ಯಕ್ಷಗಾನದಲ್ಲಿ ಪ್ರವಾಸಿ ಮೇಳಗಳ ದೀಂಗಣ

    ಹರಕೆಯ ರೂಪದಲ್ಲಿ ಬಹು ಪ್ರಸಿದ್ದಿಯನ್ನು ಕಂಡುಕೊಳ್ಳುತ್ತಿರುವ ಯಕ್ಷಗಾನ ಮೇಳಗಳು ಇತ್ತೀಚೆಗಿನ  ದಿನಗಳಲ್ಲಿ  ಇತರೆ ಕಲಾಪ್ರಕಾರಗಳಂತೆ ವಾಣಿಜ್ಯೀಕರಣದ ಹಾದಿಯಲ್ಲಿವೆ. ಇದರಿಂದ ಯಕ್ಷಗಾನವನ್ನೇ ನಂಬಿಕೊಂಡ ಕಲಾವಿದರು, ರಂಗತಂತ್ರಜ್ಞರಿಗೆ ಬದುಕಿನ ಬಗ್ಗೆ ಸಣ್ಣದೊಂದು ಭರವಸೆ ಮೂಡಿದೆ. ಆದರೂ ಕೂಡಾ ಪ್ರೇಕ್ಷಕರ ಕೊರತೆ ಎಲ್ಲಾ ಆಶಾಕಿರಣಗಳಿಗೂ ತಣ್ಣಿರೆರಚುತ್ತಿದೆ.
ಪ್ರಸ್ತುತ ಕರಾವಳಿಯ ಯಕ್ಷಗಾನ ಪ್ರಪಂಚದಲ್ಲಿ ಸಾಕಷ್ಟು ಸುಧಾರಣೆಗಳು ಆವಿಷ್ಕಾರಗಳು ನಡೆದಿವೆ. ಉದಾಹರಣೆಗೆ ಹಿಂದೆ ಬಯಲಾಟ ಹಾ ಡೇರೆ ಮೇಳಗಳು ಮಾತ್ರ ಇದ್ದರೆ ಇವತ್ತು ಅವುಗಳು ಪಂಕ್ತಿಯಲ್ಲಿ ಪ್ರವಾಸಿ ಮೇಳಗಳು, ಸಣ್ಣಪುಟ್ಟ ಕಾರ್ಯಕ್ರಮ ನೀಡಲು ಕಾಲಮಿತಿ ಮೇಳಗಳು ಬಂದಿವೆ. ದೇವಸ್ಥಾನದ ಹೆಸರಿನ ಮೂಲಕ ಹೊರಡುವ ಮೇಳಗಳಿಂತ ತುಸು ಭಿನ್ನವಾಗಿರುವ ಪ್ರವಾಸಿ ಮೇಳ, ಕಾಲಮಿತಿ ಪ್ರದರ್ಶನ ನೀಡುವ ಸಿಮಿತ ತಂಡಗಳು ಯಾವುದೇ ಬಾಹ್ಯ ಒತ್ತಡವಿಲ್ಲದೇ ವರ್ಷವಿಡೀ ತಿರುಗಾಟ ಮಾಡುತ್ತವೆ. ಅಂತಹ ಒಂದು ಪ್ರವಾಸಿ ಮೇಳದ ಕಲ್ಪನೆ ಈ ವರ್ಷದ ಯಕ್ಷರಂಗದಲ್ಲಿ ಒಂದಿಷ್ಟು ಸಂಚಲನ ಮೂಡಿಸಿದೆ.
 ಉಮೇಶ ಸುವರ್ಣ
ಪ್ರವಾಸಿ ಮೇಳಗಳು ರಾಜ್ಯವ್ಯಾಪಿಯಾಗಿ ತಿರುಗಾಟದ ಗುರಿಯನ್ನು ಹಾಕಿಕೊಂಡು ಯಕ್ಷರಂಗದ ಕಂಪನ್ನು ಎಲ್ಲ ಕಡೆಗಳಲ್ಲಿಯೂ ಪಸರಿಸುತ್ತಿವೆ. ಕೆಲವು ಪರಿಣಿತ ಕಲಾವಿದರ ನೇತೃತ್ವದಲ್ಲಿ ನಡೆಯುವ ಈ ಮೇಳಗಳು ಹೆಚ್ಚಾಗಿ ಪ್ರಸಿದ್ದ ಕಲಾವಿದರ ಸಮ್ಮೇಳನವನ್ನು ಹೊಂದಿರುತ್ತವೆ. ಇಡೀ ರಾತ್ರಿ ಆಟದ ಕಲ್ಪನೆಯ ಹೊರತು, ಯಕ್ಷಗಾನವನ್ನು ಚಿಕ್ಕದಾಗಿ ಚಿಕ್ಕವಾಗಿ ಕಾಣಲು ಸಾಧ್ಯವೆಂಬ ಪರಿಕಲ್ಪನೆಯನ್ನು ಈ ಪ್ರವಾಸಿ ಮೇಳಗಳು ಹುಟ್ಟು ಹಾಕಿವೆ.  ಅಂತಹ ಒಂದು ಸುಸ್ಸಜಿತ ಪ್ರವಾಸಿ ಮೇಳ ಹಂಗಳೂರಿನ ಯಕ್ಷಶ್ರೀ ಪ್ರವಾಸಿ ಮೇಳ. ಬಡಗುತಿಟ್ಟಿನ ಪ್ರಸಿದ್ದ ಭಾಗವತ ಉಮೇಶ ಸುವರ್ಣ ಗೋಪಾಡಿ ಅವರ  ಸಾರಥ್ಯದಲ್ಲಿ ಕಳೆದ ವರ್ಷ ಅಗಸ್ಟ್ 27ರಂದು ಅಸ್ತಿತ್ವಕ್ಕೆ ಬಂದ ಈ ಪ್ರವಾಸಿ ಮೇಳ ಒಂದು  ಪ್ರಬುದ್ದ ಮೇಳದಂತೆ ಎಲ್ಲ ರಂಗಪರಿಕೆರ, ವೇಷಭೂಷಣವನ್ನು ಹೊಂದಿದೆ. ತಿರುಗಾಟ ಪ್ರಾರಂಭಕ್ಕೂ ಮುಂಚೆ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದ ಈ ಮೇಳ ಈಗಾಗಲೇ ಹಲವಾರು ಕಡೆಗಳಲ್ಲಿ ಪ್ರದರ್ಶನನೀಡಿ ಕಲಾಭಿಮಾನಿಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.
ಹೊಸ ಮೇಳ, ಹೊಸ ಕಲ್ಪನೆಯನ್ನು ಜನ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎನ್ನುವ ನಿರೀಕ್ಷಗೆ ಯಕ್ಷಗಾನ ಕಲಾಭಿಮಾನಿಗಳು ಇವತ್ತಿನ ಬದಲಾವಣೆಗೆ ಇಂಥಹ ಪ್ರವಾಸಿ ಮೇಳಗಳು ಬೇಕು ಎನ್ನುವ ಪ್ರೋತ್ಸಾಹ ನೀಡಿರುವುದು ಅವರ ಪ್ರದರ್ಶನಗಳಲ್ಲಿ ಕಂಡು ಬರುತ್ತದೆ. ಪೌರಾಣಿಕ ಪ್ರಸಂಗಗಳನ್ನು ಸಂಕ್ಷಿಪ್ತಗೊಳಿಸಿಕೊಂಡು, ಪ್ರಸಿದ್ದ ಕಲಾವಿದರನ್ನು ಬಳಸಿಕೊಂಡು ಸೀಮಿತ ಸಮಯದಲ್ಲಿ ಕಲಾಭಿಮಾನಿಗಳಿಗೆ ಬೇಸರ ಉಂಟಾಗದ ರೀತಿಯಲ್ಲಿ ಪ್ರದರ್ಶನ ನೀಡುವಲ್ಲಿ ಸುವರ್ಣರ ಸಾರಥ್ಯದ ಯಕ್ಷಶ್ರೀ ಪ್ರವಾಸಿ ಮೇಳ ಯಶಸ್ಸು ಕಂಡಿದೆ. ಇವತ್ತು ಒಂದು ಕಡೆ ಯಕ್ಷಗಾನ ಜನಮಾನಸದಿಂದ ದೂರಾಗುತ್ತಿದೆ, ಯುವ ಜನಾಂಗ ಯಕ್ಷಗಾನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಅಪವಾದದ ನಡುವೆ, ಒಂದೆರಡು ತಾಸುಗಳಲ್ಲಿ  ಗುಣಮಟ್ಟದ ಯಕ್ಷಗಾನ ನೀಡಿದರೆ ಅದು ಜನರಿಗೆ ಹಿಡಿಸುತ್ತದೆ ಎಂಬೂದು ಇಂದಿನ ಕಾಲಮಾನದಲ್ಲಿ ಸರ್ವವೇದ್ಯವಾಗುತ್ತಿರುವ ಸಂದರ್ಭದಲ್ಲಿ ಪ್ರವಾಸಿ ಮೇಳಗಳಿಗೆ ಇದು ಮುಖ್ಯ ಅಂಶ. ಮದುವೆ, ಉಪಮಯನ, ಹುಟ್ಟು ಹಬ್ಬ, ಗೃಹ ಪ್ರವೇಶಗಳ್ಲಿ ಮನೋರಂಜನೆಗೆ ಪ್ರವಾಸಿ ಮೇಳಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದೇವಸ್ಥಾನದ ವತಿಯ ಮೇಳಗಳಿಗೆ ಮೊದಲೇ ಬುಕ್ಕಿಂಗ್ ಮಾಡಬೇಕು, ಸಂಘಟಕರಿಗೆ ಬೇಕಾದ ದಿನಾಂಕಕ್ಕೆ ಆಟ ಸಿಗುದಿಲ್ಲ. ಇಂಥಹ ಸಂದರ್ಭದಲ್ಲಿ ಪ್ರವಾಸಿ ಮೇಳಗಳು ಅನುಕೂಲಕ್ಕೆ ಬರುತ್ತವೆ. ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಗುಣಮಟ್ಟದ ಆಟವನ್ನು ನೋಡುವ ಅವಕಾಶವನ್ನು ಪ್ರವಾಸಿ ಮೇಳಗಳು ತಂದುಕೊಟ್ಟಿವೆ. ದೇವಸ್ಥಾನ, ದೈವದಮನೆ ಗೆಂಡ, ಹಾಲುಹಬ್ಬ, ಸಂಘ ಸಂಸ್ಥೆಗಳ ವಾರ್ಷಿಕೋತ್ಸವಗಳಲ್ಲಿ ಪ್ರವಾಸಿ ಮೇಳಗಳಿಗೆ ಬೇಡಿಕೆ ಬರುತ್ತಿದೆ. ಇವತ್ತು ಕಾರ್ಯಕ್ರಮದ ನಡುವೆಯೊಂದು ಚಂಡೆಯ ನಾದ ಬರಬೇಕು, ಒಂದು ಗಂಟೆಯಾದರೂ ಯಕ್ಷಗಾನ ಬೇಕು ಎನ್ನುವವವರಿಗೆ ಪ್ರವಾಸಿ ಮೇಳಗಳು ಅನುಕೂಲವಾಗಿವೆ.
ಪ್ರವಾಸಿ ಮೇಳಗಳಿಗೆ ಸೀಮಿತ ಸಮಯ ಅಂತಿಲ್ಲ. ವರ್ಷವಿಡೀ ಪ್ರದರ್ಶನ ನೀಡುತ್ತಾರೆ. ರಂಗಸಜ್ಜಿಕೆಯನ್ನು ಮೇಳವೇ ಹೊಂದಿಸಿಕೊಳ್ಳುತ್ತದೆ. ಸಂಘಟಕರು ಅಪೇಕ್ಷೆ ಪಟ್ಟ ಕಲಾವಿದರಿಗೂ ಅವಕಾಶ ನೀಡುತ್ತದೆ. ಉತ್ತಮ ಹಿಮ್ಮೇಳ, ಪ್ರಬುದ್ದ ಮುಮ್ಮೇಳ ಒಟ್ಟಾರೆಯ ಒಂದು ಸಣ್ಣ ಟೀಂ ಇವರದ್ದು. ಯಕ್ಷಶ್ರೀ ಪ್ರವಾಸಿ ಮೇಳ ಸಾಕಷ್ಟು ವಿಶೇಷವನ್ನು ಆ ನಿಟ್ಟಿನಲ್ಲಿ ಹೊಂದಿದೆ. 25ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಅನುಭವಿ ಗೋಪಾಡಿ ಉಮೇಶ ಸುವರ್ಣರ ಸಾರಥ್ಯದ ಈ ಮೇಳ ಯಶಸ್ಸಿನ ಹೆಜ್ಜೆ ಇಡುತ್ತಿದೆ. ವರ್ಷವಿಡೀ, ಎಲ್ಲಾ ಕಾಲಮಾನದಲ್ಲಿಯೂ ತಿರುಗಾಟ ಮಾಡುವ, ಪ್ರೇಕ್ಷಕರಿಗೆ ಯೋಗ್ಯ ಪ್ರದರ್ಶನ ನೀಡುವ ಇರಾದೆ ಅವರದ್ದು.

 * ಮಳೆಗಾಲಕ್ಕೆ ವೃತ್ತಿಪರ ಮೇಳಗಳು ವಿಶ್ರಾಂತಿಯಲ್ಲಿರುತ್ತವೆ. ಆಗ ಇಂಥಹ ಪ್ರವಾಸಿ ಮೇಳಗಳು ಪ್ರಸಿದ್ಧ ಕಲಾವಿದರು ಅತಿಥಿ ಆಗುವುದರಿಂದ ಪ್ರಬುದ್ಧವಾಗುತ್ತವೆ. ಬೇಸಿಗೆಗಿಂತ ಪ್ರವಾಸಿ ಮೇಳಗಳಿಗೆ ಮಳೆಗಾಲ ಸೀಸನ್.

ಲೇಖನ: ನಾಗರಾಜ್ ವಂಡ್ಸೆ
ಪತ್ರಕರ್ತರು, ಕುಂದಾಪುರ 
ಚಿತ್ರಗಳು: ಗೋಪಾಡಿ ಉಮೇಶ ಸುವರ್ಣ

ಮೇಳದ ಕೆಲವು ಪ್ರದರ್ಶನದ ಚಿತ್ರಗಳು