ದೇವಾಲಯಗಳಿಗೆ ಒಂದು ಕೋಟಿ ಬಿಡುಗಡೆ: ಸಚಿವ ಪೂಜಾರಿ

    ಕುಂದಾಪುರ: ರಾಜ್ಯದಲ್ಲಿರುವ ದೇವಾಲಯಗಳಲ್ಲಿ ತ್ರಿಕಾಲ ಪೂಜೆ ಜಾರಿಗೆ ತಂದು ದೇವಾಲಯದ ತಸ್ತೀಕ್‌ನ್ನು 12 ಸಾವಿರದಿಂದ 24 ಸಾವಿರಕ್ಕೆ ಹೆಚ್ಚಿಸಲಾಗಿದೆ. ರಾಜ್ಯದ 25 ದೇವಾಲಯಗಳನ್ನು ಗುರುತಿಸಿ ಅಲ್ಲಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೇವಾಲಯ ಪ್ರವಾಸ ಯೋಜನೆಯಡಿ ಈ ವರ್ಷ ತಲಾ 1 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಮುಜರಾಯಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
        ಅವರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಳದ ವೆಬ್‌ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು. ದೇವಾಲಯಗಳಲ್ಲಿ ಕಟ್ಟುಪಾಡುಗಳಿರದೇ ದೇವರನ್ನು ದರ್ಶಿಸುವಂತಾಗಬೇಕು.ಹರಿಕೀರ್ತನೆ ಯೋಜನೆ ಜಾರಿಗೆ ತಂದು ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲಾಗುವುದು. ಇತಿಹಾಸದಲ್ಲಿ ಗತಿಸಿಹೋದ ಘಟನೆಗಳನ್ನು ಮರುಕಳಿಸುವಂತೆ ಮಾಡುವುದು ದೇವಾಲಯದಿಂದ ಆಗಬೇಕಾಗಿದೆ. ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ದೇವಾಲಯಗಳಲ್ಲಿ ಭಜನೆ ತರಬೇತಿ ನೀಡಲಾಗುವುದು. ಇದಕ್ಕಾಗಿ ಧರ್ಮಸ್ಥಳದ ಭಜನೋತ್ಸವ ತಂಡದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
        ಬೈಂದೂರು ಶಾಸಕ ಕೆ.ಲಕ್ಷ್ಮೀನಾರಾಯಣ ಮಾರಣಕಟ್ಟೆ ದೇವಸ್ಥಾನದ ಸ್ಥಳ ಪುರಾಣದ ಪುಸ್ತಕ ಬಿಡುಗಡೆ ಮಾಡಿದರು. ದೇವಸ್ಥಾನದ ಆನುವಂಶಿಕ ಮೊಕ್ತೇಸರ ಸಿ.ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಇಂದಿರಾ ಶೆಟ್ಟಿ, ಚಿತ್ತೂರು ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ವೈ. ಪ್ರಣಯ್‌ ಕುಮಾರ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಕಷ್ಣ ಪ್ರಸಾದ್ ಅಡ್ಯಂತಾಯ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಅತುಲ್ ಕುಮಾರ ಶೆಟ್ಟಿ, ಬೈಂದೂರು ಯುವಮೋರ್ಚಾದ ಅಧ್ಯಕ್ಷ ವೀರಭದ್ರ ಶೆಟ್ಟಿ ಉಪಸ್ಥಿತರಿದ್ದರು.
       ಶಾಸಕರು ಹಾಗೂ ಸಚಿವರನ್ನು ಸಮ್ಮಾನಿಸಲಾಯಿತು. ಸಿ. ರಘುರಾಮ ಶೆಟ್ಟಿ ಸ್ವಾಗತಿಸಿದರು. ಸರ್ವೋತ್ತಮ ಶೆಟ್ಟಿ ವಂದಿಸಿದರು.