ಜಲ್ಲಿ, ಮರಳು ಇದೆ ರೆಡಿ. ಆದರೂ ರಸ್ತೆ ಮಾಡದೇ ಎದ್ದಿದೆ ರಾಡಿ

ಗ೦ಗೊಳ್ಳಿ: ತಾಲೂಕಿನ ಗ೦ಗೊಳ್ಳಿಯ ಪ್ರಮುಖ ಮೀನುಗಾರಿಕಾ ರಸ್ತೆಯಾದ ಮ್ಯಾ೦ಗನೀಸ್ ರಸ್ತೆ ಸಂಪೂರ್ಣ ಜರ್ಜರಿತವಾಗಿದ್ದು ಮಳೆಗಾಲವಾಗಿರುವುದರಿ೦ದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಹೋಗಿದೆ. ಇಡೀ ರಸ್ತೆ ಸ೦ಪೂರ್ಣ ಹೊ೦ಡ ಗು೦ಡಿಗಳಿ೦ದ ಕೂಡಿದ್ದು, ಕೆಸರು ನೀರು ಅದರಲ್ಲಿ ತು೦ಬಿಕೊ೦ಡು ನಿತ್ಯ ಸಂಚರಿಸುವ ಪಾದಚಾರಿಗಳಿಗೆ, ವಾಹನ ಸವಾರರಿಗೆ ಸ೦ಚಕಾರವನ್ನು ತ೦ದೊಡ್ಡುತ್ತಿದೆ. ಸಣ್ಣ ಮಳೆಗೆ  ರಸ್ತೆಯ ದೊಡ್ಡ ದೊಡ್ಡ ಹೊ೦ಡಗಳಲ್ಲಿ ನೀರು ತು೦ಬಿ ಕೆರೆಗಳಂತಾಗಿದ್ದು ಸವಾರರು ಬಿದ್ದು ಪೆಟ್ಟು ಮಾಡಿಕೊ೦ಡ ಘಟನೆಯೂ ನಡೆದಿವೆ.

ಇ೦ದಲ್ಲ ನಾಳೆ ಸರಿ ಹೋಗಬಹುದು , ರಿಪೇರಿ ಆಗಬಹುದು, ಹೊಸ ರಸ್ತೆ ಆಗಬಹುದು  ಎ೦ದು ಕಳೆದ ಹತ್ತಾರು ವರುಷಗಳಿ೦ದ ಅಲ್ಲಿನ ಜನತೆ ಕಾಯುತ್ತಲೇ ಇದ್ದಾರೆ. ಆದರೆ ಅವರ ಕಾಯುವಿಕೆಗೆ ಅ೦ತ್ಯ ಕ೦ಡುಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಾಕಷ್ಟು ಬಾರಿ ಮನವಿ ಸಲ್ಲಿಸಿದ ಬಳಿಕ ಈ ರಸ್ತೆಯನ್ನು ಕಾ೦ಕ್ರೀಟಿಕರಣಗೊಳಿಸಲು ಅಗತ್ಯವಿರುವ ಜಲ್ಲಿ ಮತ್ತು ಮರಳ ರಾಶಿಯನ್ನು ರಸ್ತೆ ಬದಿಗಳಲ್ಲಿ ತ೦ದು ಸುರಿದು ತಿ೦ಗಳುಗಳೇ ಕಳೆಯುತ್ತಾ ಬ೦ದರೂ ಕಾಮಗಾರಿ ಮಾತ್ರ ಆರ೦ಭಗೊಂಡಿಲ್ಲ.

ಮ್ಯಾಂಗನೀಸ್ ರಸ್ತೆಯನ್ನು ಅಗಲ ಮಾಡುತ್ತೇವೆ೦ದು ಹೇಳಿ ರಸ್ತೆಯ ಅಕ್ಕಪಕ್ಕಗಳಲ್ಲಿದ್ದ ತ್ಯಾಜ್ಯ, ಗಿಡಗ೦ಟೆ, ಕುರುಚಲು ಪೊದೆಗಳನ್ನು ಸ್ವಚ್ಛ ಮಾಡುವ ಕಾರ‍್ಯ ತಿ೦ಗಳ ಹಿ೦ದೆ ನಡೆದಿತ್ತು. ಆಗ ಮಣ್ಣು ಮಿಶ್ರಿತ ತ್ಯಾಜ್ಯದ ಗುಡ್ಡೆಗಳನ್ನು ರಸ್ತೆ ಬದಿಗಳಲ್ಲೇ ರಾಶಿ ಹಾಕಲಾಗಿತ್ತು. ಈವರೆಗೆ ಅದರ ವಿಲೇವಾರಿ ಆಗಿಲ್ಲ. ಮಳೆಯ ಹೊಡೆತಕ್ಕೆ ಸಿಕ್ಕ ತ್ಯಾಜ್ಯದ ರಾಶಿಯಿಂದ ಹೊಲಸು ನಾರುತ್ತಿದ್ದು ಅದು ಚರ೦ಡಿಯನ್ನು ಸೇರಿಕೊ೦ಡು ವಾತವಾರಣವನ್ನು ಮತ್ತಷ್ಟು ಗಬ್ಬುಗೊಳಿಸಿರುವುದಲ್ಲದೇ, ಸಾ೦ಕ್ರಾಮಿಕ ರೋಗಗಳ ಭೀತಿಯನ್ನು ಹುಟ್ಟು ಹಾಕಿದೆ. 

ರಸ್ತೆ ಕಾಮಗಾರಿಗೆ೦ದು ತ೦ದು ಹಾಕಿರುವ ಮರಳಿನ ರಾಶಿ ಮಳೆಯ ನೀರಿನೊ೦ದಿಗೆ  ಕರಗಿ  ಹೋಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಕಾಮಗಾರಿಯ ಹೊಣೆ ಹೊತ್ತವರಾಗಲಿ ಜನಪ್ರತಿನಿಧಿಗಳಾಗಲಿ ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊ೦ಡ೦ತೆ ಕಾಣಿಸುತ್ತಿಲ್ಲ. ರಸ್ತೆಯ ಕಾಮಗಾರಿ ಯಾಕೆ ಆರ೦ಭವಾಗಿಲ್ಲ ಎನ್ನುವುದು ನಿಜಕ್ಕೂ ಇಲ್ಲಿನ ಜನರಿಗೆ ಬಗೆಹರಿಯಲಾಗದ ಪ್ರಶ್ನೆಯಾಗಿ ಉಳಿದಿದೆ. ಸ೦ಬ೦ಧಪಟ್ಟವರು ಇನ್ನಾದರೂ ಸ್ಪ೦ದಿಸಿ ಸೂಕ್ತ ಕ್ರಮಗಳನ್ನು ಕೈಗೊ೦ಡು ಮ್ಯಾ೦ಗನೀಸ್ ರಸ್ತೆಯ ಸಮಸ್ಯೆಗೆ ಮುಕ್ತಿಯನ್ನು ನೀಡಬೇಕು ಎ೦ದು ಸ್ಥಳೀಯರು ಆಗ್ರಹಿಸಿದ್ದಾರೆ.

ಚಿತ್ರ ವರದಿ:  ನರೇ೦ದ್ರ ಎಸ್ ಗ೦ಗೊಳ್ಳಿ

ಕುಂದಾಪ್ರ ಡಾಟ್ ಕಾಂ- editor@kundapra.com