ಕುಂದಾಪುರದಲ್ಲಿ ಕೋತಿರಾಮನ ಝಲಕ್; 15 ನಿಮಿಷಗಳಲ್ಲಿ 6 ಮಹಡಿಯ ಕಟ್ಟಡ ಏರಿ ಸಾಹಸ

ಕುಂದಾಪುರ: ಪ್ರಸಿದ್ದ ಸಾಹಸಿಗ ವಾಲ್ ಕ್ಲೈಂಬಿಂಗ್ ಚತುರ ಚಿತ್ರದುರ್ಗದ  ಜ್ಯೋತಿರಾಜ್ ಯಾನೆ ಕೋತಿರಾಮ ನಗರದ ಶಾಸ್ತ್ರಿ ವೃತ್ತದ ಸಮೀಪದಲ್ಲಿರುವ 6 ಮಹಡಿಯ ಕಟ್ಟಡ ಜೆ.ಕೆ. ಟವರ್ಸ್‌ನ್ನು ಕೇವಲ 15 ನಿಮಿಷಗಳಲ್ಲೇ ಏರಿ ನೆರೆದಿದ್ದ ಸಹಸ್ರ ಸಂಖ್ಯೆಯ ನಾಗರಿಕರಲ್ಲಿ ಬೆರಗು ಮೂಡಿಸಿದರು. 
       ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಶಿಯೇಶನ್  ನ ಪದಗ್ರಹಣ ಸಮಾರಂಭಕ್ಕೆ ಕುಂದಾಪುರಕ್ಕೆ ಆಗಮಿಸಿದ ಅವರು ಸಂಘದ ಆಶ್ರಯದಲ್ಲಿ ಸಾಹಸ ಕಾರ್ಯ ನೆಡೆಸಿದರು. ಸಂಜೆ 4.15ರ ವೇಳೆಗೆ ಕೈಗೆ ಒಂದಿಷ್ಟು ಸುಣ್ಣ ಹಚ್ಚಿಕೊಂಡು ನೆಲ ಅಂತಸ್ತಿನಿಂದ ಏರಿದ  ಜ್ಯೋತಿರಾಜ್ ನೋಡ ನೋಡುತ್ತಿದ್ದಂತೆ  6 ಮಹಡಿಗಳ ಜೆ.ಕೆ. ಟವರ್ಸ್‌ ಏರಿ 4.30ಕ್ಕೆ ಕೆಳಕ್ಕಿಳಿದರು. 
    ಮಂಗ ಮರ ಏರಿದಷ್ಟೇ  ಸಲೀಸಾಗಿ ಕಟ್ಟಡ ಏರಿದ ಕೋತಿರಾಮ ಅವರು ಅದೇ ವೇಗದಲ್ಲಿ ಕೆಳಗಿಳಿದು ಅಚ್ಚರಿ ಮೂಡಿಸಿದರು. ಅವರ ಈ ಸಾಹಸ ಕಾರ್ಯ ನೋಡಲೆಂದು ಶಾಸ್ತ್ರೀ ವೃತ್ತದ ಸುತ್ತಮುತ್ತ ಅಪಾರ ಜನಸಂದಣಿ ನೆರೆದಿತ್ತು. ಕಟ್ಟಡದಿಂದ ಕೆಳಗಿಳಿಯುತ್ತಿದ್ದಂತೆ ಜನರು ಅಭಿನಂದನೆಯ ಮಹಾಪೂರವನ್ನೇ ಹರಿಸಿದರು. 
      ಜ್ಯೋತಿರಾಜ್ ಅವರ ಸಾಹಸ ಕಾರ್ಯ ವೀಕ್ಷಿಸಲೆಂದು ಬಂದ ಜನಸಂದಣಿಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು. ಪೊಲೀಸರು ಸುಗಮ ಸಂಚಾರಕ್ಕೆ ಬಳಿಕ ಅನುವು ಮಾಡಿಕೊಟ್ಟರು. ಇದೇ ಸಂದರ್ಭ ಜೆ.ಕೆ. ಟವರ್ಸ್‌ನ ಮಾಲೀಕ ಸತೀಶ್ ಶೆಟ್ಟಿ ಸಾಹಸ ಮಾಡಿದ ಜ್ಯೋತಿರಾಜ್ ಅವರನ್ನು ಸಹಸ್ರಾರು ನಾಗರಿಕರ ಸಮ್ಮುಖ ಸನ್ಮಾನಿಸಿದರು. 
      ಕಟ್ಟಡ ಏರುವ ಮೊದಲು ಜ್ಯೋತಿರಾಜ್ ಅವರನ್ನು ಛಾಯಾಗ್ರಾಹಕರ ಸಂಘದವರು ಬೃಹತ್ ಬೈಕ್ ರ್ಯಾಲಿ ಮೂಲಕ ಬಹುಮಹಡಿ ಕಟ್ಟಡದತ್ತ ಕರೆತಂದರು. 

ಜೋತಿರಾಜ್ ಯಾನೆ ಕೋತಿರಾಜನ ಕಥೆ:
        ತಮಿಳುನಾಡಿನ ತೇನಿ ಜಿಲ್ಲೆಯ ಕಾಮರಾಜ ನಗರದಲ್ಲಿ ಜನಿಸಿದ 25ರ ಹರೆಯದ ಜ್ಯೋತಿರಾಜ್ ಯಾನೆ ಕೋತಿರಾಜ್ ಚಿಕ್ಕ ವಯಸ್ಸಿನಲ್ಲಿಯೇ ಬಾಗಲಕೋಟೆಯಲ್ಲಿ ಬಂದು ನೆಲೆಸಿದ್ದರು. ಕೆಲವು ವರ್ಷಗಳ ಕಾಲ ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ ಜ್ಯೋತಿರಾಜ್ ಬಳಿಕ ಚಿತ್ರದುರ್ಗದತ್ತ ಮುಖಮಾಡಿದರು. ತನ್ನ 18ನೇ ವಯಸ್ಸಿನಲ್ಲಿ ಬದುಕಿನಲ್ಲಿ ಬೇಸರಗೊಂಡು ಸಾಯಲು ಪ್ರಯತ್ನಿಸಿದರೂ ಅದೃಷ್ಟವಶಾತ್ ಬದುಕಿಬಂದರು. ಸಾಯ ಹೋರಟ ಅವರ ಕೊನೆಯ ಪ್ರಯತ್ನವೇ ಅವರ ಬದುಕನ್ನು ಬದಲಿಸಿತು. ಕೋತಿಗಳು ಸಲೀಸಾಗಿ ಬಂಡೆಗಳನ್ನು ಏರುವುದನ್ನು ಕಂಡು ಪ್ರೇರಿತರಾಗಿ ಅದರಂತೆಯೇ ಬಂಡೆಗಳನ್ನು ಏರುವುದನ್ನು ಕಲಿತು ಯಶಸ್ವಿಯಾದರು. ಚಿತ್ರದುರ್ಗಕ್ಕೆ ಬರುವ ಪ್ರವಾಸಿಗರ ಎದುರು ಕೋಟೆಗಳನ್ನು ಏರಿ ತನ್ನ ಪ್ರತಿಭೆಯನ್ನು ತೋರ್ಪಡಿಸಿಕೊಂಡು ಕೋತಿರಾಜ್ ಎಂದೇ ಪ್ರಸಿದ್ದರಾದರು. 

ಮಾಧ್ಯಮಗಳೊಂದಿಗೆ ಮಾತನಾಡಿದ ಜ್ಯೋತಿರಾಜ್ ನನ್ನ ಸಾಹಸ ಕ್ರೀಡೆಯನ್ನು ಪ್ರಪಂಚಕ್ಕೆ ತೋರಿಸಬೇಕೆಂಬ ಮಹದಾಸೆ ಇದ್ದು ಪ್ರಪಂಚ ದಲ್ಲಿರುವ ಎಲ್ಲ ಬಂಡೆಗಳನ್ನು ಏರಬೇಕೆಂಬ ತವಕವಿದೆ. ಇದುವರೆಗಿನ ನನ್ನ ಸಾಹಸ ಯಾತ್ರೆಯಲ್ಲಿ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಎದುರಾಗಿದ್ದು ಜೋಗ್‌ಫಾಲ್ಸ್‌ನಲ್ಲಿ. ನೀರನ್ನು ಭೇದಿಸಿ ಮೇಲೇರುವ ಸಾಹಸ ಸಾಕಷ್ಟು ರಿಸ್ಕ್ ಆಗಿತ್ತು. ದೇವರು ಈ ಸಾಹಸ ಕಾರ್ಯದಲ್ಲಿ ಕೈ ಹಿಡಿದಿದ್ದರಿಂದ ಎಲ್ಲವೂ ಸುಖಮಯವಾಯಿತು ಎಂದರು. ಸತತ 10 ಬಾರಿ ಫಾಲ್ಸ್ ಕ್ಲೈಂಬಿಂಗ್ ಮಾಡಿದ್ದೇನೆ. ಮೈಸೂರಿನಲ್ಲಿರುವ 14 ಮಹಡಿ ಕಟ್ಟಡ ಏರಿದ್ದು ಇದುವರೆಗಿನ ಹೈಯೆಸ್ಟ್ ಕ್ಲೈಂಬಿಂಗ್ ಎಂದು ವಿವರಿಸಿದರು. ತಾನು ಈ ಮಟ್ಟಕ್ಕೆ ಬೆಳೆದು ಬಂದಿದ್ದು ಸಾರ್ವಜನಿಕರ ಪ್ರೇರಣೆ, ಪ್ರೋತ್ಸಾಹದಿಂದ. ಕರ್ನಾಟಕ ನನ್ನನ್ನು ಪೋಷಿಸಿದೆ. ಕನ್ನಡಿಗನಾಗಿ ನನ್ನ ಪ್ರತಿಭೆಯನ್ನು ಜಗತ್ತಿಗೆ ತೋರಿಸಬೇಕೆಂಬ ಇಚ್ಛೆ ಇದೆ.  ಕುಂದಾಪುರಕ್ಕೆ ಇದು ನನ್ನ ಮೊದಲ ಭೇಟಿಯಾಗಿದ್ದು ಇಲ್ಲಿನ ಜನರ ಪ್ರೋತ್ಸಾಹ ತನಗೆ ಖುಷಿ ತಂದಿದೆ ಎಂದರು.

ಸರಕಾರ ಪ್ರತಿಭೆಯನ್ನು ಗುರುತಿಸಬೇಕಿದೆ: ವಿದೇಶಗಳಲ್ಲಿ ವಾಲ್ ಕ್ಲೈಂಬಿಂಗ್‌ಗೆ ನೀಡುತ್ತಿರುವ ಪ್ರೋತ್ಸಾಹ ನಮ್ಮಲ್ಲಿ ನೀಡುತ್ತಿಲ್ಲ. ಕಳೆದ 4 ವರ್ಷಗಳಿಂದ ವಾಲ್ ಕ್ಲೈಂಬಿಂಗ್ ನಿರ್ಮಿಸಿಕೊಡಿ ಎಂಬ ಕನಿಷ್ಠ ಬೇಡಿಕೆಗೂ ಸರಕಾರ ಸ್ಪಂದಿಸದಿರುವುದು ನೋವುಂಟುಮಾಡಿದೆ. ನಾನು ಅನಕ್ಷರಸ್ಥ. ಆದರೆ ದೇವರ ದಯೆಯಿಂದ ಈ ಕಲೆ ನನ್ನಲ್ಲಿ ಅಂತರ್ಗತವಾಗಿದೆ. ಸಾಹಸ ಪ್ರವೃತ್ತಿಯ 20 ಹುಡುಗರಿಗೆ ಈಗಾಗಲೇ ಈ ಕಲೆಯ ಪರಿಚಯ ಮಾಡಿಸಿದ್ದೇನೆ. 2020ರ ಒಲಿಂಪಿಕ್ಸ್‌ಗೆ ವಾಲ್ ಕ್ಲೈಂಬಿಂಗ್‌ಗೆ ಅವಕಾಶ ದೊರಕಿದ್ದು ಅದಕ್ಕಾಗಿ ಮಹಮದ್ ರಫಿ, ಅರ್ಜುನ್, ಸಿದ್ಧೇಶ್, ಮಂಜು ರೆಡಿಯಾಗಿದ್ದಾರೆ. ತಾನು  ಭಾರತದಲ್ಲಿ ವಾಲ್ ಕ್ಲೈಂಬಿಂಗ್ ತರಬೇತಿ ಆರಂಭಿಸಬೇಕು. ಸಾಹಸ ಪ್ರವೃತ್ತಿಯ ಯುವಕರಿಗೆ ಪ್ರೇರಣೆ ನೀಡಬೇಕೆಂಬುದು ನನ್ನ ಅಭಿಲಾಷೆ ಎಂದರು.


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com