ಮದುಮಗಳು ನಾಪತ್ತೆ. ಮದುವೆಯ ಮನೆಯಲ್ಲೀಗ ನೀರವ ಮೌನ

ಬೈಂದೂರು: ಆ ಮನೆಯವರೆಲ್ಲಾ ಮದುವೆಯ ಸಂಭ್ರಮದಲ್ಲಿದ್ದರು. ಇನ್ನೇನು ಎರಡು ದಿನ ಕಳೆದರೆ ಮದುವೆ ನಡೆದು ಹೋಗುವುದಿತ್ತು. ಆದರೆ ಮದುಮಗಳು ಮಾತ್ರ ಏಕಾಏಕಿ ನಾಪತ್ತೆಯಾಗಿದ್ದಾಳೆ! ಮದುವೆಯ ಸಡಗರವಿರಬೇಕಿದ್ದ ಮನೆಯಲ್ಲೀಗ ಈಗ ನೀರವ ಮೌನ ಆವರಿಸಿಕೊಂಡಿದೆ. ಇತ್ತಕಡೆ ವಧುವಿನ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಆಕೆಯ ಪ್ರಿಯಕನಾಗಿರುವ ಅನ್ಯಕೋಮಿನ ಯುವಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ನಾಪತ್ತೆಯಾದವಳ ಸುಳಿವು ಮಾತ್ರ ಇನ್ನೂ ಲಭ್ಯವಾಗಿಲ್ಲ. 

ಪ್ರಕರಣದ ವಿವರ:
   ಶಿರೂರು ಗ್ರಾಮದ ದೊಂಬೆಯ ಪಡಿಯಾರಹಿತ್ಲು ರಾಮಚಂದ್ರ ಎಂಬುವವರ ಪುತ್ರಿ ಮಮತಾ (24) ಎಂಬುವವರಿಗೆ ಮೇ.3ರಂದು ಹತ್ತಿರದ ವರನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮಮತಾ ಸುಹೈಲ್ ಎಂಬ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ತನಗೆ ಈ ಮದುವೆ ಇಷ್ಟವಿಲ್ಲ. ತಾನು ಪ್ರೀತಿಸುತ್ತಿರುವ ಹುಡುಗನನ್ನೇ ಮದುವೆಯಾಗುವುದಾಗಿ ಮನೆಯವರಲ್ಲಿ ತಿಳಿಸಿದಾಗ, ಮನೆಯವರು ಇದಕ್ಕೆ ಸಹಜವಾಗಿ ಪ್ರತಿರೋಧವೊಡ್ಡಿದ್ದರು. ಮೊದಲು ಮನೆಯವರು ಒಪ್ಪಿದ ಹುಡುಗನೊಂದಿಗೆ ವಿವಾಹವಾಗಲು ಅರೆಸಮ್ಮತಿ ಸೂಚಿಸಿದ್ದ ಮಮತಾ ಮದುವೆ ದಿನ ಹತ್ತಿರವಿರುವಾಗ ಮತ್ತೆ ಕ್ಯಾತೆ ತೆಗೆದಿದ್ದಳು. 
    ಎಪ್ರಿಲ್ 28ನೇ ತಾರೀಕಿನಂದು ಬೈಂದೂರು ಠಾಣೆಗೆ ಬಂದ ಮಮತಾ ತನಗೆ ಇಷ್ಟವಿಲ್ಲದ ಹುಡುನೊಂದಿಗೆ ಮನೆಯವರು ಒತ್ತಾಯದಿಂದ ಮದುವೆ ಮಾಡಿಸುತ್ತಿದ್ದಾರೆ. ಈ ವಿಚಾರವಾಗಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು. ತಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು ಆತನನ್ನೇ ಮದುವೆಯಾಗುವುದಾಗಿ ತಿಳಿಸಿದ್ದಾಳೆ. ಬಳಿಕ ತನ್ನ ಪ್ರಿಯಕರನಿಗೂ ಪೋನ್ ಮಾಡಿ ಪೊಲೀಸ್ ಠಾಣೆಗೆ ಬರಹೇಳಿದ್ದಾಳೆ. ಪೊಲೀಸರು ಆಕೆಯ ಮನೆಯವರನ್ನು ಕರೆಯಿಸಿಕೊಂಡು ಅವರ ಸಮ್ಮುಖದಲ್ಲಿಯೇ ಹುಡುಗ ಹುಡುಗಿ ಇಬ್ಬರಿಗೂ ಬುದ್ಧಿವಾದ ಹೇಳಿ, ಮುಚ್ಚಳಿಕೆ ಬರೆಯಿಸಿಕೊಂಡು ಮನೆಗೆ ಕಳುಹಿಸಿದ್ದಾರೆ. ಆ ಬಳಿಕ ಮನೆಯಲ್ಲಿಯೂ ಇದೆ ವಿಚಾರಕ್ಕೆ ರಾದ್ದಾಂತ ನಡೆದಿತ್ತು ಎನ್ನಲಾಗಿದೆ. 
   ತಂದೆ ಮರ್ಯಾದೆಗಂಜಿ ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡಿಕೊಂಡಿದ್ದಾರೆನ್ನಲಾಗಿದೆ. ಒಂದು ದಿನ ಸುಮ್ಮನಾಗಿದ್ದ ಮಮತಾ ಎಪ್ರಿಲ್ 30ರ ಬೆಳಿಗ್ಗೆ ಮನೆಯಿಂದ ಹೊರಗೆ ಹೊದವಳು ಮರಳಿ ಬಂದಿಲ್ಲ. ಸಂಜೆಯ ವರೆಗೆ ಸ್ನೇಹಿತರ ಮನೆಗೆ ಹೊಗಿರಬಹುದು ಎಂದು ತಿಳಿದಿದ್ದ ಮನೆಯವರು ರಾತ್ರಿಯಾದರೂ ಮಗಳು ಮನೆಗೆ ಬಾರದಿದ್ದುದರಿಂದ ಗಾಬರಿಗೊಂಡು ಕೆಲವು ಸಂಬಂಧಿ ಹಾಗೂ ಮಮತಾಳ ಸ್ನೇಹಿತೆಯರ ಮನೆಯಲ್ಲಿ ವಿಚಾರಿಸಿದ್ದಾರೆ. ಅಲ್ಲಿಯೂ ಇಲ್ಲದಿರುವುದು ಖಾತ್ರಿಯಾದಾಗ ಆಕೆಯ ಪ್ರೀಯಕರನೊಂದಿಗೆ ಹೋಗಿರಬೇಕೆಂದು ಅನುಮಾನಗೊಂಡು ಆಕೆಯ ಪ್ರಿಯಕರನ ವಿರುದ್ಧ ಮೇ.1ರ ಬೆಳಿಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಕೆ ಆರಂಭಿಸಿದ್ದು ಆಕೆಯ ಪ್ರಿಯಕರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆಕೆ ತನ್ನೊಂದಿಗೆ ಬಂದಿಲ್ಲ. ಮುಚ್ಚಳಿಕೆ ಬರೆಸಿಕೊಂಡ ಬಳಿಕ ಆಕೆ ಮೂರ್ನಾಲ್ಕು ಬಾರಿ ಕರೆಮಾಡಿದ್ದಳು. ಮತ್ತೆ ಸಂಪರ್ಕಿಸಿಲ್ಲ ಎಂದು ಹೇಳಿಕೊಂಡಿದ್ದಾನೆ. ವಿವಿಧ ಹಂತದಲ್ಲಿ ತನಿಕೆ ಮುಂದುವರಿಸಿರುವ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ಉಪನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದ ತಂಡ ಆಕೆಯ ಮನೆಯವರ ಹೇಳಿಕೆಗಳನ್ನು ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

ನಾಲ್ಕು ವರ್ಷದ ಪ್ರೀತಿ:
  ಕಾಣೆಯಾಗಿರುವ ಮಮತಾ ಹಾಗೂ ಭಟ್ಕಳ ಮೂಲದ ಸುಹೈಲ್ ಗೆ ನಾಲ್ಕು ವರ್ಷಗಳಿಂದ ಪ್ರೀತಿ ಇತ್ತೆನ್ನಲಾಗಿದೆ. ಹುಡುಗ ಅನ್ಯ ಕೋಮಿನವನಾದ್ದರಿಂದ ಇಬ್ಬರ ಮನೆಯಲ್ಲೂ ತೀವ್ರ ವಿರೋಧವಿತ್ತು. ಹುಡುಗಿಯ ಮನೆಯಲ್ಲಿ ಆಕೆಯ ವಿರೋಧದ ನಡುವೆಯೂ ಬೇರೊಬ್ಬ ಹುಡುಗನೊಂದಿಗೆ ವಿವಾಹವನ್ನು ನಿಶ್ಚಯ ಮಾಡಿದ್ದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದ ಮಮತಾ ಎ.28ರಂದು ಠಾಣೆಗೆ ಬಂದು ತನ್ನ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದಾಳೆ. ಪ್ರೇಮ ಪ್ರಕರಣ ಠಾಣೆ ಮಟ್ಟಿಲೇರಿ ಪೊಲೀಸರು  ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಯಿಸಿಕೊಂಡ ಬಳಿಕ ಪ್ರಿಯಕರನೂ ಆಕೆಯಿಂದ ದೂರವೇ ಉಳಿದಿದ್ದ ಎನ್ನಲಾಗಿದೆ.

ಮದುವೆಯಾಗುವ ಒಲ್ಲೆ ಎಂದನೇ ವರ?
  ಇನ್ನೊಂದೆಡೆ ಮಮತಾಳ ಪ್ರೇಮ ಪ್ರಕರಣ ಠಾಣೆಯ ಮೇಟ್ಟಿಲೇರಿವುದು ತಿಳಿದ ವರ ಆಕೆಯನ್ನು ಮದುವೆಯಾಗಲು ನೀರಾಕರಿಸಿದ್ದ ಎಂಬ ಮಾತುಗಳೂ ಕೇಳಿ ಬಂದಿವೆ. ಅತ್ತ ಪ್ರಿಯಕರನೂ ಇಲ್ಲ. ಇತ್ತ ಮದುವೆಗೆ ನಿಶ್ಚಯವಾದ ವರನೂ ಇಲ್ಲ ಎಂಬಂತಾಗಿತ್ತು ಆಕೆಯ ಸ್ಥಿತಿ. ಇದರಿಂದ ಮಮತಾ ಮತ್ತಷ್ಟು ನೊಂದುಕೊಂಡು ಕಠಿಣ ನಿರ್ಧಾರವನ್ನು ತೆಗೆದುಕೊಂಡಿರಬಹುದು.

ಏಲ್ಲಿ ಹೋದಳು ಮಮತಾ? ಪ್ರಿಯಕರ ನಾಟಕವಾಡುತ್ತಿದ್ದಾನೆಯೇ?
  ಎಪ್ರಿಲ್ 30ರಂದು ಮನೆಯಿಂದ ತೆರಳಿದ ಮಮತಾಳ ಸುಳಿವು ಈವರೆಗೆ ಪತ್ತೆಯಾಗಿಲ್ಲ. ಸ್ನೇಹಿತರು, ಸಂಬಂಧಿಗಳ ಮನೆಯಲ್ಲಿ ಇಲ್ಲ ಎಂಬುದು ಸದ್ಯಕ್ಕೆ ಖಾತ್ರಿಯಾಗಿದೆ. ಪ್ರಿಯಕರ ತನ್ನ ಬಳಿ ಬಂದಿಲ್ಲ ಎಂದು ಹೇಳಿಕೊಂಡಿದ್ದಾನೆ. ಆದರೆ ಈತನೇ ನಾಟಕವಾಡುತ್ತಿರಬಹುದೇ ಎಂಬ ಅನುಮಾನ ಕೂಡ ಕೆಲವರನ್ನು ಕಾಡುತ್ತಿದೆ. ಮಮತಾಳ ಮನೆಯವರೂ ಕೂಡ ಆಕೆಯ ಪ್ರಿಯಕರನೇ ನಾಟಕವಾಡುತ್ತಿದ್ದಾನೆಂದು ಆರೋಪಿಸಿದ್ದಾರೆ.
   ಮನೆಬಿಟ್ಟ ತೆರಳಿದ ಯುವತಿಯ ತನ್ನ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಮನೆಯಲ್ಲೇ ಬಿಟ್ಟು ತೆರಳಿದ್ದಾಳೆ, ಹಣ, ಚಿನ್ನವನ್ನು ಕೊಂಡೊಯ್ದಿಲ್ಲ. ಇದು ತನಿಕೆಯ ಹಾದಿ ತಪ್ಪಿಸುವ ಪ್ರಯತ್ನ ಇದ್ದಿರಬಹುದೇ ಅಥವಾ ನಿಶ್ಚಯವಾದ ಮದುವೆಯನ್ನು ತಪ್ಪಿಸುವ ಮಾಡಿದ ಕೆಲಸವೇ ಎಂಬ ಅನುಮಾನ ಕಾಡುತ್ತಿದೆ? ಇನ್ಯಾವುದೋ ಅನಾಹುತಕ್ಕೆ ತೆರೆದುಕೊಂಡಳೇ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿ ಯಾವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇತ್ತಕಡೆ ಮಮತಾಳ ಮನೆಯಲ್ಲಿ ತಂದೆ ಮಗಳಿಂದಾಗಿ ಅನಾರೋಗ್ಯ ಪೀಡಿತರಾಗಿದ್ದಾರೆ. ಅತ್ತಿಗೆಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದಾರೆ.
 File update on 01-05-2015
Short link- http://bit.ly/bride-missing