಕ ಗೌರವÀವನ್ನು ಕಿಕೆಟ್ ಕ್ರೀಡಾ ಸಂಸ್ಥೆ ‘ಕುರ್ಪಾಡಿ ಫ್ರೆಂಡ್ಸ್’, ಅಜೆಕಾರು ‘ಜ್ಯೋತಿ ಮಹಿಳಾ ಮಂಡಳಿ’ ಜನಬಿಂಬ ಕನ್ನಡ ವಾರಪತ್ರಿಕೆ, ಅಶಕ್ತರ ಸೇವೆಗಾಗಿರುವ ಬೊಂಡುಕುಮೇರಿನ ‘ಅಜೆಕಾರು ಸರ್ಕಾರಿ ಹಾಸ್ಟೆಲ್’ ನ ಪ್ರತಿನಿಧಿಗಳಿಗೆ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳ ಪುರಸಭಾ ಸದಸ್ಯರುಗಳಾದ ಅಶ್ಪಕ್ ಅಹ್ಮದ್, ಗಿರಿಧರ್ ನಾಯಕ್, ಅಜೆಕಾರಿನ ಜ್ಯೋತಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಸಾಧನಾ, ಉದ್ಯಮಿ ಅಲೆಕ್ಸ್ ಡಿಸೋಜ, ಜಾದೂಗಾರ ಪ್ರೊ. ಶಂಕರ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಡಾ. ಸಂತೋಷ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು.
ಆದಿ ಗ್ರಾಮೋತ್ಸವ ಸಂಘಟಕ ಶೇಖರ ಅಜೆಕಾರು ಕಾರ್ಯಕ್ರಮ ನಿರೂಪಿಸಿ, ಸಂಚಾಲಕ ಉಮಾಧರ್ ಎಸ್ ವಂದಿಸಿದರು. 
ಗ್ರಾಮೋತ್ಸವದ ವಿಶೇಷ ಆಕರ್ಷಣೆಯಾಗಿ ಗಾಯತ್ರಿ ದೀಪಯಜ್ಞ, ವಿಶ್ವ ವಿಖ್ಯಾತ ಜಾದೂಗಾರ ಪ್ರೋ ಶಂಕರ ಮತ್ತು ಜ್ಯೂನಿಯರ್ ಶಂಕರ ಅವರಿಂದ ಅಕ್ಷಯ ವಸಂತ ಜಾದೂ ಪ್ರದರ್ಶನ, ರಮೇಶ ಕಲ್ಮಾಡಿ ಅವರ ಜನಪದ ಬಳಗದವರಿಂದ ವೈವಿಧ್ಯಮಯ ಜನಪದ ನೃತ್ಯಗಳು ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮಸ್ಥರಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.





ನಿಮ್ಮ ಅಭಿಪ್ರಾಯ ಬರೆಯಿರಿ ಕುಂದಾಪ್ರ ಡಾಟ್ ಕಾಂ- editor@kundapra.com