ಸರಕಾರಿ ಶಾಲೆಯಲ್ಲೊಂದು ವಿಭಿನ್ನ ಶೈಕ್ಷಣಿಕ ಪ್ರಯೋಗ


ಕಲೆಯ ಮೂಲಕ ಕಲಿಕೆ. ಸರಕಾರಿ ಶಾಲೆಯಲ್ಲೊಂದು ವಿಭಿನ್ನ ಶೈಕ್ಷಣಿಕ ಪ್ರಯೋಗ

ಬೈಂದೂರು: ಪರಿಣಾಮಕಾರಿ ಶಿಕ್ಷಣಕ್ಕಾಗಿ ಪರಿಣತರು, ಶಿಕ್ಷಕರು ನಡೆಸುವ ವಿನೂತನ ಪ್ರಯೋಗಗಳು ಶೈಕ್ಷಣಿಕ ವಲಯದ ಚರ್ಚೆಗೆ ಸೀಮಿತವಾಗುತ್ತವೆ. ಕಳೆದ 15 ತಿಂಗಳಿನಿಂದ ತಲ್ಲೂರು ಸಮೂಹ ಸಂಪನ್ಮೂಲ ಕೇಂದ್ರಿತವಾಗಿ ನಡೆಯುತ್ತಿರುವ ಪ್ರಯೋಗವೊಂದು ಮಾರ್ಚ 7ರಿಂದ 9ರ ವರೆಗೆ ಬಹಿರಂಗ ಮೌಲ್ಯಮಾಪನಕ್ಕೆ ಒಡ್ಡಿಕೊಳ್ಳುವ ಮೂಲಕ ಶಿಕ್ಷಣಾಸಕ್ತರ ಗಮನ ಸೆಳೆಯಿತು. ಸರ್ವ ಶಿಕ್ಷಣ ಅಭಿಯಾನದ ‘ಮಾದರಿ ಸಮೂಹ ಸಂಪನ್ಮೂಲ ಕೇಂದ್ರ -ಮಾದರಿ ಶಾಲೆ ಯೋಜನೆ’ಯ ಅನ್ವಯ ರೂಪಿಸಿದ 'ಕಲಿ-ಕಲಿಸು ಹೆಸರಿನ ಈ ಶೈಕ್ಷಣಿಕ ಪ್ರಕಲ್ಪವು ವಿವಿಧ ಕಲೆಗಳ ಮೂಲಕ ಮಕ್ಕಳಿಗೆ ಸಂತಸದಾಯಕ, ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯ ಎನ್ನುವುದನ್ನು ಶ್ರುತಪಡಿಸಿತು.
        
ಕಲೆಗಳ ಮೂಲಕ ಕಲಿಕೆ:
 ಗಣಪತಿ ಹೋಬಳಿದಾರ್
   ತಲ್ಲೂರು ಸಮೂಹದ ಕೇಂದ್ರ ಶಾಲೆಯಾದ ತಲ್ಲೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಈ ಪ್ರಯೋಗದ ಕೇಂದ್ರಬಿಂದು. ಕೇಂದ್ರ ವ್ಯಾಪ್ತಿಯ 8 ಶಾಲೆಗಳಿಗೆ ಇದರ ವಿಸ್ತರಣೆ ಮತ್ತು ಅಲ್ಲಿ ಅದರ ಫಲಶ್ರುತಿಯ ಅನುಷ್ಠಾನ. ಈ ಶಾಲೆಗಳ ಆಭಿವೃದ್ಧಿ ಸಮಿತಿ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾದರು. ಇದರ ಪರಿಕಲ್ಪನೆಯನ್ನು ರೂಪಿಸಿದವರು ಸಮೂಹ ಸಂಪನ್ಮೂಲ ವ್ಯಕ್ತಿ ಕ್ರಿಯಾಶೀಲ ಶಿಕ್ಷಕ, ನೀನಾಸಂ ಪದವೀಧರ ಗಣಪತಿ ಹೋಬಳಿದಾರ. ಇದಕ್ಕೆ ತಾಂತ್ರಿಕ ಮತ್ತು ಆರ್ಥಿಕ ಹಸ್ತ ಚಾಚಿದ್ದು ಬೆಂಗಳೂರಿನ ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್ ಸಂಸ್ಥೆ.
    ಪ್ರಾಥಮಿಕ ಶಿಕ್ಷಣದ ಒಂದರಿಂದ ಏಳನೇ ತರಗತಿವರೆಗಿನ ತರಗತಿಗಳನ್ನು ಈ ಪ್ರಯೋಗದ ವ್ಯಾಪ್ತಿಗೆ ತರಲಾಗಿದೆ. ಈ ತರಗತಿಗಳ ಹೆಚ್ಚು ಕಡಿಮೆ ಎಲ್ಲ ಪಠ್ಯವಸ್ತುಗಳನ್ನು ವಿದ್ಯಾರ್ಥಿಗಳು ಮುದಗೊಳ್ಳುತ್ತ ಕಲಿಯಬಹುದಾದ ನಾನಾ ಕಲೆಗಳ ಮೂಲಕ ಪ್ರಸ್ತುತ ಪಡಿಸುವುದು ಈ ಪ್ರಯೋಗದಲ್ಲಿ ಅಳವಡಿಸಿಕೊಂಡಿರುವ ತಂತ್ರ. ಇಲ್ಲಿ ವಿದ್ಯಾರ್ಥಿಗಳು ತರಗತಿಯ ಸಾಂಪ್ರದಾಯಿಕ ಚೌಕಟ್ಟನ್ನು ತೊರೆದು ಕಲಾ ಮಾಧ್ಯಮ ಸೃಷ್ಟಿಸುವ ಕಲಿಕಾನುಭವಕ್ಕೆ ತಮಗರಿವಿಲ್ಲದೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಆ ಮೂಲಕ ಸಂತಸದಾಯಕ ಕಲಿಕೆ ನಡೆಯುತ್ತದೆ ಎನ್ನುವುದು ಇದರ ಹಿಂದಿರುವ ಪೂರ್ವ ಕಲ್ಪನೆ.
   ಪ್ರಯೋಗದ ಹಂತಗಳು: ಪ್ರಯೋಗದ ಮೊದಲ ಹೆಜ್ಜೆ ಪ್ರತಿ ಪಾಠಕ್ಕೊಪ್ಪುವ ಕಲಾ ಮಾಧ್ಯಮವನ್ನು ಗುರುತಿಸಿಕೊಳ್ಳುವುದು. ಕೆಲವು ಪಾಠಗಳು ನಾಟಕ, ಯಕ್ಷಗಾನ, ಗೊಂಬೆಯಾಟ, ಚಿತ್ರಕಲೆ, ನೃತ್ಯ ರೂಪಕವಾಗಿ ರೂಪಾಂತರಗೊಳ್ಳಲು ಸೂಕ್ತವೆನಿಸಿದರೆ, ಇನ್ನೂ ಕೆಲವು ರಂಗೋಲಿ, ಆಕೃತಿ, ನಕಾಶೆಗೆ ಹೊಂದಿಕೆಯಾಗುತ್ತವೆ. ಹಲವು ಪಾಠಗಳಿಗೆ ಹಾಡು, ಸಂಗೀತ ಉತ್ತಮ ಮಾಧ್ಯಮವೆನಿಸುತ್ತದೆ.
    ಪಾಠಗಳನ್ನು ಹೀಗೆ ಗುರುತಿಸಿಕೊಂಡ ಕಲಾ ಮಾಧ್ಯಮಕ್ಕೆ ಹೊಂದುವಂತೆ ಮರು ರೂಪಿಸುವುದು ಎರಡನೇಯ ಹಂತ. ಮುಂದಿನ ಹಂತದಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಗೀತ, ಚಿತ್ರಕಲೆ, ನೃತ್ಯರೂಪಕ, ಯಕ್ಷಗಾನ, ನಾಟಕ, ರಂಗೋಲಿ, ಗೊಂಬೆಯಾಟ, ಕರಕೌಶಲಗಳ ಪ್ರಾಥಮಿಕ ತರಬೇತಿಯನ್ನು ಆಯಾ ಕ್ಷೇತ್ರಗಳ ಪರಿಣತರಿಂದ ನೀಡಲಾಗುತ್ತದೆ. ಮೊದಲ ಎರಡು ಹಂತಗಳ ತರಬೇತಿಯನ್ನು ಪರಿಣತರು, ಸಮೂಹದ 75 ಶಿಕ್ಷಕರು ಒಂದೆಡೆ ಸೇರಿ ನಡೆಸಿದ್ದರು.
     ವಿದ್ಯಾರ್ಥಿಗಳಿಗೆ ಕಲಾ ಪರಿಣತಿ ನೀಡುವ ಮತ್ತು ಕಲಾ ಮಾಧ್ಯಮದಲ್ಲಿ ಪಾಠಗಳನ್ನು ಕಲಿಸುವ ಕಾರ್ಯ ಆಯಾ ಶಾಲೆಗಳಲ್ಲಿ ನಡೆಸಲಾಯಿತು. ಕಲಾ ಪ್ರಕಾರವಾಗಿ ರೂಪಾಂತರಗೊಂಡ ಪಠ್ಯ ವಸ್ತುವಿನ ಕಲಿಕೆಯನ್ನು ತರಗತಿಯ ಎಲ್ಲ ವಿದ್ಯಾರ್ಥಿಗಳು ಅದರಲ್ಲಿ ತೊಡಗಿಕೊಂಡು ಪ್ರಸ್ತುತಪಡಿಸುವ ಮೂಲಕ ನಡೆಸಲಾಯಿತು. ಈ ಹಂತದಲ್ಲಿ ವಿದ್ಯಾರ್ಥಿವಾರು ಕಲಿಕೆಯ ಗುಣಮಟ್ಟವನ್ನು ಸೂಕ್ತ ಮಾಪಕದ ಮೂಲಕ ಅಳೆಯಲಾಯಿತು. ಕೊರತೆ ಕಂಡುಬಂದಲ್ಲಿ ಪರಿಹಾರ ಬೋಧನೆ ನಡೆಸಲಾಯಿತು. ಇಡೀ ಪ್ರಕ್ರಿಯೆಯಲ್ಲಿನ ಶಿಕ್ಷಕರ ಮತ್ತು ಮಕ್ಕಳ ಕಲಿಕೆಯನ್ನು ಶಾಲಾ ಪರಿಸರದ ಸೌಂದರ್ಯ ವರ್ಧನೆಗೂ, ಶಾಲಾ ಚಟುವಟಿಕೆಯ ಗುಣಮಟ್ಟ ವೃದ್ಧಿಗೂ ಬಳಸಿಕೊಂಡಿದ್ದು ವಿಶೇಷ. 

ಫಲಶ್ರುತಿ:

*ಕಲೆಯ ಮೂಲಕ ಕಲಿಕೆ ನಿರೀಕ್ಷಿತ ಫಲ ನೀಡಿದೆ. ಪಠ್ಯವಸ್ತುವಿನ ಕಲಿಕೆಯ ಜತೆಗೆ ಮಕ್ಕಳು ತಮ್ಮ ಆಸಕ್ತಿಯ ಕಲೆಗಳಲ್ಲಿ ಪಳಗಲು ಇದು ಅವಕಾಶ ಮಾಡಿಕೊಟ್ಟಿದೆ. ಇದೊಂದು ಉತ್ತಮ ಪ್ರಯೋಗ. -ಶಂಕರ್, ಮುಖ್ಯ ಶಿಕ್ಷಕ ತಲ್ಲೂರು ಶಾಲೆ

ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಅನುಪಮಾ ಪ್ರಕಾಶ್
*ಈ ಪ್ರಯೋಗದ ಕಾರಣದಿಂದ ಶಾಲೆ ತೊರೆದ ಹಾಗೂ ಅನ್ಯ ಶಾಲೆಗಳತ್ತ ಮುಖ ಮಾಡಿರುವ ಮಕ್ಕಳನ್ನು ಆಕರ್ಷಿಸಿದೆ. ಸಾಕಷ್ಟು ಪ್ರತಿಭಾಶಾಲಿಯಾಗಿದ್ದ ನನ್ನ ಇಬ್ಬರು ಮಕ್ಕಳು ಈ ಪ್ರಯೋಗದಲ್ಲಿ ಪಾಲ್ಗೊಂಡು ಇನ್ನಷ್ಟು ಚುರುಕಾಗಿದ್ದಾರೆ. -ನಾಗೇಶ್ ಭಂಡಾರಿ ಎಸ್‌ಡಿಎಂಸಿ ಅಧ್ಯಕ್ಷ

*ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಅನುಪಮಾ ಪ್ರಕಾಶ್, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಂಗ ಅಧ್ಯಯನ ಕೇಂದ್ರ, ಕಲಾವಿದರಾದ ಪುರುಷೋತ್ತಮ ತಲವಾಟ ಸಾಗರ, ನಾ. ಶ್ರೀನಿವಾಸ ಮೈಸೂರು, ಗಣೇಶ್‍ಕುಮಾರ್ ಗಂಗೊಳ್ಳಿ, ಭಾರತಿ ಮರವಂತೆ, ಪ್ರಭಾಕರ ಆಚಾರ್ಯ, ಚಂದ್ರ ಬಂಕೇಶ್ವರ, ಯದುರಾಜ ಬೈಂದೂರು, ಜನಾರ್ದನ ಕೊಡವೂರು, ರಾಧಾ ಕೊಡಗು, ಸುಧಾಕರ ಪಿ. ಬೈಂದೂರು. ಪ್ರಭಾಕರ ಆಚಾರ್ಯ, ಸದಾನಂದ ಬೈಂದೂರು, ಉದಯ ಗಾಂವ್ಕರ್, ಶ್ರೀನಿವಾಸ್, ಕುಪ್ಪಯ್ಯ ಮರಾಠಿ, ಕಾಳಪ್ಪ,   ಶ್ರೀಧರ ಎಮ್.ಪಿ. ಮತ್ತು ಇತರರು, ಶಿಕ್ಷಣ ತಜ್ಞರು ಹೀಗೆ ಅನೇಕ ಪ್ರೇರಕರು ಈ ಪ್ರಯೋಗದ ಹಿಂದೆ ಇದ್ದಾರೆ. ಅವರೆಲ್ಲರಿಗೂ ಇದರ ಯಶಸ್ಸು ಸಲ್ಲುತ್ತದೆ. -ಗಣಪತಿ ಹೋಬಳಿದಾರ್, ವಿಭಿನ್ನ ಪ್ರಯೋಗದ ರೂವಾರಿ

-ಗಣಪತಿ ಹೋಬಳಿದಾರ್ ಸಂಪರ್ಕ: +91 9341975750
    Contact Ganapathi Hoblidar
Photos
ಕಾರ್ಯಕ್ರಮದ ರೂವಾರಿ ಗಣಪತಿ ಹೋಬಳಿದಾರ್










Kaleya mUlaka Kalika, 
ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com



Indian foundation for Arts presents Education Through Arts. Block resource person  Ganapathi Hoblidar Took this initiation in Talluru Primary school and succeeded...