ಕುಂದಾಪುರ - ಬೈಂದೂರು ಶಾಂತಿಯುತ ಮತದಾನ.

ಕುಂದಾಪುರ 76.37, ಬೈಂದೂರು ಶೇ.71.35ರಷ್ಟು ಮತದಾನ



ಕುಂದಾಪುರ : ಶಿವಮೊಗ್ಗ ಹಾಗೂ ಉಡುಪಿ ಚಿಕ್ಕಮಗಳೂರು  ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಕುಂದಾಪುರ ತಾಲೂಕಿನಲ್ಲಿ ಈ ಬಾರಿ ಶಾತಿಯುತ ಮತದಾನ ನಡೆದಿದ್ದು ಕುಂದಾಪುರ ಮತ್ತು ಬೈಂದೂರು ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.76.37 ಮತ್ತು ಶೇ.71.35ರಷ್ಟು ಮತದಾನ ನಡೆದಿದೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ 1,47,697 ಮತದಾರರು ಮತ ಚಲಾಯಿಸಿದ್ದು, ಆ ಪೈಕಿ 67325 ಪುರುಷರು. 80372 ಮಹಿಳೆಯರು ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಶೇ.71.35 ಮತದಾನವಾಗಿದೆ  
  ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1.43,861 ಮತದಾರರು ಮತ ಚಲಾಯಿಸಿದ್ದು, ಆ ಪೈಕಿ 67,359 ಪುರುಷರು, 76,502 ಮಹಿಳೆಯರು ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು ಶೇ.76.37 ಮತದಾನ ನಡೆದಿದೆ.
   .
ಹಳ್ಳಿಹೊಳೆಯಲ್ಲಿ ಶೇ,83ರಷ್ಟು ಮತದಾನ
  ನಕ್ಸಲ್ ಪೀಡಿತ ಪ್ರದೇಶವಾದ ಹಳ್ಳಿಹೊಳೆಯ ಮತಗಟ್ಟೆಯಲ್ಲಿ ಅತೀ ಹೆಚ್ಚು ಮತದಾನ  ನಡೆದಿದ್ದು ಮತದಾರರು ನಿರ್ಭಿತಿಯಿಂದ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಹಳ್ಳಿಹೊಳೆ ಮತಗಟ್ಟೆಯಲ್ಲಿ ಗರಿಷ್ಟ 83 ಶೇ, ಮತದಾನವಾಗಿದೆ.

ಮತದಾನದಲ್ಲಿ ಮಹಿಳೆಯರೇ ಮೇಲುಗೈ
ಶಿವಮೊಗ್ಗ ಮತ್ತು ಉಡುಪಿ ಚಿಕ್ಕಮಂಗಳೂರು ಲೋಕಸಭೆಗಳನ್ನೊಳಗೊಂಡಿರುವ ಕುಂದಾಪುರ ತಾಲೂಕಿನಲ್ಲಿ ಮಹಿಳೆಯೇ ಹೆಚ್ಚು ಮತದಾನ ಮಾಡಿ ಮೇಲುಗೈ ಸಾಧಿಸಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ 80372 ಮಹಿಳೆಯರು ಮತಚಲಾಯಿಸಿದ್ದರೇ, ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ 76,502 ಮತ ಚಲಾಯಿಸಿದ್ದಾರೆ.

ಕ್ಷೇತ್ರದಲ್ಲಿ ಮತದಾನ ಮಾಡಿದ ಪ್ರಮುಖರು
   ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಕೊರ್ಗಿಯ ಮತಗಟ್ಟೆಯಲ್ಲಿ ಮತಚಲಾಯಿಸಿದರೇ, ಶಾಸಕ ಗೋಪಾಲ್ ಪೂಜಾರಿ ಕಟ್ ಬೆಲ್ತೂರಿನಲ್ಲಿ ಮತ ಚಲಾಯಿಸಿದರು. ರಾಜಕೀಯ ಮುಖಂಡರುಗಳಾದ ಗಣಪತಿ ಟಿ. ಶ್ರೀಯಾನ್ ತೆಕ್ಕಟ್ಟೆಯಲ್ಲಿ, ಬಾಬು ಶೆಟ್ಟಿ ತಗ್ಗರ್ಸೆಯಲ್ಲಿ,  ಮನ್ಸೂರು ಮರವಂತೆಯಲ್ಲಿ ಮತದಾನ ಮಾಡಿದರು. ಬಿ. ಎಂ. ಸುಕುಮಾರ ಶೆಟ್ಟಿ, ರಂಜಿತ್ ಕುಮಾರ ಶೆಟ್ಟಿ, ಕೊಲ್ಲೂರು ರಮೇಶ್ ಗಾಣಿಗ,  ರಾಜೇಶ್ ಕಾವೇರಿ, ಕಿಶೋರ್ ಕುಮಾರ್, ಭಾಸ್ಜರ್ ನಾಯ್ಕ್, ಸುರೇಶ್ ಬಟವಾಡಿ ಮೊದಲಾದವರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. 
   ಯುವಕರು, ವೃದ್ಧರು, ಅಂಗವಿಕಲರು ಸೇರಿದಂತೆ ವಿವಿಧ ವರ್ಗಗಳ ಮತದಾರರು ಉತ್ಸುಕತೆಯಿಂದ ಮತ ಚಲಾಯಿಸುತ್ತಿದ್ದುದು ಕಂಡುಬಂತು.

ಗೆಲುವಿನ ಲೆಕ್ಕಾಚಾರ ಆರಂಭ
     ತಾಲೂಕಿನ ಎರಡೂ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿ ಮತದಾನವಾಗಿದ್ದು ಮತದಾರರು ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಮತದಾರ ಹೆಚ್ಚು ಪ್ರಾಶಸ್ತ್ಯ ನೀಡಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಲಿಷ್ಠರು ಹಾಗೂ ಹಾಗೂ ಹೊಸಬರ ನಡುವೆ ನೇರಾ ಹಣಾಹಣಿ ನಡೆದಿದ್ದರೆ, ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಅನುಭವಿಗಳು ಮತ್ತು ವ್ಯಕ್ತಿಪರವಾದ ಅಲೆಯ ನಡುವೆಯೇ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಕೊನೆಯಲ್ಲಿ ಮತದಾರ ಯಾರಿಗೆ ಜೈ ಎಂದಿದ್ದಾರೆ ಎಂದು ತಿಳಿಯಲು ಮೇ.16 ವರೆಗೆ ಕಾಯಬೇಕಾಗಿದೆ.







Photos by-  Dinesh, Jayshekar madappadi
Parliamentary Election Held peacefully in Kundapura taluk, Kundapura Taluk Includes Shimoga Parliament constituency and Udupi Chikkamangalore Constituency. Majority of Ladies participated on poll
'      ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com