ಕುಂದಾಪುರ: ಅವರಿಬ್ಬರೂ ಜೀವದ ಗೆಳೆಯರು. ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಹೆಮ್ಮಾಡಿಯಲ್ಲಿಯೂ ಮನೆಮಾತಾದವರು. ತಮ್ಮದೇ ಉದ್ಯೋಗ-ವ್ಯವಹಾರವನ್ನು ಮಾಡಿಕೊಂಡು ಚನ್ನಾಗಿಯೇ ಇದ್ದರು. ಆದರೆ ವಿಧಿಗೆ ಇವರು ಬದುಕುವುದು ಬೇಕಿರಲಿಲ್ಲ. ಬದುಕಿನ ನೂರಾರು ಕನಸು ಹೊತ್ತ ಈ ಸ್ನೇಹಿತರು ಸಾವುನಲ್ಲೂ ಜೊತೆಯಾದರು. ನೆಚ್ಚಿನ ಬೈಕಿನಲ್ಲಿ ಹೊರಟಿದ್ದ ಅವರು ಜೀವಂತವಾಗಿ ಮರಳಲೇ ಇಲ್ಲ.
ಸೋಮವಾರ ಸಂಜೆ ಬೈಕ್ ಹಾಗೂ 407 ಗೂಡ್ಸ್ ಟೆಂಪೋ ನಡುವಿನ ಅಪಘಾತದಲ್ಲಿ ಸಹಸವಾರಾಗಿದ್ದ ಸುರೇಂದ್ರ ಗಾಣಿಗ ಸ್ಥಳದಲ್ಲಿಯೇ ಮೃತಪಟ್ಟರೇ, ಬೈಕ್ ಚಲಾಯಿಸುತ್ತಿದ್ದಸಂಪತ್ ಪೂಜಾರಿ ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ವಂದಿಸದೇ ತಡರಾತ್ರಿ ಮೃತಪಟ್ಟಿದ್ದಾರೆ.
ಹೆಮ್ಮಾಡಿಯವರಾದ ಸುರೇಂದ್ರ ಗಾಣಿಗ(32) ಹಾಗೂ ಸಂಪತ್ ಪೂಜಾರಿ (26) ಹೊಸ ಪಲ್ಸರ್ ಬೈಕಿನಲ್ಲಿ ಹೆಮ್ಮಾಡಿ ಕಡೆಯಿಂದ ಕೊಲ್ಲೂರಿಗೆ ತೆರಳುತ್ತಿದ್ದ ವೇಳೆಗೆ ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ತೆರಳುತ್ತಿದ್ದ 407 ಗೂಡ್ಸ್ ಟೆಂಪೋವು ಕಟ್ ಬೆಲ್ತೂರು ರೈಲ್ವೆ ಮೇಲ್ಸೆತುವೆ ಬಳಿ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಬೈಕಿನ ಹಿಂಬದಿ ಕುಳಿತಿದ್ದ ಸುರೇಂದ್ರ ಗಾಣಿಗರ ತಲೆಗೆ ಗಂಭೀರ ಏಟು ತಗಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು, ಬೈಕ್ ಚಲಾಯಿಸುತ್ತಿದ್ದ ಸಂಪತ್ ಪೂಜಾರಿಯ ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ರಾತ್ರಿ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಅವರೂ ಮೃತಪಟ್ಟರು.
ಹೆಮ್ಮಾಡಿ ಜನತೆಗೆ ಆಘಾತ
ಹೆಮ್ಮಾಡಿಯ ವಿವಿಧ ಸಂಘಟನೆಗಳಲ್ಲಿ ಸಕ್ರೀಯರಾಗಿ ಅಪಾರ ಸ್ನೇಹಿತರ ಬಳಗವನ್ನು ಹೊಂದಿದ್ದ ಸಂಪತ್ ಹಾಗೂ ಸುರೇಂದ್ರ ಅವರ ಸಾವು ಹೆಮ್ಮಾಡಿಯ ಜನರನ್ನು ದಿಗ್ಬ್ರಾಂತರನ್ನಾಗಿದೆ. ದಿ. ರಾಮ ಪೂಜಾರಿಯವರ ಒಬ್ಬನೇ ಮಗನಾದ ಸಂಪತ್ ಗೆ ಬೈಕ್ ಬಗೆಗೆ ವಿಶೇಷವಾದ ಒಲವಿತ್ತು. ಶನಿವಾರವಷ್ಟೇ ಹೊಸ ಪಲ್ಸರ್ 200ಸಿಸಿ ಬೈಕ್ ಖರೀದಿಸಿದ್ದರು. ಕಟ್ಟುವಿನ ಅಣ್ಣಪ್ಪ ಗಾಣಿಗರ ಮಗನಾದ ಸುರೇಂದ್ರ ಕೊಲ್ಲೂರು ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಹಿಂದೂಪರ ಸಂಘಟನೆಗಳಲ್ಲಿಯೂ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು. ನೂರಾರು ಕನಸುಗಳನ್ನು ಹೊತ್ತು ಸಾಗಿದ್ದ ಜೀವಗಳು ಕಣ್ಮರೆಯಾದದ್ದು ಎರಡೂ ಕುಟುಂಬಗಳನ್ನು ನೋವಿಗೆ ದೂಡಿದಂತಾಗಿದೆ.
ಅಪಾಯಕಾರಿ ತಿರುವು:
ಅಪಘಾತ ನಡೆದ ಕಟ್ಬೆಲ್ತೂರು ರೈಲ್ವೇ ಮೇಲ್ಸೆತುವೆಯ ತಿರುವು ಅಪಾಯಕಾರಿ. ಮೇಲ್ಸೆತುವೆಯ ಬಳಿ ಎದರು ವಾಹನ ಬರುವುದೇ ತಿಳಿಯುವುದಿಲ್ಲ. ಅಲ್ಲದೇ ಈ ರಸ್ತೆಯಲ್ಲಿ ಒಂದು ಪಾರ್ಶ್ವ ತೀರಾ ತಗ್ಗು ಇದ್ದು, ಬೆ„ಕ್ ಸವಾರರಿಗೆ ಅಪಾಯಕಾರಿಯಾಗಿದೆ. ಘನ ವಾಹನಗಳು ಈ ಹೊಂಡವನ್ನು ತಪ್ಪಿಸುವ ಭರದಲ್ಲಿ ರಸ್ತೆಯ ಬಲಬಾಗಕ್ಕೆ ಚಲಿಸಿದಾಗ ಎದುರಿನಿಂದ ಬರುವ ವಾಹನಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆಗಳಿರುತ್ತದೆ.
ಇದನ್ನೂ ಓದಿ ಭೀಕರ ಅಪಘಾತಕ್ಕೆ ಒರ್ವ ಬಲಿ, ಇನ್ನೋರ್ವ ಗಂಭೀರ