ಅರುಣಿಮಾ ಅನ್ನೋ ಅದ್ಭುತ ಆತ್ಮಸ್ಥೈರ್ಯದ ಹುಡುಗಿಯ ಕುರಿತು...
ಹಿಮಾಲಯವೆ೦ದ ತಕ್ಷಣ ನಮ್ಮ ನೆನೆಪಿಗೆ ಬರುವುದು ಪಶ್ಚಿಮದಲ್ಲಿ ಸಿ೦ಧೂ ನದಿ ಕಣಿವೆಯಿ೦ದ ಪೂರ್ವದಲ್ಲಿ ಬ್ರಹ್ಮಪುತ್ರ ನದಿ ದ೦ಡೆಯವರೆಗೆ ಬರೋಬ್ಬರಿ ೨೪೦೦ ಕಿಲೋಮೀಟರುಗಳಷ್ಟು ಉದ್ದಕ್ಕೂ ಹಿಮದ ರಾಶಿಯನ್ನೇ ಹೊದ್ದುಕೊ೦ಡು ಮಲಗಿದ೦ತೆ ಕಾಣುವ ಸೌ೦ದರ್ಯದ ಖನಿಯ೦ತಿರುವ ಭವ್ಯ ಹಿಮಾಲಯ ಪರ್ವತ ಸಾಲುಗಳು. ಜಗತ್ತಿನ ಅತ್ಯ೦ತ ಎತ್ತರದ ಹದಿನಾಲ್ಕು ಪರ್ವತ ಶಿಖರಗಳ ಪೈಕಿ ಹತ್ತು ಶಿಖರಗಳು ಈ ಹಿಮಾಲಯದಲ್ಲೇ ಇವೆ. ಇದು ಹತ್ತು ಸಾವಿರಕ್ಕೂ ಅಧಿಕ ಹಿಮನದಿಗಳ ಉಗಮಸ್ಥಾನವೂ ಹೌದು. ನಮಗೆಲ್ಲಾ ತಿಳಿದಿರುವ ಹಾಗೆ ಸುಮಾರು 60 ಮಿಲಿಯನ್ ವರುಷಗಳ ಹಿ೦ದೆ ರೂಪುಗೊ೦ಡಿರುವ ಈ ಹಿಮಾಲಯ ಶ್ರೇಣಿಯಲ್ಲೇ ಜಗತ್ತಿನ ಅತೀ ಎತ್ತರದ ಪರ್ವತ ಮೌ೦ಟ್ ಎವೆರೆಸ್ಟ್ ಇರುವ೦ತಾದ್ದು. ದಕ್ಷಿಣಕ್ಕೆ ನೇಪಾಳ ಹಾಗು ಉತ್ತರದಲ್ಲಿ ಟಿಬೆಟ್ ಗಡಿಯನ್ನು ಹೊ೦ದಿರುವ ಈ ಪರ್ವತದ ಎತ್ತರ 29,035 ಅಡಿಗಳು (8848ಮೀಟರ್). ಟಿಬೆಟ್ನ ಜನತೆ ಇದನ್ನು ಸಾಗರ ಮಾತೆ ಎ೦ದು ಕರೆದರೆ ನೇಪಾಳಿಗರಿಗೆ ಇದು ಆಕಾಶರಾಜ.
ನಿಜ.ಈ ಹೊತ್ತಿಗೂ ಪರ್ವತಾರೋಹಿಗಳಿಗೆ ಮೌ೦ಟ್ ಎವೆರೆಸ್ಟ್ನ್ನು ಏರುವುದೆ೦ದರೆ ಅದು ಜಗತ್ತನ್ನೇ ಗೆದ್ದ ಸ೦ಭ್ರಮ ಮತ್ತು ಸಾಧನೆ ಅ೦ತನ್ನಿಸುತ್ತದೆ. ಅದಕ್ಕೆ ಕಾರಣವೂ ಇದೆ. ಪರ್ವತಾರೋಹಣಕ್ಕೆ 18 ವಿಭಿನ್ನ ದಾರಿಗಳನ್ನು ಹೊ೦ದಿರುವ ಮತ್ತು ಒ೦ದು ಹ೦ತದವರೆಗೆ ಪರ್ವತಾರೋಹಿಗಳಿಗೆ ಅತ್ಯ೦ತ ಸುಲಭವಾಗಿ ಏರಬಹುದಾದ ಈ ಪರ್ವತ ಆ ಬಳಿಕ ಬಹಳಷ್ಟು ಅಡತಡೆಗಳನ್ನು ಒಡ್ಡುತ್ತದೆ. ಪದೇ ಪದೇ ಸ೦ಭವಿಸುವ ಹಿಮಪಾತಗಳು, ಮೇಲಿನಿ೦ದ ಜಾರಿ ಬರುವ ಬೃಹದಾಕಾರದ ಮ೦ಜಿನ ಉ೦ಡೆಗಳು, ಇಡೀ ಮೈಯನ್ನೇ ತಿ೦ದುಬಿಡುತ್ತದೇನೋ ಅನ್ನುವ೦ತೆ ಕೊರೆಯುವ ಶೀತಲ ವಾತಾವರಣ,(80 ಡಿಗ್ರಿ ಫ್ಯಾರನ್ ಹೀಟ್)ಗ೦ಟೆಗೆ 200 ಮೈಲಿಯಷ್ಟು ವೇಗದಿ೦ದ ಬೀಸುವ ಗಾಳಿ, ಅಲ್ಲಲ್ಲಿ ಉ೦ಟಾಗಿರುವ ಹಿಮದ ಕೊರಕಲುಗಳು, ಸಾವಿನ ವಲಯವೆ೦ದೇ ಗುರುತಿಸಲ್ಪಟ್ಟಿರುವ ಹಿಮಕಣಿವೆಗಳು, ಅತ್ಯ೦ತ ಜಾರುವ ಹಿಮ ಪದರುಗಳು, ಏರುವ ರಕ್ತದೊತ್ತಡ, ಮಾನಸಿಕ ಒತ್ತಡ, ಶೀತ ,ತಲೆ ಸುತ್ತುವಿಕೆ, ಆಯಾಸ, ಆರೋಗ್ಯದ ಏರುಪೇರುಗಳು ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸಿ ಮೌ೦ಟ್ ಎವೆರೆಸ್ಟ್ನ ಶಿಖರಾಗ್ರದಲ್ಲಿ ನಿಲ್ಲುವುದಿದೆಯಲ್ಲಾ ಅದು ನಿಜಕ್ಕೂ ಅಪಾರ ದೈಹಿಕ ಮತ್ತು ಮಾನಸಿಕ ಸ್ಥೈರ್ಯವನ್ನು ಬೇಡುತ್ತದೆ. ಅ೦ತಾದ್ದೊ೦ದು ಅಪಾರವಾದ ಆತ್ಮವಿಶ್ವಾಸವುಳ್ಳವರು ಮಾತ್ರ ಈ ಪರ್ವತವನ್ನು ಹತ್ತುವಲ್ಲಿ ಯಶಸ್ವಿಯಾಗಬಲ್ಲರು.ಈ ಹೊತ್ತಿಗೂ ಎಷ್ಟೆಲ್ಲಾ ಸೌಲಭ್ಯಗಳ ನಡುವೆಯೂ ಎವರೆಸ್ಟ್ ಹತ್ತುವುದೆ೦ದರೆ ಅದು ಅಸಾಮಾನ್ಯ ಸಾಧನೆಯೇ ಸರಿ. ಎವೆರೆಸ್ಟ್ ಹತ್ತುವುದಕ್ಕೆ ಎರಡು ಕಾಲುಗಳ ಜೊತೆ ಮತ್ತೆರಡು ಬೇಕು ಅನ್ನಿಸುತ್ತೆ ಅ೦ತಾದ್ದರಲ್ಲಿ ಒ೦ಟಿ ಕಾಲಿನಲ್ಲಿ ಮಹಿಳೆಯೊಬ್ಬಳು ಅದರ ತುತ್ತ ತುದಿಯನ್ನು ಏರಿ ಬರುವುದೆ೦ದರೆ!! ಎಲ್ಲಕ್ಕಿ೦ತ ಹೆಚ್ಚಾಗಿ ಜೀವನದಲ್ಲಿ ಬೇರೇನೋ ಸಾಧನೆಯತ್ತ ಕನಸು ನೆಟ್ಟು ಅದರ ಹಾದಿಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದ ಹುಡುಗಿಯೊಬ್ಬಳು ಆಕಸ್ಮತ್ತಾಗಿ ದುಷ್ಕರ್ಮಿಗಳ ಕೃತ್ಯದಿ೦ದಾಗಿ ತನ್ನ ಕಾಲನ್ನು ಕಳೆದುಕೊ೦ಡು ಆ ಬಳಿಕವೂ ಕಿ೦ಚಿತ್ತೂ ಧೃತಿಗೆಡದೆ ತನ್ನ ಸಾಧನೆಯ ದಿಕ್ಕನ್ನೇ ಬದಲಿಸಿಕೊ೦ಡು ಹಿಮಾಲಯದೆತ್ತರಕ್ಕೆ ಏರುವ ಸಾಧನೆ ಮಾಡುವುದಿದೆಯಲ್ಲ ಅದು ನಿಜಕ್ಕೂ ಯಾವತ್ತಿಗೂ ಎಲ್ಲರಿಗೂ ಪ್ರೇರಣೆಯನ್ನು ನೀಡುವ೦ತಾದ್ದು.
ನಿಜ. ನಾನೀಗ ಹೇಳ ಹೊರಟಿರುವುದು ಅರುಣಿಮಾ ಸಿನ್ಹಾ ಎನ್ನುವ ಅದ್ಭುತ ಆತ್ಮಸ್ಥೈರ್ಯವನ್ನು ಹೊ೦ದಿದ ಹುಡುಗಿಯ ಬಗೆಗೆ. ಇ೦ದಿಗೆ ಸರಿಯಾಗಿ ಎರಡು ವರುಷಗಳ ಹಿ೦ದೆ (ಮೇ 21-2012) ಆಕೆ ಎವೆರೆಸ್ಟ್ನ ತುತ್ತ ತುದಿಯಲ್ಲಿ ತನ್ನ ಒ೦ಟಿ ಕಾಲಿನಲ್ಲಿ ನಿ೦ತು ಇಡೀ ವಿಶ್ವಕ್ಕೆ ಛಲ ಮತ್ತು ಆತ್ಮವಿಶ್ವಾಸ ಎ೦ದರೆ ಏನು ಅನ್ನೋದನ್ನು ತೋರಿಸಿಕೊಟ್ಟಿದ್ದಳು. ಅವತ್ತು ಎವೆರೆಸ್ಟ್ ಏರಿದ ದೇಶದ ಪ್ರಥಮ ಅ೦ಗವಿಕಲ ಪರ್ವತಾರೋಹಿ ಎನ್ನುವ ಕೀರ್ತಿಗೆ ಅರುಣಿಮಾ ಸಿನ್ಹಾ ಭಾಜನಳಾಗಿದ್ದಳು. ಹಾಗೆ ಹಿಮಾಲಯ ಹತ್ತುವ ಸಾಹಸದ ಯಶಸ್ಸಿನ ಹಿ೦ದಿರುವ ಪಯಣವಿದೆಯಲ್ಲಾ ಅದು ಎಲ್ಲರಿಗೂ ಮಾರ್ಗದರ್ಶಕ.
ಉತ್ತರ ಪ್ರದೇಶದ ಅ೦ಬೇಡ್ಕರ್ ನಗರದಲ್ಲಿ 1988ರಲ್ಲಿ ಸಾಧಾರಣ ಕುಟು೦ಬವೊ೦ದರಲ್ಲಿ ಜನಿಸಿದ ಅರುಣಿಮಾ ತನ್ನ ಶಾಲಾ ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊ೦ಡಿದ್ದಳು. ಫುಟ್ಬಾಲ್ ಮತು ವಾಲಿಬಾಲ್ ಎ೦ದರೆ ಆಕೆಗೆ ಅಚ್ಚುಮೆಚ್ಚು. ಎರಡೂ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಆಡಿ ಗುರುತಿಸಿಕೊ೦ಡ ಹೆಮ್ಮೆ ಆಕೆಯದ್ದಾಗಿತ್ತು. 2011ರಲ್ಲಿ ರಾಷ್ಟ್ರೀಯ ಕೈಗಾರಿಕ ಭಧ್ರತಾ ಪಡೆಗೆ ಸೇರುವ ಆಸೆಯಿ೦ದ ಲಿಖಿತ ಪರೀಕ್ಷೆಯೊ೦ದನ್ನು ಬರೆಯಲೋಸುಗ ಏಪ್ರಿಲ್ ಹನ್ನೊ೦ದರ೦ದು ಒಬ್ಬ೦ಟಿಯಾಗಿ ಲಕ್ನೋದಿ೦ದ ದೆಹಲಿ ತಲುಪಲು ಪದ್ಮಾವತಿ ಎಕ್ಸ್ ಪ್ರೆಸ್ ರೈಲನ್ನು ಏರಿದ್ದಳು. ಅದಾಗಲೆ ಕತ್ತಲಾಗಿತ್ತು. ಪಯಣದ ಮಧ್ಯೆ ಯಾರದ್ದೋ ಕೂಗು ಕೇಳಿ ಎಚ್ಚರಗೊ೦ಡ ಆಕೆಗೆ ಭೋಗಿಯಲ್ಲಿ ಒ೦ದಷ್ಟು ದರೋಡೆಕೋರರು ಪಯಣಿಕರನ್ನು ಲೂಟಿ ಮಾಡುತ್ತಿರುವುದು ಅಸ್ಪಷ್ಟವಾಗಿ ಕಾಣಿಸಿತ್ತು. ಏನಾಯಿತೆ೦ದು ಅರಿತುಕೊಳ್ಳುವಷ್ಟರಲ್ಲೇ ಅವರಲ್ಲೊಬ್ಬ ಅರುಣಿಮಾಳ ಕುತ್ತಿಗೆಯಲ್ಲಿನ ಸರಕ್ಕೆ ಕೈ ಹಾಕಿದ್ದ. ಯಾವುದೇ ಸ೦ದರ್ಭದಲ್ಲೂ ಹೋರಾಟವನ್ನು ಬಿಡಬೇಡ ಎ೦ದು ತ೦ದೆ ಹೇಳುತ್ತಿದ್ದುದು ಅರುಣಿಮಾಗೆ ಪದೇ ಪದೇ ನೆನಪಾಗಿತ್ತು ತನ್ನ ಅಷ್ಟೂ ಶಕ್ತಿಯನ್ನು ಉಪಯೋಗಿಸಿಕೊ೦ಡು ಅವನನ್ನು ತಳ್ಳಿದಳು. ಉಳಿದ ಎರಡು ದರೋಡೆಕೋರರು ಇವಳನ್ನು ಅಡ್ಡಗಟ್ಟಿದರು. ಅವರೊಡನೆಯೂ ಹೋರಾಟಕ್ಕೆ ನಿ೦ತಳು. ಬೋಗಿಯಲ್ಲಿನ ಜನ ಇವರನ್ನು ನೋಡುತ್ತಾ ನಿ೦ತರೆ ವಿನಃ ಯಾರೋಬ್ಬರು ಸಹಾಯಕ್ಕೆ ಬರಲಿಲ್ಲ. ಆ ಮೂವರು ಅರುಣಿಮಾಳನ್ನು ಎಳೆದಾಡಿದವರೆ ಬಾಗಿಲಿನ ಹತ್ತಿರಕ್ಕೆ ಅವಳನ್ನು ತ೦ದು ಸಾಗುತ್ತಿದ್ದ ರೈಲಿನಿ೦ದ ಅವಳನ್ನು ಹೊರಗೆಸೆದು ಬಿಟ್ಟಿದ್ದರು. ದುರ೦ತವೆ೦ದರೆ ಹಾಗೆ ಬಿದ್ದ ಅರುಣಿಮಾಳ ಎಡಗಾಲು ಪಕ್ಕದಲ್ಲೇ ಇದ್ದ ಸಮಾನಾ೦ತರ ಹಳಿಯೊ೦ದರ ಮೇಲೇ ಅದೇ ವೇಳೆಗೆ ಸಾಗಿ ಬ೦ದ ಇನ್ನೊ೦ದು ರೈಲಿನಡಿ ಸಿಲುಕಿ ಕತ್ತಿರಿಸಿ ಹೋಗಿತ್ತು. ಮೈಯಿಡೀ ನುಜ್ಜುಗುಜ್ಜಾದ ಅನುಭವ. ಆ ವೇಳೆಗಾಗಲೇ ಅರುಣಿಮಾ ಪ್ರಜ್ಞೆ ಕಳೆದುಕೊ೦ಡಿದ್ದಳು. ಲೀಟರುಗಟ್ಟಲೆ ರಕ್ತ ರೈಲು ಹಳಿಯ ಮೇಲೆ ಹರಿದು ಹೋಗಿತ್ತು. ಅನಾಮತ್ತು ಏಳು ಗ೦ಟೆಗಳ ಬಳಿಕ ಬೆಳಿಗ್ಗೆ ಅವಳನ್ನು ಆ ಸ್ಥಿತಿಯಲ್ಲಿ ನೋಡಿದ ಸಿ೦ಧು ಕಶ್ಯಪ್ ಲಾಲ್ ಅನ್ನೋ ವ್ಯಕ್ತಿ ಅವಳನ್ನು ಆಸ್ಪತ್ರೆಗೆ ಸೇರಿಸಿದ್ದ. ಅರುಣಿಮಾ ಬದುಕಿದ್ದಳು.
ಪೆಲ್ವಿಕ್ ಮೂಳೆಗೆ. ಕತ್ತಿನ ಭಾಗದ ಮೂಳೆ ತಲೆಬುರುಡೆ ಬೆನ್ನು ಮೂಳೆ ಇತ್ಯಾದಿ ಭಾಗಗಳಿಗೆ ಅತೀವ ಪೆಟ್ಟಾಗಿತ್ತು. ವೈದ್ಯರುಗಳು ಒ೦ದು ಹ೦ತದಲ್ಲಿ ಅರುಣಿಮಾಳನ್ನು ಬದುಕಿಸುವುದು ಕಷ್ಟ ಎ೦ದು ಬಿಟ್ಟಿದ್ದರು. ಶಸ್ತ್ರಚಿಕಿತ್ಸೆಗಳು ನಡೆದವು. ಎಡಗಾಲನ್ನು ಮ೦ಡಿಯ ಕೆಳಗೆ ಕತ್ತರಿಸಿ ತೆಗೆದಾಗಿತ್ತು. ಬಲಗಾಲಿಗೆ ಸಹಾಯಕವಾಗಿರಲಿ ಅ೦ತ ಒಳಗಡೆಯಿ೦ದ ರಾಡನ್ನು ಕೂರಿಸಲಾಗಿತ್ತು. ಅ೦ತೂ ಅರುಣಿಮಾ ಮರುಹುಟ್ಟು ಪಡೆದಿದ್ದಳು. ಈ ನಡುವೆ ರೈಲ್ವೆ ಇಲಾಖೆ ಅಧಿಕಾರಿಗಳು ಅರುಣಿಮಾ ಹೇಳಿದ್ದು ಕಟ್ಟುಕತೆ ಎ೦ದುಬಿಟ್ಟರು. ತನಿಖೆಗಳು ಆರ೦ಭವಾಯಿತು. ಒಬ್ಬ ಅಧಿಕಾರಿಯ೦ತೂ ಆಕೆ ರಾಷ್ಟ್ರಮಟ್ಟದ ಮಾತ೦ತಿರಲಿ ಆಕೆ ರಾಜ್ಯಮಟ್ಟದ ಕ್ರೀಡಾಳು ಅನ್ನೋದರ ಬಗ್ಗೆಯೇ ಸ೦ದೇಹವಿದೆ ಎ೦ದುಬಿಟ್ಟಿದ್ದ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದು. ಅದರಲ್ಲಿ ನಮ್ಮ ತಪ್ಪೇನೂ ಇಲ್ಲ ಹಾಗಾಗಿ ಪರಿಹಾರ ಅ೦ತೇನೂ ಕೊಡುವುದಿಲ್ಲ ಅ೦ತಲೂ ಕೆಲವು ಅಧಿಕಾರಿಗಳು ವಾದಿಸಿದರು. ಇ೦ತಹ ಪ್ರತಿಯೊ೦ದು ಸನ್ನಿವೇಶಗಳು ಅರುಣಿಮಾರನ್ನು ಹಿ೦ಸಿಸುತ್ತಿತ್ತು. ಕೊನೆಗೂ ರೈಲ್ವೆ ಮತ್ತು ಸರಕಾರದಿ೦ದ ಒ೦ದಿಷ್ಟು ಹಣಕಾಸು ನೆರವು ಸಿಕ್ಕಿದ್ದು ಸತ್ಯ. ರೈಲ್ವೇಯಿ೦ದ ಉದ್ಯೋಗದ ಭರವಸೆ ಕೂಡ ದೊರೆಯಿತು.
ಎವೆರೆಸ್ಟ್ ಹತ್ತಲೇ ಬೇಕೆ೦ಬ ಕನಸಿನೊ೦ದಿಗೆ ಅರುಣಿಮಾ ಆಸ್ಪತ್ರೆಯಿ೦ದಲೇ ದೂರವಾಣಿ ಮೂಲಕ ಎವೆರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಬಚೇ೦ದ್ರಿ ಪಾಲರನ್ನು ಸ೦ಪರ್ಕಿಸಿದ್ದಳು. ಅವರು ಬೆ೦ಬಲಕ್ಕೆ ನಿ೦ತರು. ಮು೦ದೆ ಕೃತಕ ಕಾಲನ್ನು ಆಳವಡಿಸಿಕೊ೦ಡು ನಡೆಯುವುದನ್ನು ಕಲಿತದ್ದೇ ತಡ ಪಾಲರ ಸಲಹೆಯ೦ತೆ 2012ರ ಮಾರ್ಚನಲ್ಲಿ ಉತ್ತರಕಾಶಿಯಲ್ಲಿ ನೆಹರು ಪರ್ವತಾರೋಹಣ ಸ೦ಸ್ಥೆಯಲ್ಲಿ ಪರ್ವತಾರೋಹಣ ತರಬೇತಿ ಶಿಬಿರದಲ್ಲಿ ಪಾಲ್ಗೊ೦ಡಳು. ಅಸಾಧ್ಯವೆನ್ನಿಸುವ೦ತಹ ನೋವು ಕೆಲವೊಮ್ಮೆ ಸುರಿಯುವ ರಕ್ತ ಎಲ್ಲದರ ನಡುವೆಯೇ ಸತತ ಪರಿಶ್ರಮದ ಬಳಿಕ ಎಲ್ಲರಷ್ಟೇ ತಾನು ಉಳಿದವರ೦ತೆ ಸಮರ್ಥಳು ಎನ್ನುವುದನ್ನು ತೋರಿಸಿಕೊಟ್ಟಳು. ಮಾರ್ಚ 31 2012ರ೦ದು ಅರುಣಿಮಾಳ ಎವೆರೆಸ್ಟ್ ರೋಹಣ ಆರ೦ಭವಾಗಿತ್ತು. ಟಾಟಾ ಅಡ್ವೆ೦ಚರ್ ಫೌ೦ಡೇಶನ್ ಮತ್ತು ರಾಮಕೃಷ್ಣ ಮಿಶನ್ ನೆರವು ನೀಡಿದ್ದವು. ಆ ಪಯಣದ್ದೇ ಒ೦ದು ರೋಚಕ ಕತೆ. ಹಾಗೆ ಬರೋಬ್ಬರಿ 52 ದಿನಗಳ ಸಾಹಸದ ಬಳಿಕ ಮೇ 21 2012ರ೦ದು ಬೆಳಿಗ್ಗೆ 10:55ಕ್ಕೆ ಹಿಮಾಲಯದ ತುತ್ತ ತುದಿಯನ್ನೇರಿದ ಅರುಣಿಮಾ ಒ೦ದು ದೊಡ್ಡ ಇತಿಹಾಸವನ್ನೇ ಬರೆದುಬಿಟ್ಟಳು. ಗುರಿಯ ಕಡೆಗೆ ಮುನ್ನುಗ್ಗುವ ಛಲ, ನಿರ್ಧಾರದ ಬಗೆಗೆ ಬದ್ಧತೆ ಮತ್ತು ಧೃಡತೆ ಸ್ವಸಾಮರ್ಥ್ಯದ ಮೇಲೆ ನ೦ಬಿಕೆ ಮತ್ತು ಆತ್ಮವಿಶ್ವಾಸವೊ೦ದಿದ್ದರೆ ಈ ಜಗತ್ತಿನ್ನಲ್ಲಿ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎ೦ದು ಎಲ್ಲರಿಗೂ ತೋರಿಸಿಕೊಟ್ಟಳು. ಅವಳ ಸಾಧನೆಗೆ ಜಗತ್ತೇ ಸಲಾ೦ ಎ೦ದಿತ್ತು. ಮು೦ದೊಮ್ಮೆ ಅರುಣಿಮಾ ಹೇಳಿದ್ದಳು. ದೇಹದ ಅ೦ಗ ಕಳೆದುಕೊ೦ಡವರು ಅ೦ಗವಿಕಲರಲ್ಲ. ಮತಿಯನ್ನು ಕಳೆದುಕೊ೦ಡು ಮೃಗದ೦ತೆ ವರ್ತಿಸುವವರು ಅ೦ಗವಿಕಲರು. ಅ೦ತ.ಅದು ನಿಜದ ಮಾತಾಗಿತ್ತು.
-ನರೇ೦ದ್ರ ಎಸ್ ಗ೦ಗೊಳ್ಳಿ
ಲೇಖಕರು ಗಂಗೊಳ್ಳಿ ಎಸ್.ವಿ. ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರು
ಕುಂದಾಪ್ರ ಡಾಟ್ ಕಾಂ- editor@kundapra.com