ಮಡಿಕೆ ಮಾರುವ ಹುಡುಗ ಕೃತಿ ಲೋಕಾರ್ಪಣೆ

ಓದು ಹಾಗೂ ಗ್ರಹಿಕೆ ಹೆಚ್ಚಿಸಿಕೊಂಡು ಬರಹ ಜನನುಡಿಯಾಗಬಲ್ಲದು: ಡಾ| ರೇಖಾ ಬನ್ನಾಡಿ
ಕುಂದಾಪುರ: ಜಾಗತೀಕರಣದ ಪರಿಣಾಮದಿಂದಾಗಿ ಸ್ವರ್ಧೆಗೆ ಬಿದ್ದಿರುವ ಯುವಜನರು ಸೃಜನಶೀಲತೆಯನ್ನೇ ಮರೆತಿದ್ದಾರೆ. ಪೂರ್ತಿ ಗ್ರಾಮೀಣ ಸೊಗಡನ್ನು ಕಳೆದುಕೊಳ್ಳದ, ಸಂಪೂರ್ಣವಾಗಿ ಹೊಸತನಕ್ಕೆ ತೆರೆದುಕೊಳ್ಳದ ಕುಂದಾಪುರದಲ್ಲಿಯೂ ಸಾಹಿತ್ಯದ ಆಸಕ್ತಿ ಕ್ಷೀಣಿಸುತ್ತಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಅಲ್ಲಲ್ಲಿ ಉತ್ತಮವಾದ ಸಾಹಿತ್ಯ ಸೃಷ್ಟಿಯಾಗುತ್ತಿರುವುದು ಅಭಿನಂದನಾರ್ಹ ಎಂದು ಉಪನ್ಯಾಸಕಿ ಡಾ| ರೇಖಾ ವಿ. ಬನ್ನಾಡಿ ಹೇಳಿದರು. 
ಅವರು ಕುಂದಪ್ರಭ ಟ್ರಸ್ಟ್ ನ ಆಶ್ರಯದಲ್ಲಿ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 'ಮಡಿಕೆ ಮಾರುವ ಹುಡುಗ' ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕವಿಯ ದಾರ್ಶನಿಕತೆ ಹಾಗೂ ಜನನುಡಿ ಕವಿತ್ವದಿಂದ ಹೊರಬೇರಬೇಕಾದರೆ ಆತನ ಓದು ಹಾಗೂ ಸಾಹಿತ್ಯ ಗ್ರಹಿಕೆಯ ಮಟ್ಟ ಹೆಚ್ಚಬೇಕು. ಮಡಿಕೆ ಮಾರುವ ಹುಡುಗ ಕೃತಿಯಲ್ಲಿ ಬಾಲ್ಯ ಹಾಗೂ ಬದುಕಿನ ಚಿತ್ರಣವನ್ನು ಕವಿಯು ಸರಳವಾಗಿ ಕಟ್ಟಿಕೊಟ್ಟಿರುವ  ಕೆಲಸ ಮಾಡಿದ್ದಾರೆ ಎಂದರು.
ಪುಸ್ತಕದ ಕುರಿತು ಮಾತನಾಡಿದ ಹಿರಿಯ ಸಾಹಿತಿ ಕೊ. ಶಿವಾನಂದ ಕಾರಂತ, ಮಡಿಕೆ ಮಾರುವ ಹುಡುಗ ಪುಸ್ತಕದ ಹೆಸರೇ ಕವಿ ಮನಸ್ಸುಗಳನ್ನು ಹಿಡಿದಿಡಬಲ್ಲ ಶಕ್ತಿಯನ್ನು ಹೊಂದಿದೆ. ಇಲ್ಲಿ ಕವಿ ಯಾರನ್ನೋ ಮೆಚ್ಚಿಸಲು ಕವನಗಳನ್ನು ಬರೆಯದೇ, ನೈಜತೆಯನ್ನು ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಭಾವುಕತೆಗೂ ಹೊಸ ರೀತಿಯ ಚೌಕಟ್ಟನ್ನು ಹಾಕಿಕೊಟ್ಟಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಮಾಜಿ ಕಸಾಪ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಮಾತನಾಡಿ ಕನ್ನಡ ಭಾಷೆಯನ್ನು ಯಾರೋ ಬಂದು ಉಳಿಸುವುದಿಲ್ಲ. ಎಲ್ಲಿಯೇ ಇದ್ದರೂ ಕೂಡ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಬೇಕಾದ ಜವಾಬ್ದಾರಿ ತಂದೆತಾಯಿಗಳದ್ದು. ಮಕ್ಕಳಲ್ಲಿ ಭಾಷೆಯ ಬಗೆಗೆ ಅಭಿಮಾನ ಮೂಡಿಸುವುದೇ ನಿಜವಾದ ಕನ್ನಡದ ಕೆಲಸ ಎಂದ ಅವರು, ಮಡಿಕೆ ಮಾರುವ ಹುಡುಗ ಕವನ ಸಂಕಲನದಲ್ಲಿ ನಮ್ಮೂರ ಮಣ್ಣಿನ ವಾಸನೆ ಇದೆ. ಈ ಪರಿಸರದ ದುಃಖ ದುಮ್ಮಾನಗಳನ್ನು ಕವಿ ಚನ್ನಾಗಿ ಚಿತ್ರಿಸಿದ್ದಾರೆಂದರು.

ಸಮಾರಂಭವನ್ನು ಸಿರಿ ಸೌಂದರ್ಯ ಕನ್ನಡ ಮಾಸಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಚಿಕ್ಕಣ್ಣ ಉದ್ಘಾಟಿಸಿದರು. ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ನ ನಿರ್ದೇಶಕ ರಾಮಮೋಹನ್, ಸಾಹಿತಿ ಡಾ| ರಂಜಿತಕುಮಾರ್ ಶೆಟ್ಟಿ, ನಟ ನಿರ್ದೇಶಕ ಕಾಸರಗೋಡು ಚಿನ್ನಾ ಉಪಸ್ಥಿತರಿದ್ದರು. 

     ಕಾರ್ಯಕ್ರಮದಲ್ಲಿ ಸಿರಿ ಸೌಂದರ್ಯ ಮಾಸ ಪತ್ರಿಕೆಯ ನಿರ್ದೇಶಕ ಸುರೇಶ್ ಚಿಕ್ಕಣ್ಣ, ಮಾಡಿಕೆ ಮಾರುವ ಹುಡುಗ ಕವನ ಸಂಕಲನದ ಕವಿ ಸಂದೀಪ ಶೆಟ್ಟಿ ಹೆಗ್ಗದ್ದೆ, ವಸ್ತು ಪ್ರದರ್ಶನ ಆಯೋಜಿಸಿದ ಜಿ.ಬಿ. ಕಲೈಕಾರ್ ಅವರನ್ನು ಗೌರವಿಸಲಾಯಿತು.
     ಕುಂದಪ್ರಭ ಟ್ರಸ್ಟ್ ನ ಯು,ಎಸ್. ಶೆಣೈ ಸ್ವಾಗತಿಸಿ, ಕೃತಿಕಾರ ಸಂದೀಪ್ ಶೆಟ್ಟಿ ಹೆಗ್ಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ನ್ಯಾಯವಾದಿ ರವಿಕುಮಾರ್ ಗಂಗೊಳ್ಳಿ ಧನ್ಯವಾದಗೈದರು, ಲೇಖಕ ಜಯವಂತ ಪೈ ವಂದಿಸಿದರು.
  ಸಮಾರಂಭದಲ್ಲಿ ಜಿ. ಬಿ. ಕಲೈಕಾರ್ ಅವರ ಸಂಗ್ರಹದ ಅಪೂರ್ವ ವಸ್ತುಗಳ ಪ್ರದರ್ಶನ ಹಾಗೂ ಸಂಗೀತ ರಸಮಂಜರಿಯನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: ಮೊಯ್ಲಿ ಸರಸ್ವತಿ ಸಮ್ಮಾನಕ್ಕೆ ಅರ್ಹರು: ಎ.ಎಸ್.ಎನ್ ಹೆಬ್ಬಾರ್

















ಕುಂದಾಪ್ರ ಡಾಟ್ ಕಾಂ- editor@kundapra.com