ಕುಂದಾಪುರದ ಹುಡುಗಿ ಮರ್ಡರ್, ಪೆಟ್ರೋಲ್ ಬಂಕ್ ಗೆ ಬೆಂಕಿ!

ಇದು ವಾಟ್ಸ್ಆ್ಯಪ್ ಕಿಡಿಗೇಡಿಗಳು ಹರಿಬಿಟ್ಟ ಸುಳ್ಳಿನ ಕಂತೆ!  

 ಒಂದೆರಡು ದಿನಗಳಿಂದಿಚೆಗೆ ಕುಂದಾಪುರದ ಹಲವು ಮಂದಿಯ ವಾಟ್ಸ್ಆ್ಯಪ್ ನಲ್ಲಿ ಆಘಾತಕಾರಿಯಾದ ಸುದ್ದಿಗಳು ಹರಿದಾಡುತ್ತಿದೆ. ಘಟನೆ ನಡೆದದ್ದು ಯಾವಾಗ, ಯಾವ ಏರಿಯಾದಲ್ಲಿ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದರೂ ಅದಕ್ಕೊಂದು ಉತ್ತರ ಕಂಡುಕೊಳ್ಳುವ ಮೊದಲೇ ಆ ಸಂದೇಶ ಮತ್ತೊಬ್ಬರಿಗೆ ರವಾನಿಯಾಗುತ್ತಿದೆ. ಆದರೆ ಯಾರೋಬ್ಬರಿಗೂ ಆ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಪೋಟೋ ನೋಡಿದವರು ಒಂದು ಕ್ಷಣವೂ ಯೋಚಿಸದೆ ಪತ್ರಕರ್ತರು, ಪೊಲೀಸರುಗಳಿಗೆ ಪೋನಾಯಿಸುತ್ತಿದ್ದಾರೆ. ಅದು ಕುಂದಾಪುರದಲ್ಲಿ ನಡೆದ ಪ್ರಕರಣವಲ್ಲ ಎಂದು ಮನವರಿಕೆ ಮಾಡುವಲ್ಲಿ ಕೆಲವು ಪತ್ರಕರ್ತರು ಸುಸ್ತಾಗಿದ್ದಾರೆ.

      ಹೌದು. ವಾಟ್ಸ್ಆ್ಯಪ್ ನಲ್ಲಿ ಬಂದ ಈ ಸುಳ್ಳು ಸಂದೇಶ ಕುಂದಾಪುರಿಗರನ್ನು ಕೆಲಹೊತ್ತು ಗೊಂದಲಕ್ಕೀಡು ಮಾಡಿದ್ದಂತೂ ಸತ್ಯ. ಒಬ್ಬರಿಂದ ಮತ್ತೋಬ್ಬರಿಗೆ, ಒಂದು ಗ್ರೂಫ್ ನಿಂದ ಮತ್ತೊಂದು ಗ್ರೂಫಿಗೆ ಕ್ಷಣ ಮಾತ್ರದಲ್ಲಿ ಶೇರ್ ಆಗಿರುವುದನ್ನು ಗಮನಿಸಿದರೆ ಘಟನೆಯ ಮೂಲವನ್ನು ಅರಿಯದವರು ಇದನ್ನು ಗಂಭೀರವಾಗಿ ತೆಗೆದುಕೊಂಡದ್ದು ಸ್ಪಷ್ಟವಾಗುತ್ತದೆ. ಹೆಚ್ಚಿನ ಮಂದಿ ಅದನ್ನು ಓದಲೂ ಇಲ್ಲ. ಲ್ಯಾಂಡ್ ಮಾರ್ಕ್ ಗಳನ್ನು ನೋಡಿಯೂ ಇಲ್ಲ. ಚಿತ್ರಗಳನ್ನು ನೋಡಿದವರೆ ತಮ್ಮ ಫಾರ್ವರ್ಡ್ ಕೆಲಸವನ್ನು ಶುರುವಿಟ್ಟುಕೊಂಡಿದ್ದಾರೆ. ಆ ಮೂಲಕ ಎಲ್ಲರಿಗೂ ತಪ್ಪು ಮಾಹಿತಿಯನ್ನು ಹರಡಿ ತಮ್ಮ ತಮ್ಮ ಹುಚ್ಚು ಖಯಾಲಿಯನ್ನು ತೋರ್ಪಡಿಸಿಕೊಂಡಿದ್ದಾರೆ.

ಏನದು ಸಂದೇಶ:
1. ಕುಂದಾಪುರದ ಯುವತಿಯನ್ನು ಯಾರೊ ದುಷ್ಕರ್ಮಿಗಳು ಅತ್ಯಚಾರ ಮಾಡಿ ರಸ್ತೆ ಬದಿಯಲ್ಲಿ ಅವಳ ಕುತ್ತಿಗೆಗೆ ಕತ್ತಿ ಹಾಕಿದ ಘಟನೆ ನಡೆದಿದೆ ಮತ್ತು ಯುವತಿಯ ಹೆಸರು ವಿಳಾಸ ಇನ್ನು ಯಾವುದೇ ಮಾಹಿತಿ ತಿಳಿದು ಬಂದಿಲ್ಲ.  ದುಷ್ಕರ್ಮಿ ಕಾಮುಕರನ್ನು ಹುಡುಕುಲು ಪೊಲಿಸರು ತನಿಖೆ ಮುಂದುವರೆಸಿದ್ದಾರೆ.  ಇದಕ್ಕೆ ಸಂಬಂದಪಟ್ಟ  ಆ ಯುವತಿಯ ಶವದ ಚಿತ್ರವನ್ನು ಈ ಕೆಳಗೆ ಬಿಡುಗಡೆ ಮಾಡಲಾಗಿದೆ.  ದಯವಿಟ್ಟು ಅದನ್ನು ವಿಕ್ಷಿಸಿ.  ಆ ಯುವತಿಯು ಯಾರಿಗಾದ್ರೂ ಪರಿಚಯ ವಿದ್ದರೆ ಸಂಬಂದಪಟ್ಟವರಿಗೆ ವಿಷಯ ತಿಳಿಸಿರಿ - ಹೀಗೆ ಬರೆದು ಅದರ ಕೆಳಗೆ ಎರಡು ಚಿತ್ರಗಳನ್ನು ಹಾಕಲಾಗಿತ್ತು.

2. ಕುಂದಾಪುರದ ಪೆಟ್ರೋಲ್ ಬಂಕಿಗೆ ಬೆಂಕಿ. - ಹೀಗೆ ಕುಂದಾಪುರದ ಪೆಟ್ರೋಲ್ ಬಂಕ್ ಗೆ ಬೆಂಕಿ ಬಿದ್ದಿದೆ ಎಂದು ಎರಡು ಪೋಟೋ ಹರಿದಾಟುತ್ತಿದ್ದವು.

ಘಟನೆ ನಿಜವೇ?
      ಘಟನೆ ನಡೆದಿದ್ದೇನೊ ನಿಜವೇ ಆದರೂ ಅದು ಕುಂದಾಪುರದ್ದಲ್ಲ. ರೇಪ್ & ಮರ್ಡರ್ ನಡೆದದ್ದು ಎಲ್ಲಿ ಎಂಬ ಕುರಿತು ನಿಖರವಾದ ಮಾಹಿತಿ ಇಲ್ಲ. ಘಟನೆ ನಡೆದ ಸ್ಥಳ ಹಾಗೂ ಚಿತ್ರದಲ್ಲಿರುವ ಪೊಲೀಸರು ಈ ಭಾಗದವರೂ ಅಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತೆ. ಯಾವುದೋ ಅಂತರ್ಜಾಲದ ಕಿಡಿಗೇಡಿ ಈ ಹಿಂದೆ ಮುಂದೆ ನೋಡದೇ ಎಲ್ಲಿಯದೋ ಘಟನೆಯನ್ನು ಕುಂದಾಪುರದೊಂದಿಗೆ ಬೆಸೆಯುವ ಕೆಲವನ್ನು ಮಾಡಿದ್ದಾನೆ.

      ಪೆಟ್ರೋಲ್ ಬಂಕ್ ಗೆ ಬೆಂಕಿ ಬಿದ್ದದ್ದು ಮುಂಬೈ ನಗರದ ಯಾವುದೋ ಒಂದು ಏರಿಯಾದಲ್ಲಿ. ಅದು ಕುಂದಾಪುರ, ಬೈಂದೂರಿನಲ್ಲಿ ನಡೆದಿದೆ ಎಂದು ಸುಳ್ಳು ಮಾಹಿತಿಯನ್ನು ರವಾನಿಸಲಾಯಿತು.

ಪೊಲೀಸರು-ಪತ್ರಕರ್ತರಿಗೆ ಪೋನು...
      ಘಟನೆಯ ಬಗ್ಗೆ ಸರಿಯಾಗಿ ಅರಿಯದವರು ಪತ್ರಕರ್ತರುಗಳಿಗೆ ಪೋನಾಯಿಸಿ, ಘಟನೆ ನಡೆದದ್ದು ನಿಜವೇ ಎಂದು ಕೇಳುತ್ತಿದ್ದುದು ಸಾಮಾನ್ಯವಾಗಿತ್ತು. ಪತ್ರಕರ್ತರಿಗೂ ಪ್ರಕರಣ ಕುಂದಾಪುರದ್ದಲ್ಲ ಎಂಬ ಸಂಶಯವಿದ್ದರೂ ದೃಢಪಡಿಸಿಕೊಳ್ಳಲು ಪೊಲೀಸ್ ಮಿತ್ರರುಗಳಿಗೆ ಪೋನಾಯಿಸುತ್ತಿದ್ದರು. ವಾಟ್ಸ್ಆ್ಯಪ್ ನ ನಲ್ಲಿ ನಡೆದ ಈ ಯಡವಟ್ಟು ಎಲ್ಲರಿಗೂ ಕಿರಿಕಿರಿಯನ್ನುಂಟುಮಾಡಿದ್ದಂತೂ ನಿಜ.

ಇದೇ ಮೊದಲೇನಲ್ಲ
      ತಂತ್ರಜ್ಞಾನದ ದುರ್ಬಳಕೆ, ಅಂತರ್ಜಾಲ ಮೂಲಕ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿರುವುದು ಇದೇ ಮೊದಲಲ್ಲ. ಕುಂದಾಪುರದವರಿಗೂ ಇದರ ಅನುಭವ ಸಾಕಷ್ಟು ಭಾರಿ ಆಗಿದೆ. ಅದರಲ್ಲೂ ಕಾಲೇಜು ಹುಡುಗಿಯರ ವಿಚಾರದಲ್ಲಿ ಸಾಕಷ್ಟು ಅಶ್ಲೀಲ ಚಿತ್ರಗಳು ರವಾನೆಯಾದ ಉದಾಹರಣೆಗಳಿವೆ. ಆದರೆ ಅವರ್ಯಾರೂ ಕುಂದಾಪುರದವರಲ್ಲ ಎಂಬ ಅಂಶ ಕೊನೆಗೆ ಅರಿವಾಗಿದೆ. ಘಟನೆಯನ್ನು ವೇಗವಾಗಿ ಇತರರಿಗೆ ತಿಳಿಸಬೇಕೆನ್ನುವ ಖಯಾಲಿ, ಅದನ್ನು ಫಾರ್ವರ್ಡ್ ಮಾಡುವ ಮೂಲಕ ಅನುಭವಿಸುವ ವಿಕೃತ ಸುಖ ಇದು ನೇರವಾಗಿ ಬೇರೊಬ್ಬರಿಗೆ ತಲೆನೋವನ್ನುಂಟಮಾಡುತ್ತಿದೆ. ಮಾತ್ರವಲ್ಲ ಘಟನೆ ನಿಜವಾಗಿದ್ದರೇ ಅದರ ಸಂತ್ರಸ್ಥರು ಅಚಾತುರ್ಯದಿಂದಾದ ತಪ್ಪಿಗೆ ಯಾರ್ಯಾರದೋ ಎದುರು ಮಾನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ
      ವಾಟ್ಸ್ಆ್ಯಪ್ ನಲ್ಲಿ ಸೈಬರ್ ಅಪರಾಧಗಳು ಘಟಿಸುವುದು ಪೊಲೀಸರಿಗೂ ತಿಳಿಯದ ವಿಚಾರವೇನಲ್ಲ. ಬಹಳಷ್ಟು ಹಿರಿಕಿರಿಯ ಅಧಿಕಾರಿಗಳು ವಾಟ್ಸ್ಆ್ಯಪ್ ನಲ್ಲಿ ಸಕ್ರೀಯರಾಗಿರುವುದರಿಂದ ಸುಲಭವಾಗಿ ಇಂತಹ ಸಂದೇಶಗಳು ಅವರ ಮೊಬೈಲ್ ಗಳಿಗೂ ರವಾನೆಯಾಗಿರುತ್ತದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಕಿಡಿಗೇಡಿಗಳ ವಿರುದ್ಧ ಮೂಲಾಜಿಲ್ಲದೇ ಶಿಸ್ತುಕ್ರಮ ಜರುಗಿಸಲು ಇಲಾಖೆ ಮುಂದಾಗಬೇಕಿದೆ. ಸ್ವಯಂ ಪ್ರಕರಣಗಳನ್ನು ದಾಖಲಿಸಿಕೊಂಡು, ಇಂತಹ ಸಂದೇಶಗಳು ಹರಡುವ ಮೂಲ ಪುರುಷರನ್ನು ಬಂಧಿಸಿ ಉಳಿದವರನ್ನೂ ಎಚ್ಚರಿಸುವ ಕೆಲಸ ಮಾಡಬೇಕಿದೆ.

ಸುತ್ತಲೂ ಕ್ಯಾಮರಾವಿದೆ ಎಚ್ಚರ!
      ಎಲ್ಲರ ಕೈಯಲ್ಲೂ ಕ್ಯಾಮರಾ ಮೊಬೈಲ್ ಗಳಿರುವುದರಿಂದ ಇಂದು ಯಾವ ವಿಚಾರವೂ ಗೌಪ್ಯವಾಗಿ ಉಳಿಯುತ್ತಿಲ್ಲ. ಸಾಮಾಜಿಕ ತಾಣಗಳ ಮೂಲಕ ಕ್ಷಣಾರ್ಥದಲ್ಲಿ ಎಲ್ಲವೂ ಜಗಜ್ಜಾಹೀರಾಗುತ್ತಿದೆ. ಅಪಘಾತವಿರಲಿ, ಅತ್ಯಾಚಾರದ ದೃಷ್ಯಗಳಿಲಿ ಅಥವಾ ಪ್ರೇಮಿಗಳ ಖಾಸಗಿ ಕ್ಷಣಗಳಿರಲಿ ಎಲ್ಲವನ್ನೂ ಮೂಲಾಜಿಲ್ಲದೇ ಶೇರ್ ಮಾಡಿ ವಿಕೃತಿಯನ್ನು ಮೇರೆಯುವ ಮನಸ್ಸುಗಳು ಇಂದು ಹೆಚ್ಚಾಗುತ್ತಿದೆ. ಯುವತಿಯರು ಈ ಬಗ್ಗೆ ತಿಳಿದೂ ಮೋಸ ಹೋಗುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಆಗುವ ಅವಾಂತರಗೇ ಹೆಚ್ಚು ಎಂಬುದು ನೆನಪಿರಲಿ.

ಇಂತಹ ಪ್ರಕರಣದ ವಿರುದ್ಧ ಸುಪ್ರಿಂ ಕೋರ್ಟ್ ಗರಂ ಆಗಿತ್ತು
      ಹೈದರಾಬಾದಿನ ಸಾಮಾಜಿಕ ಕಾರ್ಯಕರ್ತೆ ಸುನೀತ ಕೃಷ್ಣನ್ ಎಂಬುವವರು ಸಾಮಾಜಿಕ ತಾಣಗಳ ಮೂಲಕ 'ಶೇಮ್ ದ ರೇಪಿಸ್ಟ್' ಎನ್ನುವ ಚಳವಳಿಯನ್ನು 2015ರ ಮಾರ್ಚ್‌ನಲ್ಲಿ ಆರಂಭಿಸಿದ್ದರು. ಅವರು ಅಂತರ್ಜಾಲದಲ್ಲಿ ಅತಿಯಾಗಿ ಓಡಾಡುತ್ತಿದ್ದ 9 ಅಶ್ಲೀಲ ದೃಶ್ಯಗಳನ್ನು ಪೆನ್‌ಡ್ರೈವ್‌ನಲ್ಲಿ ಹಾಕಿ  ಸುಪ್ರೀಂ ಕೋರ್ಟ್ ಗಮನಕ್ಕೂ ತಂದಿದ್ದರ ಪರಿಣಾಮ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೊರ್ಟ್ ಸಮಗ್ರ ತನಿಖೆಗೆ ಆದೇಶಿಸಿತ್ತು. ಯುವತಿಯರು, ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದೃಶ್ಯಗಳನ್ನು ಅಂತರ್ಜಾಲ ಮತ್ತು ವಾಟ್ಸ್‌ಆ್ಯಪ್ ಸೇರಿದಂತೆ ಇನ್ನಿತರೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿಬಿಡಲಾಗಿರುವ ಕುರಿತಂತೆ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. 

      ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಹೈದರಾಬಾದ್‌ನಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಈ ಹಿಂದೆಯೇ ಒಡಿಸ್ಸಾ ಮೂಲದ ಇಬ್ಬರನ್ನು ಬಂಧಿಸಿದ್ದರು. ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಬಳಿಕ ಸಂದರ್ಭದಲ್ಲಿ ಬೆಂಗಳೂರಿನ ಆರೋಪಿಯೊಬ್ಬನನ್ನು ಬಂಧಿಸಿರುವುದು ಇತ್ತಿಚಿಗೆ  ವರದಿಯಾಗಿದೆ.

ಅಂದಹಾಗೆ ಸಮಾಜದ ಸ್ವಾಸ್ಥ್ಯ ಕಡೆಸುವ ಘಟನೆ ಎಲ್ಲಿಯೇ ನಡೆಯಲಿ ಆ ಬಗ್ಗೆ ಪ್ರತಿರೋಧವೂ ಇದೆ. ಆರೋಪಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕೆಂಬುದಕ್ಕೆ ನಮ್ಮ ಸಹಮತವೂ ಇದೆ. ಆದರೆ ವಿನಾಕಾರಣ ಒಂದು ಯಾವುದೋ ಒಂದು ಊರಿನಲ್ಲಿ ನಡೆದ ಘಟನೆಯನ್ನು ಬೇರೊಂದು ಊರಿನೊಂದಿಗೆ ಬೆಸೆದು ಅಲ್ಲಿನ ಸ್ವಾಸ್ಥ್ಯ ಕದಡುವುದು ಕೆಲಸ ಸರಿಯಲ್ಲ. ಫೇಸ್ಬುಕ್, ಟ್ಟೀಟರ್, ವಾಟ್ಸ್ಆ್ಯಪ್ ಮುಂತಾದ ಸಾಮಾಜಿಕ ತಾಣಗಳಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುಷ್ಟ ಹಾಗೂ ವಿಕೃತ ಕೆಲಸಗಳಿಕೆ ಬಳಸಿಕೊಳ್ಳುವ ಪ್ರವೃತ್ತಿ ಕೊನೆಗೊಳ್ಳಬೇಕಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-ಸುನಿಲ್ ಬೈಂದೂರು

write your opinion to - editor@kundapra.com
Like our page on Facebook Click here
ಕುಂದಾಪ್ರ ಡಾಟ್ ಕಾಂ