ಕನ್ನಡಕ್ಕಾಗಿ ಕೈ ಎತ್ತೋಣ. ಕನ್ನಡಕ್ಕಾಗಿ ಚಿಂತಿಸೋಣ

’ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು| ಮೆಟ್ಟಿದರೇ ಕನ್ನಡ ಮಣ್ಣನ್ ಮೆಟ್ಟಬೇಕು’

    ಎಂಬ ಅಣ್ಣಾವ್ರ ಹಾಡು ಇಂದಿಗೂ ಕೇಳಿದೊಡನೆ ಮೈಯಲ್ಲಿ ರೋಮಾಂಚನ ವಾಗುತ್ತದೆ. ಅಷ್ಟೆ ಏಕೆ ಸುಮಾರು ೧೦ನೇ ಶತಮಾನದಲ್ಲಿಯೇ ಬನವಾಸಿ ಕರ್ನಾಟಕವೆಂದು, ಪ್ರಪ್ರಥಮ ಕನ್ನಡ ಸಾಮ್ರಾಜ್ಯವೆಂದು ಖ್ಯಾತವಾಗಿದ್ದು, ಬನವಾಸಿಯ ಬಗ್ಗೆ ಆದಿಕವಿ ಪಂಪ ಅದಾಗಲೇ, ಅಂಕುಶದಿಂದ ತಿವಿದರೂ ನೆನೆವುದೆನ್ನ ಮನಂ ಬನವಾಸಿ ದೇಶಮಮ್, ಹುಟ್ಟಿದರೆ ಬನವಾಸಿಯಲ್ಲಿ ಹುಟ್ಟಬೇಕು ಅದು ಸ್ವರ್ಗದ ನಂದನ, ಮನುಷ್ಯನಾಗಿ ಹುಟ್ಟದಿದ್ದರೂ, ದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್ಟಬೇಕು ಎಂದಿದ್ದ... ಇದು  ಕರ್ನಾಟಕಕ್ಕಿರುವ ಶಕ್ತಿ ಎನಿಸದೇ ಇರಲಾರದು. ಅಲ್ಲದೇ...ಕರ್ನಾಟಕ, ಕನ್ನಡದ ಆವೈಶಾಲ್ಯತೆ ಅಂದಿನಿಂದ-ಇಂದಿನವರೆಗೂ ಹಾಗೇ ಉಳಿಸಿಕೊಂಡಿದ್ದು ಇಂದಿಗೂ ಅಮರವಾಗಿದೆ. ಅದು ಕನ್ನಡದ ಪವರ್...ಕರ್ನಾಟಕದ ಖದರ್......ಇಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಇನ್ನೇಳು ಜನ್ಮವಿದ್ದರೆ ಇಲ್ಲೆ ಹುಟ್ಟಬೇಕು ಎಂಬ ಮಮಕಾರ ಬರದೆ ಇರದು... ಹಿಂದಿನ ಹಿರಿಯ ರಾಜಮನೆತನದಿಂದ ಹಿಡಿದು ಇಂದಿನ ವಿಜ್ಞಾನ ಯುಗದ ಮಂಗಳನ ಅಂಗಳದ ಯಶಸ್ವಿ ಪಯಣದವರೆಗೂ ಕರ್ನಾಟಕದವರ ಗರಿಮೆ, ಹಿರಿಮೆ, ಸಾಧನೆ ಅಪಾರ.
     
ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಈಗಿನ ಕರ್ನಾಟಕವು ಹಲವು ಸಾಮಂತರ ಹಾಗೂ ರಾಜರುಗಳ ನಡುವೆ ಹಂಚಿ ಹೋಗಿತ್ತು. ಇದಾದ ನಂತರ ಭಾರತಕ್ಕೆ ಬಂದ ಬ್ರಿಟಿಷರ ಕಾಲದಲ್ಲಿ ಆಡಳಿತದ ಅನೂಕೂಲಕ್ಕಾಗಿ ೨೦ ವಿವಿಧ ಸಂಸ್ಥಾನಗಳಲ್ಲಿ ಕರ್ನಾಟಕ ಹಂಚಿ ಹೋಯಿತು, ಇದರಲ್ಲಿ ಪ್ರಮುಖವಾಗಿ ಮೈಸೂರು ಸಂಸ್ಥಾನ, ನಿಜಾಮರ ಸಂಸ್ಥಾನ, ಬಾಂಬೆ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ, ಹಾಗೂ ಕೊಡಗು ಪ್ರಾಂತ್ಯಗಳು ಪ್ರಮುಖವಾಗಿದ್ದವು. ಆಗ ಮೈಸೂರು ಪ್ರಾಂತ್ಯದಿಂದ ಮೂರನೇ ಎರಡು ಭಾಗದಷ್ಟು ಕನ್ನಡಿಗರು ಹೊರಗಿದ್ದರು. ಬಾಂಬೆ ಪ್ರಾಂತ್ಯದಲ್ಲಿ ಮರಾಠಿ, ಮದ್ರಾಸ್‌ನಲ್ಲಿ ತಮಿಳು ಆಡಳಿತ ಭಾಷೆಯಾಗಿ ಮೆರೆಯುತ್ತಿತ್ತು. ಇವೆಲ್ಲದರ ನಡುವೆ ಕನ್ನಡ ಅನಾಥವಾಗಿತ್ತು, ಆಗಲೇ ಕನ್ನಡಿಗರಿಗೆ ಅನಿಸಿತ್ತು ನಾವು ಪರಕೀಯರಂತೆ ಬಾಳುತ್ತ್ತಿದ್ದೇವೆ. ನಮ್ಮ ಮೇಲೆ ಅನ್ಯಭಾಷೆಯ ಹೇರಿಕೆಯಾಗುತ್ತಿದೆ.
       ನಮಗೂ ಒಂದು ರಾಜ್ಯ ವಿರಬೇಕು, ಎಲ್ಲಾ ಹಕ್ಕುಗಳು ದೊರೆಯುವಂತಿರಬೇಕು ಎಂದು  ಈ ಹಂಬಲ ಎಲ್ಲರ ಮನದಲ್ಲಿ ಮನೆ ಮಾಡಿತು ಇದೇ ಕರ್ನಾಟಕದ ಏಕೀಕರಣಕ್ಕೆ ನಾಂದಿಯಾಯಿತು.
       ನಾಡಿನ ಹಿರಿಯ ಸಾಹಿತಿಗಳು, ಪತ್ರಕರ್ತರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ಮಹನೀಯರು, ಮಹಿಳೆಯರು, ಎಲ್ಲರ ಹೋರಾಟದಿಂದ ೧೯೫೬ ನವೆಂಬರ್ ೧ ರಂದು ಹರಿದು ಹಂಚಿದ್ದ ಪ್ರಾಂತ್ಯಗಳೆಲ್ಲವನ್ನು ಒಂದಾಗಿಸಿಏಕೀಕರಣಗೊಳಿಸಲಾಯಿತು, ಅಂದಿನ ಈ ದಿನವನ್ನೇ ಕನ್ನಡ ರಾಜ್ಯೋತ್ಸವದಿನ ಇಂದು ಆಚರಿಸಲಾಗುತ್ತಿದೆ. ಹಾಗೆಯೇ ಕೇವಲ ನವೆಂಬರ್ ಮಾತ್ರವಲ್ಲದೇ ಇಡೀ ನವೆಂಬರ್ ತಿಂಗಳನ್ನ ರಾಜ್ಯ್ಸೋತ್ಸವ ತಿಂಗಳೆಂದು ಕೆಲವು ಕಡೆ ಆಚರಿಸುತ್ತಿರುವುದು ಸಂತೋಷದ ವಿಚಾರ.ಆದರೆ ಈ ನಮ್ಮ ಸಂಭ್ರಮ ಸಡಗರ ನವೆಂಬರ್ ತಿಂಗಳಿಗೆ ಮಾತ್ರ ಯಾಕೆ ಸೀಮಿತವಾಗಿಟ್ಟುಕೊಳ್ಳಬೇಕು.ವರ್ಷಪೂರ್ತಿ ಆಚರಿಸಿದರೇನಾಗುತ್ತದೆ ? ನಾಡು ನುಡಿಯನ್ನ ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ? ನಾವು ಎದುರಿಸುತ್ತಿರುವ ಸಮಸ್ಯೆ ಎನು? ನಾವು ಕನ್ನಡಿಗರಾಗಿ, ಮಾಡಬೇಕಾದ ಸಂಗತಿಗಳೆನು ಎಂಬುದರ ಕುರಿತು ಗಂಭೀರ ಸ್ವರೂಪದ ಚರ್ಚೆ, ವಿಚಾರ ಸಮಾಲೋಚನೆ ಚಿಂತನೆಗಳನ್ನ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ರಾಜ್ಯೋತ್ಸವವೆನ್ನುವುದು ಒಂದು ವಾರ್ಷಿಕ ಜಾತ್ರೆಯಾಗಿರುವುದು ವಿಪರ‍್ಯಾಸ. ಅಂತೆಯೇ ನವೆಂಬರ್ ತಿಂಗಳಾದ ಬಳಿಕ ಕನ್ನಡ ನಾಡು-ನುಡಿಯ ಬಗ್ಗೆ ನಾವ್ಯಾರು ತಲೆಕೆಡಿಸಿಕೊಳ್ಳಲು ಹೋಗದಿರುವುದು ವಿಷಾದಕರ ಅದು ನಮ್ಮ ದುರದೃಷ್ಟವೇ ಹೌದು. ಹಿಂದೆ ಅನ್ಯಭಾಷೆಯಿಂದ ಕನ್ನಡವನ್ನ ರಕ್ಷಿಸಬೇಕೆಂಬ ದೆಸೆಯಿಂದ ಕರ್ನಾಟಕ ಏಕೀಕರಣ ಮಾಡಿದರು. ಆದರೆ ಇಂದು ನಾವು ಅದನ್ನ ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಿದ್ದೇವೆ. ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಈ ಕುರಿತು ಪ್ರಾಮಾಣಿಕವಾಗಿ ಆಲೋಚಿಸಿದರೆ, ಹೊಳೆಯವ ಸತ್ಯಸಂಗತಿಯೆಂದರೆ ಕನ್ನಡದ ಅಳಿವಿಗೆ ಕನ್ನಡ ಮೂಲೆಗುಂಪಾಗುತ್ತಿರುವುದಕ್ಕೆ ಕನ್ನಡಿಗರೇ ಕಾರಣ. ಕನ್ನಡಿಗರ ಸಂಖ್ಯೆ ಒಂದು ಸಣ್ಣ ಸಂಖ್ಯೆಯಲ್ಲ. ಅದು ಐದುಕೋಟಿಯಿಂದ ೬ ಕೋಟಿಗೆ ಹೆಜ್ಜೆಯಿಟ್ಟಿರುವ ಒಂದು ದೊಡ್ಡ ಬೆಟ್ಟ. ಇವರಿಷ್ಟು ಜನ ಮನಸ್ಸು ಮಾಡಿದರೆ, ಅದೇನೋ ಸಾಧನೆಯಾಗುತ್ತದೆಯೇ ಎಂಬುದೂ ಸಹ ಕಲ್ಪನೆಗೆ ನಿಲುಕದು. ಆದರೆ ಇಂದಿನ ಜನ ನಮ್ಮ ಭಾಷೆಯನ್ನು ಬಿಟ್ಟು ಅನ್ಯಭಾಷೆಗೆ ಮಾರುಹೋಗುತ್ತಿರುವುದು ವಿಪರ‍್ಯಾಸವಾಗಿದೆ.
    ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುವ ಕನ್ನಡಿಗರು ಅತ್ತ ಕನ್ನಡವೂ ಅಲ್ಲದೆ ಇತ್ತ ಇಂಗ್ಲೀಷೂ ಅಲ್ಲದೆ ಕಂಗ್ಲಿಷ್‌ನ ಮೊರೆ ಹೋಗುತ್ತಿರುವುದು ಯಾವ  ಪುರುಷಾರ್ಥಕ್ಕಾಗಿಯೋ ತಿಳಿಯುತ್ತಿಲ್ಲ....
      ನಮ್ಮ ಭಾಷೆಗೆ ಮತ್ತು ನಮಗೆ ಒಂದೂವರೆ ಸಾವಿರ ವರ್ಷಗಳ ಭವ್ಯ ಇತಿಹಾಸವಿದ್ದರೂ ನಮ್ಮವರಿಗೆ ನಮ್ಮ ನಾಡು-ನುಡಿಯ ಬಗ್ಗೆ ಅಭಿಮಾನ. ಕೇವಲ ನವೆಂಬರ್ ಮಾಸಕ್ಕೆ ಮಾತ್ರ ಸೀಮಿತವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಇಂದಿಗೂ ಸಹ ಕನ್ನಡ ಮತ್ತು ಕರ್ನಾಟಕವನ್ನ್ನು ಹೆಚ್ಚಾಗಿ ಮೆಚ್ಚುವವರು ಕನ್ನಡಿಗರೇ ಎಂದು ಹೇಳಲಾಗುತ್ತದೆ. ಅದನ್ನು ಸರಿಯಾಗಿ ಗಮನಿಸಿದರೆ ಹೌದು ಎನಿಸುತ್ತದೆ. ಎಲ್ಲೋ ದೂರದಲ್ಲಿದ್ದ ಕನ್ನಡಿಗ ನಾನು ಕರ್ನಾಟಕದವನು, ಕನ್ನಡದವನು ಎಂದು ದಿನಕ್ಕೊಮ್ಮೆಯಾದರೂ ಎಣಿಸಿಕೊಳ್ಳುತ್ತಾನಂತೆ. ಆದರೆ ಇಲ್ಲೇ ಇರುವ ನಾವುಗಳು ಇದೆಲ್ಲವನ್ನು ಮರೆತು ಅನ್ಯರಂತೆ ವರ್ತಿಸುತ್ತಾ ಕಾಲಹರಣ ಮಾಡುತ್ತೇವೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಬಗ್ಗೆ ಕನ್ನಡೇತರರು ವ್ಯಕ್ತಪಡಿಸುವುದಕ್ಕಿಂತ ಜಾಸ್ತಿ ಪ್ರೀತಿ ನಾವು ಬೆಳೆಸಿಕೊಳ್ಳಬೇಕು, ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ನಮ್ಮ ಸ್ವತ್ತು. ಅದನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ದಾಗಬೇಕು. ಕನ್ನಡವನ್ನು ಬೆಳೆಸಲು ಕನ್ನಡದ ಮೇಲಿನ ಪ್ರೀತಿ ಸಾಕು,ಹೋರಾಟದ ಅಗತ್ಯವಿಲ್ಲ.
      ನಮ್ಮ ಸ್ವಂತಿಕೆ ಯಾವಾಗಲೂ ನಮ್ಮ ಕೈಯಲ್ಲಿರ ಬೇಕು. ಕೇವಲ ನವೆಂಬರ್‌ತಿಂಗಳಿಗೆ ಮಾತ್ರ ಸೀಮಿತವಾಗಿರದೇ ಇಡೀ ವರ್ಷ ಕನ್ನಡದ ಹಬ್ಬವನ್ನು ಆಚರಿಸಬೇಕು ನಮಗೆ ನಮ್ಮದೇ ಆದ ಸಂಸ್ಕೃತಿ ಇದ್ದು ಅದನ್ನು ಬೆಳೆಸಬೇಕು ಈಗಾಗಲೇ ಹಲವಾರು ನಡಿಗೆಯಲ್ಲಿ ನಾವೇ ಪ್ರಮುಖರಾಗಿದ್ದು, ಇನ್ನೂ ಹೊಸ-ಹೊಸ ಸಾಧನೆ ಸಾಧಿಸುವ ಛಲನಮ್ಮದಾಗಬೇಕು. ನಾವು ಮೊದಲು ಕನ್ನಡಿಗರಾಗಿರಬೇಕು ಹಾಗೇ ಕನ್ನಡದ ಕಾವಲಿಗರು ಆಗಬೇಕು. ಹಾಗಂತ ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪುಕಲ್ಪನೆ ಖಂಡಿತ ಸರಿಯಲ. ಭಾರತದಂತಹ ವಿಶಾಲ ಬಾಹುಳ್ಯವಿರುವ ದೇಶದಲ್ಲಿ ರಾಜ್ಯಕ್ಕೊಂದು, ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ, ಹಲವು ಭಾಷೆಗಳ ವೈವಿಧ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಗಮನಿಸಿದರೆ ಹಲವಾರು ಬಗೆಗಳಿವೆ. ಬೆಂಗಳೂರಿನಲ್ಲಿ ಕಂಗ್ಲೀಷ್ ಕನ್ನಡ, ಮೈಸೂರಿನಲ್ಲಿ ಮೆಲುದನಿ ಕನ್ನಡ, ಧಾರಾವಾಡದಲ್ಲಿ ಗಂಡು ಕನ್ನಡ, ದಕ್ಷಿಣ ಕನ್ನಡದಲ್ಲಿ ಗ್ರಾಂಥಿಕ ಕನ್ನಡ, ಕಾಸರಗೋಡಿನಲ್ಲಿ ಮಲೆಯಾಳಿ ಕನ್ನಡ,   ಹೈದರಾಬಾದ್ ಕರ್ನಾಟಕದಲ್ಲಿ ಉರ್ದುಮಿಶ್ರಿತ ಕನ್ನಡ, ಹೀಗೆ ಹತ್ತು ಹಲವು ಭಾಷೆಗಳ ವೈವಿಧ್ಯದ ಬೀಡು ನಮ್ಮ ಕರ್ನಾಟಕ. ಎಲ್ಲವೂ ನಮ್ಮಮ್ಮನ ವಿವಿಧ ರೂಪಗಳು ನಾವು ಅಮ್ಮನ ಮಕ್ಕಳು. ಕರ್ನಾಟಕದ ಮಾತೆಯ ಸಿರಿ ಇದು  ಕೇವಲ ನಾನು ನಮ್ಮದು ಎಂದು ಸಂಘರ್ಷಕ್ಕಿಳಿಯುವ ಬದಲು ಸಾಮರಸ್ಯದಿಂದ ನಮ್ಮದು ಎಂದು ಒಗ್ಗಟ್ಟಿನಲ್ಲಿ ಬೆಳೆಯೋಣ. ಪ್ರತಿಮನೆ ಮನದಲ್ಲೂ ಕನ್ನಡದ ಕಂಪನ್ನ ಪಸರಿಸಿ, ರಾಜ್ಯದ ಹಿತರಕ್ಷಣೆಯ ಜೊತೆಗೆ ರಾಷ್ಟ್ರದ ಹಿತರಕ್ಷಣೆಯನ್ನು ಕಾಪಾಡೋಣ.
ಕನ್ನಡಕ್ಕಾಗಿ ಕೈಯೆತ್ತೋಣ......  ಕನ್ನಡಕ್ಕಾಗಿ ಚಿಂತಿಸೋಣ.......
ಹೊಸ ಹೊಸ ಆಯಾಮಗಳ ಜೊತೆ ಕಲೆ ಸಂಸ್ಕೃತಿ, ಸಾಹಿತ್ಯ, ಸಂಪರ್ಕದಲ್ಲಿ ಕನ್ನಡವನ್ನೇ ಎತ್ತಿ ಹಿಡಿಯೋಣ. ಪ್ರತಿ ದಿನವೂ ರಾಜ್ಯದಲ್ಲಿ ಕನ್ನಡ ಉತ್ಸವ ಮಾಡೋಣ....
-ಸಂದೀಪ್ ಶೆಟ್ಟಿ ಹೆಗ್ಗದ್ದೆ 
ಯುವ ಸಾಹಿತಿ

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com