ಹೊಳೆಯಾಚೆಗಿನ ಹೊಸೇರಿಗೆ ಕಿಲೋಮೀಟರ್ ಸುತ್ತಿ ಬರಬೇಕು!

ಕುಂದಾಪುರ: ಹೊಳೆ ದಾಟಲು ಸಾಧ್ಯವಿಲ್ಲವೆಂದು ಕುಳಿತರೇ ಪಕ್ಕದಲ್ಲೇ ಇರುವ ಊರಿಗೆ ತೆರಳಲು ಐದಾರು ಕಿಲೋ ಮೀಟರ್ ಸುತ್ತಿ ಬಳಸಿ ಹೋಗಬೇಕು. ಹೊಳೆ ದಾಟೋಣವೆಂದರೆ ಅಲ್ಲೊಂದು ಸುಸಜ್ಜಿತವಾದ ಸೇತುವೆಯಿಲ್ಲ. ಒಂಟಿ ಮರದ ಗಟ್ಟಿಯೂ ಇಲ್ಲದ ಕಾಲುಸಂಕದ ಮೇಲೆ ನಡೆಯುವುದಂತೂ ಭಾರಿ ಕಷ್ಟ. ಇದು ತಾಲೂಕಿನ ಗೋಳಿಹೊಳೆ ಗ್ರಾಮದ ಹೊಸೇರಿಯ ಜನರ ಮಳೆಗಾಲದ ಪರಿಸ್ಥಿತಿ.

ಹೊಸೇರಿಯ ಒಂದು ಭಾಗದಲ್ಲಿ ಹತ್ತುಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 120 ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಅವರಿಗೆ  ಹೊಳೆಯಾಚೆ ಇರುವ ವಸ್ರೆ ತೀರಾ ಹತ್ತಿರವಾದ್ದರಿಂದ ಅವರು ಕಾಲುಸಂಕದ ಮೂಲಕವೇ ತಮ್ಮ ತಮ್ಮ ಕೆಲಸಕಾರ್ಯಗಳಿಗೆ ತೆರಳುತ್ತಾರೆ. 15ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ತೆರಳಲೂ ಇದೇ ಕಾಲುಸಂಕವನ್ನೇ ಅವಲಂಬಿಸಿದ್ದಾರೆ. ಕೃಷಿ ಗದ್ದೆಗಳೂ ಈ ಭಾಗದಲ್ಲಿ ಹೆಚ್ಚಿರುವುದರಿಂದ ಅದರ ನಿರ್ವಹಣೆಗೆ ತೆರಳುವವರು ಇದೇ ಹಾದಿಯಲ್ಲಿ ದಾಟಿ ನಡೆಯಬೇಕು. ಅನ್ಯ ಮಾರ್ಗವಲ್ಲದೇ ಇಲ್ಲಿನ ಜನ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಮಳೆಗಾಲದಲ್ಲಿ ತುಂಬಿ ಹರಿಯುವ ನದಿಪಾತ್ರಗಳಲ್ಲಿ ಸಂಚರಿಸುವುದೇ ಅಪಾಯಕಾರಿಯಾಗಿರುವಾಗ ಗಟ್ಟಿಯಿಲ್ಲದ ಮರದ ಕಾಲುಸಂಕದ ಮೂಲಕ ನದಿಯನ್ನು ದಾಟುವುದಾದರೂ ಹೇಗೆ ಎಂದು ಇಲ್ಲಿನ ಜನ ಕೇಳುತ್ತಿದ್ದಾರೆ. ಕಳೆದ ಭಾರಿ ಈ ಭಾಗಕ್ಕೆ ಭೇಟಿ ನೀಡಿದ್ದ ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸುವ ಭರವಸೆಯನ್ನಷ್ಟೇ ನೀಡಿ ತೆರಳಿದ್ದರು. ಜನರೇನೋ ಸಣ್ಣ ಸೇತುವೆಯಾಗುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ ಅದು ನನಸಾಗಲು ಇನ್ನೇಷ್ಟು ಮಳೆಗಾಲಗಳು ಕಳೆಯುತ್ತದೋ ಎಂಬ ಆತಂಕವೂ ಅವರನ್ನು ಕಾಡುತ್ತಿದೆ.
ಹೊಸೇರಿಯಲ್ಲಿ ಇನ್ನೂ 2 ಸಣ್ಣ ಕಾಲುಸಂಕಗಳಿವೆ:
ಹೊಸೇರಿ ಪರಿಸರದಲ್ಲಿಯೇ ಕಿರುಹೊಳೆಗೆ ಇನ್ನೂ ಎರಡು ಕಾಲುಸಂಕಗಳು ಅಲ್ಲಿಯೂ ಜನರು, ಶಾಲೆಗೆ ತೆರಳುವ ಮಕ್ಕಳು ಸಂಚರಿಸುತ್ತಾರೆ. ಮನೆಯಿಂದ ಹೊಸೇರಿ ಶಾಲೆಗೆ ತೆರಳುವ ಮಕ್ಕಳಿಗೆ ಈ ಕಾಲುಸಂಕಗಳಲ್ಲದೇ ಬೇರೆ ದಾರಿಯೇ ಇಲ್ಲ. ಅಪಾಯಗಳು ಸಂಭವಿಸಿದಾಗ ಅಲ್ಲಿಗೆ ತೆರಳುವ ಜನಪ್ರತಿನಿಧಿಗಳು ಅದಕ್ಕೂ ಮಂಚೆಯೇ ಒಂದು ಪರಿಹಾರೋಪಾಯವನ್ನು ತೋರಿಸಿಕೊಟ್ಟರೇ ಇಲ್ಲಿನ ಜನರು ನೆಮ್ಮದಿಯಿಂದ ದಿನಕಳೆದಾರು.

** ಕಾಲುಸಂಕದ ಬೇಡಿಕೆ ಇಟ್ಟು ನಮಗೂ ಸಾಕಾಗಿ ಹೋಗಿದೆ. ಇಲ್ಲಿಗೆ ಭೇಟಿ ನಿಡಿದ ಜನಪ್ರತಿನಿಧಿಗಳು ಸೇತುವೆ ಮಾಡಿಸಿಕೊಡುವ ಭರವಸೆ ನೀಡಿದ್ದರು. ಆದರೆ ಈವರೆ ಅದು ಈಡೇರಿಲ್ಲ. - ಸ್ಥಳೀಯ




ಕುಂದಾಪ್ರ ಡಾಟ್ ಕಾಂ- editor@kundapra.com