ವಿದ್ಯಾರ್ಥಿನಿ ಅಕ್ಷತಾ ಸಾವು: ಪ್ರತಿಭಟನೆ, ಚುರುಕುಗೊಂಡ ತನಿಕೆ


ಬೈಂದೂರು: ಇಲ್ಲಿನ ಹೆನ್ಬೇರು ಬಳಿ ನಿಗೂಡವಾಗಿ ಸಾವನ್ನಪ್ಪಿದ ಬೈಂದೂರು ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ(17) ಸಂಶಯಾಸ್ಪದ ಸಾವಿನ ಪ್ರಕರಣದ ತನಿಕೆ ಚುರುಗೊಂಡಿದ್ದು, ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇನ್ನೊಂದೆಡೆ ಬೈಂದೂರು ಹಾಗೂ ಕುಂದಾಪುರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಅಕ್ಷತಾ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ. 
ಬೈಂದೂರಿನಲ್ಲಿ ವಿದ್ಯಾರ್ಥಿಗಳ ಬೃಹತ್  ಪ್ರತಿಭಟನೆ, ರಸ್ತೆ ತಡೆ:
ಅನುಮಾನಾಸ್ಪದವಾಗಿ ಸಾವಿಗೀಡಾದ ಅಕ್ಷತಾ ಸಾವಿನ ರಹಸ್ಯವನ್ನು ಶೀಘ್ರವೇ ಭೇದಿಸುವಂತೆ ಬೈಂದೂರು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೈಂದೂರು ಬೈಪಾಸ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು. ಇದಕ್ಕೆ ಬೈಂದೂರಿನ ನಾಗರಿಕರು ಸಾಥ್ ನೀಡಿದರು. ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕುಳಿತು ಅಕ್ಷತಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆಗಳಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿತು. ಬಳಿಕ ಸ್ಥಳಕ್ಕಾಗಮಿಸಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ವಿದ್ಯಾರ್ಥಿಗಳ ಮನವೊಲಿಸಲು ಮೊದಲಿಗೆ ವಿಫಲರಾದರೂ ಕೂಡ. ಪ್ರಕರಣವನ್ನು ಮೂರು ದಿನಗಳೊಳಗೆ ಬಯಲಿಗೆಳೆಯುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು. ಬಳಿಕ ವಿದ್ಯಾರ್ಥಿಗಳ ಬೈಂದೂರು ವಿಶೇಷ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರೇ, ಕುಂದಾಪುರದಲ್ಲಿಯೂ ತರಗತಿ ಬಹಿಷ್ಕರಿಸಿ ಮೆರವಣಿಗೆಯ ಮೂಲಕ ಸಾಗಿದ ವಿದ್ಯಾರ್ಥಿಗಳು ಕುಂದಾಪುರ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಘಟನಾ ಸ್ಥಳಕ್ಕೆ ಐಜಿಪಿ ಭೇಟಿ:
ಅಕ್ಷತಾ ಮೃತಹೇಹ ಪತ್ತೆಯಾದ ಹೆನ್ಬೇರು ಅಕೇಶಿಯಾ ತೋಪಿಗೆ ಭೇಟಿ ನೀಡಿದ ಪಶ್ಚಿಮ ವಲಯ ಐ.ಜಿ.ಪಿ ಅಮೃತ್‌ಪಾಲ್‌ ಎಸ್ಪಿಯಿಂದ ಘಟನೆಯ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಪ್ರಕರಣದ ತನಿಕೆಗೆ 3 ಪೊಲೀಸ್‌ ತಂಡ ರಚಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ಪ್ರಕರಣವನ್ನು ಶೀಘ್ರ ಬೇಧಿಸುವುದಾಗಿ ತಿಳಿಸಿದರು. ರತ್ನಾ ಕೊಠಾರಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ಆ ಪ್ರಕರಣದಲ್ಲಿ ಸಾಕ್ಷಾಧಾರಗಳ ಕೊರತೆ ಇತ್ತು. ಆದರೆ ಈ ಪ್ರಕರಣದಲ್ಲಿ ಸಾಕ್ಷಾಧಾರಗಳು ಲಭ್ಯವಾಗಿರುವುದು ತನಿಕೆಯ ಹಾದಿಯನ್ನು ಸುಗಮಗೊಳಿಸಿದೆ ಎಂದರು.
ಸಚಿವರ ಭೇಟಿ, ಶಾಸಕರ ಭೇಟಿ :
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗೋಪಾಲ ಪೂಜಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ.
ಅಂತ್ಯಕ್ರಿಯೆ:
ಮಣಿಪಾಲದಲ್ಲಿ ಅಕ್ಷತಾ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಧ್ಯಾಹ್ನದ ವೇಳೆಗೆ ಜ್ಯೂನಿಯರ್ ಕಾಲೇಜಿನಲ್ಲಿ ಸಾರ್ವಜನಿಕ ದರ್ಶನಕ್ಕಿಟ್ಟು ಬಳಿಕ ಮನೆಯವರಿಗೆ ಹಸ್ತಾಂತರಿಸಲಾಯಿತು. ಬೈಂದೂರು ವಿಶೇಷ ತಹಶೀಲ್ದಾರ ಕಿರಣ ಗೌರಯ್ಯ ಅಂತ್ಯಕ್ರಿಯೆಗೆ ಕಂದಾಯ ಇಲಾಖೆಯ ಅರ್ಥಿಕ ನೆರವು ನೀಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಅಣ್ಣಾಮಲೈ, ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ನಾಯ್ಕ, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್‌, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ, ಬೈಂದೂರು ಠಾಣಾಧಿಕಾರಿ ಸಂತೋಪ್ ಕಾಯ್ಕಿಣಿ ಮುಂತಾದವರು ಹಾಜರಿದ್ದರು.

ಸಾವಿನ ಸುತ್ತ ಅನುಮಾನದ ಹುತ್ತ:
ಅಕ್ಷತಾ ಕಾಲೇಜು ಮುಗಿಸಿ ಮನೆಗೆ ತೆರಳುವ ಸಮಯಕ್ಕೆ ಕಾಲುದಾರಿಯಲ್ಲಿ ಯುವಕನೊಬ್ಬ ನಡೆದುಕೊಂಡು ಬರುತ್ತಿದ್ದು ಸಂಜೆಯ ಹೊತ್ತಿಗೆ ಅದೇ ಮಾರ್ಗವಾಗಿ ಯೋಜನಾನಗರ ಮೂಲಕ ಬೈಂದೂರು ಕಡೆ ಹೋಗಿರುವುದನ್ನು ಸ್ಥಳೀರೋರ್ವರು ಗಮನಿಸಿದ್ದಾರೆ. ಅಕ್ಷತಾಳ ಸಾವು ಸಹ ಇದೇ ಸಮಯದಲ್ಲಿ ನಡೆದಿರುವುದು ಅನುಮಾನವನ್ನು ಹುಟ್ಟುಹಾಕಿದೆ. ಆದರೆ ಸಮಯದಲ್ಲಿ ಮಳೆ ಬರುತ್ತಿದ್ದರಿಂದ ಸ್ಥಳೀಯ ವ್ಯಕ್ತಿಗೆ ಆ ಯುವಕನ ಮುಖಚಹರೆಯನ್ನು ಪತ್ತೆಹಚ್ಚಲಾಗಿರಲಿಲ್ಲ.

ಆಕೆ ಪ್ರತಿದಿನ ಮನೆಗೆ ತೆರಳುವ ಕಾಲುದಾರಿಯಿಂದ ಸ್ವಲ್ಪ ದೂರದ ಪೊದೆಯಲ್ಲಿ ಶವ ದೊರೆತಿದೆ. ಆದರೆ ಶವ ದೊರೆತ ಸ್ಥಳದಲ್ಲಿ ಅತ್ಯಾಚಾರಕ್ಕೆ ಪ್ರಯತ್ನಿಸಿದ ಕುರುಹುಗಳು ಕಂಡುಬಂದಂತಿಲ್ಲ. ಬೇರೆಲ್ಲಿಯೋ ಕೊಲೆ ಮಾಡಿ ಬಳಿಕ ಶವವನ್ನು ಈ ಪ್ರದೇಶಕ್ಕೆ ತಂದು ಬ್ಯಾಗ್‌ ಹಾಗೂ ಕೊಡೆಗಳನ್ನು ಪಕ್ಕದಲ್ಲಿಟ್ಟು ಹೋಗಿರಬಹುದುಎನ್ನುವುದು ಸ್ಥಳೀಯರ ಅಭಿಪ್ರಾಯ.

ಅಕ್ಷತಾಳ ಮುಖದಲ್ಲಿ ಉಗುರಿನಿಂದ ಗೀಚಿದ ಕಲೆಗಳು ಕಂಡುಬಂದಿತ್ತು ಎನ್ನಲಾಗಿದೆ.  ವಿಧ್ಯಾರ್ಥಿನಿಯ ಚೂಡಿದಾರದ ಶಾಲನ್ನು ಕುತ್ತಿಗೆಗೆ ಸುತ್ತಲಾಗಿತ್ತು. ಅತ್ಯಾಚಾರ ನಡೆಸಿ ಕುತ್ತಿಗೆ ಮುರಿದು ಕೊಲೆ ನಡೆಸಿರಬಹುದು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಇದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ. 

ನ್ಯಾಯ ದೊರಕಿಸಿಕೊಡಲು ಆಗ್ರಹ
ಅಕ್ಷತಾ ಸಾವಿನಿಂದಾಗಿ ಕಂಗೆಟ್ಟಿರುವ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ. ಬೈಂದೂರಿನ ದೇವಾಗಡ ಸಂಘಟನೆ ಐಜಿಪಿ ಅಮೃತಪಾಲ್ ಗೆ ಮನವಿ ಸಲ್ಲಿಸಿದೆ. ನಮ್ಮ ಭೂಮಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರಕರಣವನ್ನು ಖಂಡಿಸಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸುವಂತೆ ಮನವಿ ಮಾಡಿದೆ.

ಇದನ್ನೂ ಓದಿ:


ಕುಂದಾಪ್ರ ಡಾಟ್ ಕಾಂ- editor@kundapra.com