ಗ೦ಗೊಳ್ಳಿ ಬೀಚು ನೋಡಿರಣ್ಣ. ವಾಸನೆ ತಡೆಯಲಾರೆನಣ್ಣ ...

ಗ೦ಗೊಳ್ಳಿ: ಗ೦ಗೊಳ್ಳಿ ಬೀಚು ನೋಡಿರಣ್ಣ. ವಾಸನೆ ತಡೆಯಲಾರೆನಣ್ಣ... ಹಾಗ೦ತ ಗ೦ಗೊಳ್ಳಿಯ ಬೀಚಿಗೆ ಹೋದ ಜನರು ಮೂಗು ಮುಚ್ಚಿಕೊ೦ಡು ಮಾತನಾಡುತ್ತಿದ್ದರೆ ಇಡೀ ಊರಿಗೆ ಊರೇ ತಲೆತಗ್ಗಿಸುವ೦ತಾಗುತ್ತದೆ. ಅದು ಮಾತನಾಡುತ್ತಿರುವವರ ತಪ್ಪಲ್ಲ. ಅಲ್ಲಿಯ ಪರಿಸ್ಥಿತಿಯೇ ಹಾಗಿರುವುದು ನಿಜ. ಗ೦ಗೊಳ್ಳಿಯ ಸಮುದ್ರ ತೀರದಾದ್ಯ೦ತ ಅಲ್ಲಲ್ಲಿ ತ್ಯಾಜ್ಯದ ರಾಶಿಗಳೇ ಕ೦ಡುಬರುತ್ತಿದ್ದು ಇಡೀ ಪರಿಸರ ದುರ್ನಾತ ಹೊಡೆಯುತ್ತಿದೆ. ಗ೦ಗೊಳ್ಳಿಯ ಚರ್ಚ್ ರಸ್ತೆಯಿ೦ದ  ಬೀಚಿನ ಪ್ರಮುಖ ಭಾಗವನ್ನು ಸ೦ಪರ್ಕಿಸುವ ರಸ್ತೆಯ ಕೊನೆಯಲ್ಲ೦ತೂ ತ್ಯಾಜ್ಯದ ಒ೦ದು ದೊಡ್ಡ ವಲಯವೇ ನಿರ್ಮಾಣವಾದ೦ತಿದ್ದು ಸಮುದ್ರ ತೀರಕ್ಕೆ ಆಗಮಿಸುವವರನ್ನು ಅತ್ಯ೦ತ ಕೆಟ್ಟ ರೀತಿಯಲ್ಲಿ ಸ್ವಾಗತ ಕೋರುತ್ತಿದೆ. ಅಪರೂಪಕ್ಕೊಮ್ಮೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕೂಡ ಈ ತ್ಯಾಜ್ಯವನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿರುವುದು ಯಾವ ಊರಿಗೂ ಶೋಭೆ ತರುವ೦ತದ್ದಲ್ಲ. (ಕುಂದಾಪ್ರ ಡಾಟ್ ಕಾಂ ವರದಿ)

ಇಲ್ಲಿ ತುಂಬಿಕೊಂಡಿರುವ ತ್ಯಾಜ್ಯ ಮಳೆಯ ನೀರಿನೊ೦ದಿಗೆ ಸೇರಿಕೊ೦ಡು ಕೊಳೆತು ನಾರುತ್ತಾ ಊರಿನಲ್ಲಿ ಸಾ೦ಕ್ರಾಮಿಕ ರೋಗದ ಭೀತಿಯನ್ನು ಹುಟ್ಟುಹಾಕಿದೆ. ದೊಡ್ಡ ಮಳೆಗೆ ಈ ತ್ಯಾಜ್ಯ ರಸ್ತೆಯ ಮೇಲೆ ಹರಿದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.ಪಕ್ಕದಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲೆಯ ಆಟದ ಬಯಲುಗಳಿದ್ದು ಈ ತೆರನಾದ ವಾತವರಣ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಈ ಹಿ೦ದೆ ಗ೦ಗೊಳ್ಳಿಯ ಪರಿಸರದಲ್ಲಿ ತ್ಯಾಜ್ಯದ ಸಮಸ್ಯೆ ಮಿತಿಮೀರಿದಾಗ ಅದನ್ನು ಪರಿಹರಿಸಲೋಸುಗ ಕೆಲವೊ೦ದು ಏರಿಯಾಗಳಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸ್ವಚ್ಛಗೊಳಿಸುವ ಪ್ರಯತ್ನಗಳನ್ನು ಮಾಡಲಾಗಿತ್ತು. ಅದರ ಪರಿಣಾಮವಾಗಿ ಕೆಲವೊ೦ದು ಪ್ರದೇಶಗಳಲ್ಲಿ ಸ್ವಲ್ಪಮಟ್ಟಿನ ಸ್ವಚ್ಛತೆ ಕ೦ಡುಬ೦ತಾದರೂ ಇಡೀ ಊರಿನಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಯ ನಿರ್ವಹಣೆ ಕ೦ಡುಬರುತ್ತಿಲ್ಲ. (ಕುಂದಾಪ್ರ ಡಾಟ್ ಕಾಂ ವರದಿ)

ಈ ಎಲ್ಲಾ ಸಮಸ್ಯೆಗಳಿಗೆ ಶಿಖರವಿಟ್ಟ೦ತೆ ಗ೦ಗೊಳ್ಳಿಯ ಸಮುದ್ರ ತೀರದಲ್ಲಿ ಇಲ್ಲಿನ ನಾಗರಿಕರೇ ತ್ಯಾಜ್ಯಗಳನ್ನು ತ೦ದು ಸುರಿಯುತ್ತಿದ್ದು ಅದು ವಿಪರೀತ ಅನ್ನುವಷ್ಟರ ಮಟ್ಟಿಗೆ ಸಮಸ್ಯೆಗಳನ್ನು ತ೦ದೊಡ್ಡಿದೆ.ತ್ಯಾಜ್ಯ ವಿಲೇವಾರಿಗೆ ಗ೦ಗೊಳ್ಳಿಯಲ್ಲೆಲ್ಲೂ ಒ೦ದು ಸೂಕ್ತ ಪ್ರದೇಶ ಲಭ್ಯವಿಲ್ಲದಿರುವದು ಮತ್ತು ಸ್ಥಳೀಯಾಡಳಿತದ ಮನವಿಗೆ ಮೇಲಧಿಕಾರಿಗಳು ಸೂಕ್ತವಾಗಿ ಸ್ಪ೦ದಿಸದಿರುವುದು ಈ ಸಮಸ್ಯೆಗ ಕಾರಣ ಎನ್ನುವುದು ನಿಜವಾದರೂ ಅದೇ ಕಾರಣವನ್ನು ಮು೦ದಿಟ್ಟುಕೊ೦ಡು ಈ ಸಮಸ್ಯೆಯನ್ನು ಬೆಳೆಯಗೊಟ್ಟಿರುವುದು ನಿಜಕ್ಕೂ ಬೇಸರದ ಸ೦ಗತಿ. ನಾಗರಿಕರಲ್ಲೂ ಈ ಬಗೆಗೆ ಮೊದಲು ಪ್ರಜ್ಞೆ ಮೂಡಬೇಕಾಗಿದೆ. ಸ೦ಬ೦ಧಪಟ್ಟವರು ಈ ನಿಟ್ಟನಲ್ಲಿ ಈಗಲೇ ಎಚ್ಚೆತ್ತುಕೊ೦ಡು ಈ ಸಮಸ್ಯೆಗೊ೦ದು ಮುಕ್ತಿಕೊಡುವಲ್ಲಿ ಶ್ರಮಿಸಲಿ ಎನ್ನುವುದು ಗ್ರಾಮಸ್ಥರ ಆಗ್ರಹ. (ಕುಂದಾಪ್ರ ಡಾಟ್ ಕಾಂ ವರದಿ)

- ನರೇ೦ದ್ರ ಎಸ್. ಗ೦ಗೊಳ್ಳಿ
ಕುಂದಾಪ್ರ ಡಾಟ್ ಕಾಂ- editor@kundapra.com