ಮತ್ತೆ ಆರಂಭಗೊಂಡ ಪಿಡಿಓಗಳ ಮೇಲಿನ ಹಲ್ಲೆ, ನಿಂದನೆ

ಕುಂದಾಪುರ: ಪಿಡಿಓಗಳನ್ನು ಮನಬಂದಂತೆ ನಿಂದಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು ಮುಂತಾದ ಕೆಟ್ಟ ಪ್ರವೃತ್ತಿ ಮತ್ತೆ ಮರುಕಳಿಸುತ್ತಿವೆ. ಕುಂದಾಪುರ ತಾಲೂಕಿನಲ್ಲಿ ಇತ್ತಿಚಿಗಷ್ಟೇ ತಹಸೀಲ್ದಾರರು ಹಾಗೂ ಪಿಡಿಓಗಳ ನಡುವೆ ಮಾತಿನ ಜಟಾಪಟಿ ನಡೆದು, ಪಿಡಿಓಗಳು ತಿರುಗಿಬಿದ್ದ ಘಟನೆ ತಣಿಯುವ ಮೊದಲೇ ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಓ ನಡುವಿನ ಸಮರ ತಾರಕಕ್ಕೇರಿದೆ.

    ಬೈಂದೂರು ಹೋಬಳಿಯ ಕೆರ್ಗಾಲು ಗ್ರಾಮ ಪಂಚಾಯತ್ ಪಿಡಿಓ ಜಯಂತ ಪಟಗಾರ್ ಎನ್ನುವವರ ಮೇಲೆ ಕೆರ್ಗಾಲ್ ಗ್ರಾಮ ಪಂಚಾಯತ್ ಅಧ್ಯಕ್ಷರು ಸಹಿತ ಐವರು ಹಲ್ಲೆ ನಡೆಸಿದ ಪ್ರಕರಣ ಪಿಡಿಓಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.
    ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ತಾಲೂಕಿನ ಪಿಡಿಓಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ. 
     ಮನವಿಗೆ ಪ್ರತಿಕ್ರಿಯಿಸಿರುವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಸರ್ಕಾರಿ ನೌಕಕರರು ಯಾರಿಗೂ ತಲೆಬಾಗಬೇಕಿಲ್ಲ. ತಾಲೂಕನ 3300 ಸರ್ಕಾರಿ ನೌಕರರಿಗೆ ರಕ್ಷಣೆಗೆ ಸಂಘ ಬದ್ಧವಿದೆ. ಯಾವ ಸರ್ಕಾರಿ ನೌಕರರಿಗೆ ಅನ್ಯಾಯವಾದರೂ ನಾವದನ್ನು ಖಂಡಿಸಿ, ಸೂಕ್ತ ನ್ಯಾಯ ಒದಗಿಸಿಕೊಡುವಲ್ಲಿ ಹೋರಾಟ ಮಾಡುತ್ತೇವೆ. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ. ಇಂಥಹ ಘಟನೆ ಮತ್ತೆ ಮರುಕಳಿಸಬಾರದು ಎಂದರು.
     ಬಳಿಕ ಡಿವೈಎಸ್‌ಪಿ ಅವರಿಗೆ ಮನವಿ ಸಲ್ಲಿಸಿದ ಸರ್ಕಾರಿ ನೌಕರಶರ ಸಂಘದ ಪದಾಧಿಕಾರಿಗಳು, ತಾಲೂಕಿನಲ್ಲಿ ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸರ್ಕಾರಿ ನೌಕಕರಿಗೆ ಭದ್ರತೆ ನೀಡಬೇಕು. ಆರೋಪಿಗಳನ್ನು ಬಂಧಿಸುವ ಕೆಲಸ ಆಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಚಂದ್ರಕಾಂತ್ ಉಪಸ್ಥಿತರಿದ್ದರು.

ಘಟನೆಯ ವಿವರ: ಮೂಲತಃ ಬೆಂಗಳೂರಿನವರಾದ ಜಯಂತ ಪಟಗಾರ್ ಕೆರ್ಗಾಲು ಗ್ರಾಮ ಪಂಚಾಯತ್‌ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮಾ.16ರಂದು ಜಿಪಿಎಸ್ ಸಂಗ್ರಹಿಸಲು ತೆರಳಿದ್ದರು. ಈ ಸಂದರ್ಭ ಬಿಲ್ ಕಲೆಕ್ಟರ್ ಸುಧಾಕರ ದೇವಾಡಿಗರ ಎಂಬುವರಲ್ಲಿ ಅಧ್ಯಕ್ಷೆ ರೇವತಿ ಪೂಜಾರಿ ಅವರು ತಮ್ಮ ಪಾನ್ ಕಾರ್ಡ್ ತರ ಹೇಳಿದ್ದರು. ಆಗ ಪಿಡಿಓ ಜಯಂತ ಪಟಗಾರ್ ವೈಯಕ್ತಿಕ ಕೆಲಸಕ್ಕೆ ಗ್ರಾ.ಪಂ.ಸಿಬ್ಬಂದಿಗಳನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ. 
       ಆಗ ಸುಮಾರು ಅಧ್ಯಕ್ಷೆ ರೇವತಿ ಪೂಜಾರಿ ಹಾಗೂ ರವಿಚಂದ್ರ, ರಾಜಗೋಪಾಲ, ರಮೇಶ, ಸಂತೋಷ, ಶೇಖರ ಪೂಜಾರಿ ಕರ್ತವ್ಯದಲ್ಲಿದ್ದ ಜಯಂತ ಪಟಗಾರ್ ಅವರ ಕುತ್ತಿಗೆಯನ್ನು ಹಿಡಿದು ಎಳೆದಾಡಿ ಹೊಡೆದು ಜೀವ ಬೆದರಿಕೆ ಹಾಕಿದ್ದು ಮಾತ್ರವಲ್ಲದೆ ಅತ್ಯಾಚರ ಪ್ರಕರಣ ದಾಖಲಿಸುತ್ತೇನೆ, ಕರ್ತವ್ಯದಿಂದ ಅಮಾನತು ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಲ್ಲದೇ ಜೀವ ಬೆದರಿಕೆಯನ್ನು ಹಾಕಿದ್ದರು ಎನ್ನಲಾಗಿದೆ.  ತಕ್ಷಣ ಹಲ್ಲೆಗೈದವರು ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
       ಹಲ್ಲೆಯಿಂದ ಅಘಾತಗೊಂಡ ಜಯಂತ್ ಪಟಗಾರ್ ಬೈಂದೂರು ಆಸ್ಪತ್ರೆಯಲ್ಲಿ ಕ್ಕೆ ದಾಖಲುಗೊಂಡಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬೈಂದೂರು ಠಾಣೆಯಲ್ಲಿ ದೂರನ್ನು ನೀಡಿದ್ದು, ನಂತರ ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.  ಮಾ.21ರ ತನಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಕರ್ತವ್ಯ ಅಡ್ಡಿಪಡಿಸಿ ಹಲ್ಲೆ ನಡೆಸಿದ ಬಗ್ಗೆ ರವಿಚಂದ್ರ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಉಳಿದಂತೆ ಆರೋಪಿಗಳ ಬಂಧನವಾಗಿಲ್ಲ. ಈ ಬಗ್ಗೆ ತಾಲೂಕಿನ ಎಲ್ಲ ಪಿಡಿಓಗಳು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರ ಮೂಲಕ ಸೂಕ್ತ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ.

  • ಉದ್ದೇಶಪೂರ್ವಕವಾಗಿ, ಯೋಜಿತವಾಗಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಗ್ರಂಥಾಲಯದ ಸಣ್ಣ ಬಾಗಿಲ ಮೂಲಕ ನಾನು ಹೊರ ಬಂದೆ. ಇಲ್ಲದಿದ್ದರೆ ಬೇರೊಂದು ಕಥೆ ಕಟ್ಟುತ್ತಿದ್ದರು. ಹೀಗೆ ನಡೆದರೆ ಮುಂದೆ ಸರ್ಕಾರಿ ನೌಕರರಿಗೆ ಕೆಲಸ ನಿರ್ವಹಿಸುವುದೇ ಕಷ್ಟ ಸಾಧ್ಯ’  - ಜಯಂತ ಪಟಗಾರ್

  • ಕರ್ತವ್ಯ ನಿರತ ಸರ್ಕಾರಿ ನೌಕಕರ ಮೇಲೆ ಹಲ್ಲೆ ಮಾಡುವುದು ಜಾಮೀನು ರಹಿತ ಅಪರಾಧ. ಗ್ರಾಮ ಮಟ್ಟದಲ್ಲಿ ಜನಾಸಾಮಾನ್ಯರಿಗೆ ಸೇವೆ ನೀಡುವ ಸರ್ಕಾರಿ ನೌಕರರ ಬಗ್ಗೆ ಹಗುರವಾಗಿ ನೋಡುವ ಪ್ರವೃತ್ತಿಯ ಬಗ್ಗೆ ಗಂಭೀರವಾದ ಚಿಂತನೆಗಳು ನಡೆಯಬೇಕು. ಸರ್ಕಾರಿ ನೌಕರರ ಸಂಘಟನೆ ಸಾಧಾ ಅನ್ಯಾಯಕ್ಕೊಳಗಾದ ನೌಕರರ ಪರ ಧ್ವನಿ ಎತ್ತಿ ನ್ಯಾಯ ಒದಗಿಸಿಕೊಡಲಿದೆ  - ದಿನಕರ ಶೆಟ್ಟಿ


ಕುಂದಾಪ್ರ ಡಾಟ್ ಕಾಂ- editor@kundapra.com