ನೈಕಂಬ್ಳಿಯ ಕಾಲುಸಂಕ - ಶಾಲೆ ಎರಡೂ ಸುರಕ್ಷಿತವಲ್ಲ!


ಕುಂದಾಪುರ: ಮಳೆಗಾಲವೆಂದರೆ ಅಲ್ಲಿನ ಜನರಿಗೆ ನರಕಯಾತನೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ.  ಆ ಊರಿನ ಮಕ್ಕಳೆಲ್ಲಾ ದಿನವೂ ತೀರಾ ಅಪಾಯಕಾರಿಯಾದ ಕಾಲುಸಂಕವನ್ನು ದಾಟಿಯೇ ಶಾಲೆಗೆ ಬರಬೇಕು. ಶಾಲೆಗೆ ಬಂದವರಾದರೂ ಸುರಕ್ಷಿತರು ಎಂದುಕೊಂಡರೆ ತಪ್ಪಾದಿತು. ಅಲ್ಲಿ ಶಿಥಿಲಗೊಂಡ ಮೇಲ್ಛಾವಣಿಯ ಕೆಳಗೆ ಒಂದೇ ತರಗತಿಯಲ್ಲಿ ಕುಳಿತು ಕಲಿಯಬೇಕು. ಇದು ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೈಕಂಬಳ್ಳಿ (ನೈಕಂಬ್ಳ) ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಮಕ್ಕಳೂ ಹಾಗೂ ಊರವರಿಗೆ ಬಂದೊದಗಿರುವ ದುಸ್ಥಿತಿ.

ನೈಕಂಬ್ಳಿ ಸುತ್ತೆಲ್ಲಾ ಕಾಲುಸಂಕ
ನೈಕಂಬ್ಳಿಯ ಬಹುಪಾಲು ಜನತೆ ಒಂದಾದರೂ ಕಾಲುಸಂಕವನ್ನು ದಾಟಿ ನಡೆದು ತಮ್ಮ ದಿನನಿತ್ಯದ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಸುತ್ತಲಿನ ಕೋಳೂರು, ಮಲ್ಲೋಡ್, ಹಾಡಿಮನೆ, ಆಸೂರು ಹಾಗೂ ನೈಕಂಬಳ್ಳಿ ಹಳೆಯಮ್ಮ ದೇವಸ್ಥಾನದ ಬಳಿ ಇರುವ ಕಾಲುಸಂಕಗಳಲ್ಲಿ ಜನರು ದಿನವೂ ತಿರುಗಾಡುವುದು ಮಾಮೂಲಿಯಾಗಿದೆ. ಇಲ್ಲಿ ಒಟ್ಟು ಸುಮಾರು 96 ಮನೆಗಳಿದ್ದು 700ಕ್ಕೂ ಅಧಿಕ ಜನಸಂಖ್ಯೆ ಇದೆ. ಜನಪ್ರತಿನಿಧಿಗಳಗೆ ಬೇಡಿಕೆ ಇಟ್ಟು ಸುಸ್ತಾಗಿರುವ ಇಲ್ಲಿನ ಜನರು ಮರದ ದಿಬ್ಬಗಳನ್ನೇ ನದಿಗೆ ಅಡ್ಡಲಾಗಿ ಹಾಕಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಳ್ಳುತ್ತಾರೆ. ಮಳೆಗಾಲದಲ್ಲಿ ನೀರು ಹೆಚ್ಚಾದಾಗ ಇವರುಗಳು ಮಾಡಿಕೊಂಡ ಕಾಲುಸಂಕಗಳು ಕೊಚ್ಚಿ ಹೋದ ಉದಾಹರಣೆಗಳೂ ಸಾಕಷ್ಟಿದೆ. ಆದರೂ ಮಳೆಯ ನೀರಿಗೆ ಜಾರುವ, ಶೀಥಿಲಗೊಂಡ ಕಾಲುಸಂಕವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇಲ್ಲಿನದ್ದು. ವೃದ್ಧರು, ಗರ್ಭಿಣಿಯರು, ಅನಾರೋಗ್ಯ ಪೀಡಿತರ ಪಾಡಂತೂ ಹೇಳತೀರದು. ಹಳೆಯಮ್ಮ ದೇವಸ್ಥಾನದ ಬಳಿ ಉಂಬಳ್ಳಿ ಹೊಳೆ ದಾಟಲು ಮಾಡಿಕೊಂಡಿರುವ ಕಾಲುಸಂಕದ ಮೂಲಕವೇ ನೈಕಂಬಳ್ಳಿಯ ಶಾಲೆಗೆ 15ಕ್ಕೂ ಹೆಚ್ಚು ಮಕ್ಕಳು, ಅಂಗನವಾಡಿಗೆ 18ಮಕ್ಕಳು, ಚಿತ್ತೂರು ಹಾಗೂ ಇತರೆಡೆ ಶಾಲೆಗೆ ತೆರಳಲು ಕೆಲವಷ್ಟು ಮಕ್ಕಳು ಬರುತ್ತಾರೆ. ಸಮೀಪದ ಹಾರ್ಮಣ್ಣುವಿನಿಂದ ಬಸ್ ಸೌಕರ್ಯವಿರುವುದರಿಂದ ಇದೇ ಮಾರ್ಗವನ್ನೇ ಜನರೂ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಆದರೆ ಈ ಅಪಾಯಕಾರಿ ಕಾಲುಸಂಕದಲ್ಲಿ ಕಾಲು ಜಾರಿದರೆ ರಕ್ಷಿಸಿಕೊಳ್ಳುವ ಯಾವುದೇ ವ್ಯವಸ್ಥೆಗಳಿಲ್ಲ. ಮಾರಣಕಟ್ಟೆಯಲ್ಲಿ ಮೂರನೇ ತರಗತಿಯ ಬಾಲಕಿಯೊಬ್ಬಳು ಕಾಲಸಂಕದಿಂದ ಜಾರಿ ಮೃತಪಟ್ಟ ಘಟನೆ ಇಲ್ಲಿಯ ಜನರನ್ನು ಬೆಚ್ಚಿ ಬೀಳಿಸಿದೆ. ಜೀವಕ್ಕಿಂತ ತಮ್ಮ ಮಕ್ಕಳ ಶಿಕ್ಷಣ ಮುಖ್ಯವಲ್ಲ ಎಂದು ಹೇಳುತ್ತಿದ್ದಾರೆ. ಮಳೆಗಾಲದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಈ ನರಕಯಾತನೆಗೆ ಮುಕ್ತಿ ಯಾವಾಗೆಂದು ಪ್ರಶ್ನಿಸುತ್ತಿದ್ದಾರೆ.

ಮೂಲ ಸೌಕರ್ಯಗಳಿಲ್ಲದ ನೈಕಂಬಳ್ಳಿ ಶಾಲೆ
ಅಪಾಯಕಾರಿಯಾದ ಕಾಲುಸಂಕವನ್ನು ದಾಟಿಕೊಂಡು ಮಕ್ಕಳು ನೈಕಂಬ್ಳಿಯ ಶಾಲೆಗೆ ಬಂದರೆ ಇಲ್ಲಿನ ಶಾಲೆಯ ಸ್ಥಿತಿಯೂ ಚನ್ನಾಗಿಲ್ಲ. 1ರಿಂದ 5ನೇ ತರಗತಿಯವರೆಗೆ 29 ಮಕ್ಕಳು ಕಲಿಯುತ್ತಿರುವ ಬೈಂದೂರು ವಲಯದ ಶಾಲೆಯಲ್ಲಿ ಒಬ್ಬರು ಸರಕಾರಿ ಶಿಕ್ಷಕಿ ಹಾಗೂ ಒಬ್ಬರು ಖಾಸಗಿ ಶಿಕ್ಷಕಿ ಇದ್ದಾರೆ. 1ರಿಂದ 3ನೇ ತರಗತಿಯವರೆಗೆ ನಲಿಕಲಿ ಶಿಕ್ಷಣವಿರುದರಿಂದ ಮಕ್ಕಳನ್ನು ಒಟ್ಟಾಗಿ ಕುಳ್ಳಿರಿಸಲಾಗಿದೆ. ಆದರೆ ಬೇರೆ ಕೊಠಡಿಗಳಿಲ್ಲದ ಕಾರಣ ಅದೇ ಹಾಲಿನಲ್ಲಿ 4 ಹಾಗೂ 5ನೇ ತರಗತಿಯನ್ನು ಮತ್ತು ಆಫೀಸ್ ರೂಂ ಸೇರಿಸಿಕೊಂಡಿದ್ದಾರೆ. 5ನೇ ತರಗತಿಯ ಮಕ್ಕಳನ್ನು ಅಕ್ಷರ ದಾಸೋಹದ ಕೊಠಡಿಯಲ್ಲಿ ಕುಳ್ಳಿರಿಸಿಕೊಂಡು ಪಾಠ ಮಾಡುತ್ತರಾದರೂ ಒಬ್ಬ ಶಿಕ್ಷಕಿ ರಜೆಯಲ್ಲಿರೇ ಹಾಲ್‌ನಲ್ಲಿ ಕುಳ್ಳಿರಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇನ್ನು ಶಾಲೆಯ ಕಟ್ಟಡವಂತೂ ಶಿಥೀಲಾವಸ್ಥೆ ತಲುಪಿದೆ. ಮೇಲ್ಛಾವಣಿ ಶಿಥೀಲಗೊಂಡಿದ್ದು ಗಾಳಿ ಮಳೆಯ ಹೊಡೆತಕ್ಕೆ ಸಿಕ್ಕಿ ಬೀಳುವುದೇ ಎಂಬ ಆತಂಕವನ್ನು ವಿದ್ಯಾರ್ಥಿಗಳ ಪೋಷಕರು ವ್ಯಕ್ತಪಡಿಸುತ್ತಿದ್ದಾರೆ. ಸರ್ವಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ ಹೊಸ ಶಾಲಾ ಕಟ್ಟಡಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅದು ಈವರೆಗೆ ಪುರಸ್ಕೃತಗೊಂಡಿಲ್ಲ. ಗುಣಮಟ್ಟದ ಶಿಕ್ಷಣದ ಮಾತನಾಡುವ ಇಲಾಖೆ ಹೀಗೆ ಅಪಾಯಕಾರಿಯಾದ ಕಟ್ಟಡದಲ್ಲಿ ಎಲ್ಲಾ ಮಕ್ಕಳನ್ನು ಒಟ್ಟಿಗೆ ಸೇರಿಸಿ ಪಾಠ ಮಾಡುವಂತೆ ಮಾಡಿದರೆ ಮುಂದಾಗುವ ಅಪಾಯಕ್ಕೆ ಹೊಣೆಯಾರು? ಶಿಕ್ಷಣದ ಉದ್ದೇಶವಾದರೂ ಇದರಿಂದ ಈಡೇರಿತೆ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.

ರಸ್ತೆಗಳೂ ದುಸ್ತರ
96 ಮನೆಗಳಿರುವ ನೈಕಂಬ್ಳಿಯ ಡಾಂಬಾರು ಕಾಣದ ರಸ್ತೆಯ ಮಾರ್ಗವೂ ದುಸ್ಥರವಾಗಿದೆ. ಈ ಮಾರ್ಗದ ಮೂಲಕ ಸಂಚರಿಸುವುದು ಕೂಡ ಯಾತನೆಯೇ ಸರಿ. ಉಬ್ಬ ತಗ್ಗುಗಳ ಮಾರ್ಗದಲ್ಲಿ  ಚರಂಡಿ ವ್ಯವಸ್ಥೆಯೂ ಇಲ್ಲ.

ಸೇತುವೆ ಮಾಡಲು ಮನವಿ ಸಲ್ಲಿಸಿ ಸಾಕಾಗಿದೆ
ನೈಕಂಬಳ್ಳಿಯ ಕಾಲುಸಂಕದ ಅಪಾಯದ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳ ಗಮನಕ್ಕೆ ತಂದು ಹಲವಾರು ವರ್ಷಗಳಿಂದ ಮನವಿ ಸಲ್ಲಿಸಿ ಸುಸ್ತಾಗಿ ಹೋಗಿದ್ದೇವೆ. ಆದರೂ ಕಾಂಕ್ರಿಟ್ ಸೇತುವೆಯಲ್ಲಿ ತಿರುಗುವ ಭಾಗ್ಯ ನಮ್ಮದಾಗಲಿಲ್ಲ. ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ತಿರುಗಾಡುತ್ತಿದ್ದೇವೆ. ಮನವಿ ಸಲ್ಲಿಸದ ಕೂಡಲೇ ಸೇತುವೆ ಮಾಡಿಕೊಂಡುವ ಭರವಸೆ ನೀಡುತ್ತಾರೆ ಹೊರತೂ ಕೆಲಸವಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

* ನಮ್ಮ ಕೃಷಿಭೂಮಿಗಳು ಕಾಲುಸಂಕದ ಆಚೆಗೆ ಇದೆ. ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ತಂಬಿ ಹರಿಯುವುದರಿಂದ ಕಾಲುಸಂಕ ದಾಟಿ ನಡೆಯಲು ಹೆದರಿಕೆಯಾಗುತ್ತದೆ. ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಕಾಲುಸಂಕದ ಮಾರ್ಗವನ್ನೇ ಅವಲಂಬಿಸಿದರುವುದರಿಂದ ಇಲ್ಲೊಂದು ಸೇತುವೆ ಅಗತ್ಯವಾಗಿ ಬೇಕು. - ಮೂಕಾಂಬು, ಸ್ಥಳೀಯ ನಿವಾಸಿ
ವರದಿ: ಸುನಿಲ್ ಹೆಚ್. ಜಿ. ಬೈಂದೂರು

ಕುಂದಾಪ್ರ ಡಾಟ್ ಕಾಂ- editor@kundapra.com