ಅಂಗಡಿ ಮುಂದೆ ಮಾಟ ಮಂತ್ರ. ವಿಜ್ಞಾನ ಶಿಕ್ಷಕನ ಮುಂದೆ ನಡಿಲಿಲ್ಲ ತಂತ್ರ



ಕುಂದಾಪುರ: ಭಯ ಎಂಬುದು ಜಾತಿ ಧರ್ಮವನ್ನೂ ಮೀರಿದ್ದು! ಮೊದಲು ಎದುರಾಗಿರುವ ಕಂಟಕಕ್ಕೊಂದು ಅಂತ್ಯ ಸಿಕ್ಕರೆ ಸಾಕು ಎಂದು ಜನಸಾಮಾನ್ಯರು ಬಯಸುತ್ತಾರೆ. ಇಂದು ಮುಂಜಾನೆಯೇ ಕುಂದಾಪುರ ಪೇಟೆಯ ಪ್ಯಾನ್ಸಿ ಅಂಗಡಿಯ ಮುಂಭಾಗದಲ್ಲಿ ಯಾರೋ ಕಿಡಿಗೇಡಿಗಳಿಂದಾಗಿ ಎದುರಾದ ಕಂಟಕದಿಂದಾಗ ಅಂಗಡಿಯ ಮಾಲಿಕರನ್ನು ಕ್ಷಣಕಾಲ ವಿಚಲಿತರಾಗುವಂತೆ ಮಾಡಿತ್ತಾದರೂ ಅಲ್ಲಿಗೆ ವಿಜ್ಞಾನದ ಶಿಕ್ಷಕರೊರ್ವರಿಂದ ಪರಿಸ್ಥಿತಿ ತಿಳಿಯಾಯಿತು.

ಏನಿದು ಘಟನೆ?
     ಕುಂದಾಪುರದ ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ, ಬ್ಯೂಟಿ ಕ್ವೀನ್ ಅಂಗಡಿ ಮಾಲಕ ಹುಸೇನ್ ಹೈಕಾಡಿ ಎಂಬುವರ ರಾತ್ರಿ ಎಂದಿನಂತೆಯೇ ಶಟರ್ ಎಳೆದು ಅದರ ಬಲಭಾಗದಲ್ಲಿ ಬೀಗ ಹಾಕಿ ಮನೆಗೆ ತೆರಳಿದ್ದರು. ಬೆಳಿಗ್ಗೆ ಬಂದು ನೋಡಿದರೆ, ಶಟರಿನ ಎಡಭಾಗದಲ್ಲಿ ಒಂದು ಬೊಂಡವನ್ನಿಟ್ಟು, ಅದರ ಮೇಲೊಂದು ನಿಂಬೆ ಹಣ್ಣು ಇಡಲಾಗಿತ್ತು. ಬೊಂಡದ ಸುತ್ತ ಮೂರೂ ಬದಿಗೆ ಮೂರು ನಿಂಬೆ ಹಣ್ಣು ಇಡಲಾಗಿತ್ತು. ಕುಂಕುಮ ಮತ್ತು ಅರಶಿನಪುಡಿ ಚೆಲ್ಲಲಾಗಿತ್ತು. ಉರಿಸದ ಊದುಬತ್ತಿಯ ಕಟ್ಟನ್ನು ಶೆಟರ್‌ಗೆ ಸಿಕ್ಕಿಸಿಡಲಾಗಿತ್ತು. ಬೆಳಿಗ್ಗೆ ಸ್ಥಳೀಯ ಉಪನ್ಯಾಸಕರೊಬ್ಬರು ನಡೆದು ಬರುತ್ತಿದ್ದಾಗ ಗಮನಿಸಿ ಅಂಗಡಿ ಮಾಲೀಕರಿಗೆ ಸುದ್ಧಿ ಮುಟ್ಟಿಸಿದ್ದಾರೆ.
     ತಕ್ಷಣ ಅಂಗಡಿಗೆ ಬಂದ ಹುಸೇನ್ ಹೈಕಾಡಿಗೆ ಭಯಗೊಂಡಿದ್ದಾರೆ. ಗಲಿಬಿಲಿಗೊಂಡ ಅಂಗಡಿ ಮಾಲೀಕ ವಿಜಯವಾಣಿ ವರದಿಗಾರ ಜಯಶೇಖರ್ ಮಡಪ್ಪಾಡಿಗೆ ವಿಷಯ ತಿಳಿಸಿದ್ದು, ತಕ್ಷಣ ಪವಾಡ ರಹಸ್ಯ ಬಯಲು ಪರಿಣತ, ವಿಜ್ಞಾನ ಶಿಕ್ಷಕ ಉದಯ ಗಾಂವ್ಕರ್ ಅವರ ಜೊತೆಗೆ ವಿಜಯವಾಣಿ ವರದಿಗಾರ ಸ್ಥಳಕ್ಕೆ ಆಗಮಿಸಿ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದ್ದಾರೆ. ನಂತರ ಅಂಗಡಿಯ ಮುಂಭಾಗದ ಸ್ಥಳವನ್ನು ಸ್ವಚ್ಛಗೊಳಿಸಿ, ಅಲ್ಲಿ ಇರಿಸಲಾಗಿದ್ದ ನಿಂಬೆಹಣ್ಣನ್ನು ಕತ್ತರಿಸಿ ಜ್ಯೂಸ್ ತಯಾರಿಸಿದ ಉದಯ ಗಾಂವ್ಕರ್ ಅಲ್ಲಿಯೇ ಅದನ್ನು ಕುಡಿದು ಬೇರೆಯವರಿಗೂ ನೀಡಿ ಕುಡಿಯಲು ಹೇಳಿ ಈಗ ಆರೋಗ್ಯವಾಗಿದ್ದಾರೆ.
    ಮಂತ್ರಿಸಿ ಇಟ್ಟಿದ್ದ ಲಿಂಬುವನ್ನು ಕತ್ತರಿಸಿ ಮಾಟಮಂತ್ರವೆಂಬುದು ಮೂಡನಂಬಿಕೆ ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ನೀಡಿರುವ ಗಾಂವ್ಕರ್, ಮಾಟಮಂತ್ರಕ್ಕೆಲ್ಲ ಹೆದರುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನೂ ಲಿಂಬು ಜ್ಯೂಸ್ ತಯಾರಿಸಿ ಕುಡಿಯುವ ಮೂಲಕ ಕಿಡಿಗೇಡಿಗಳಿಗೆ ರವಾನಿಸಿದ್ದಾರೆ!
ಕುಂದಾಪ್ರ ಡಾಟ್ ಕಾಂ- editor@kundapra.com