ಮರಣೋತ್ತರ ದೇಹದಾನಕ್ಕೆ ಸಮ್ಮತಿಸಿದ ಮಾದರಿ ದಂಪತಿಗಳು

ಕುಂದಾಪುರ: ಇಂದು ಮಾತ್ರ ನಮ್ಮದು. ನಾಳೆ ಹೇಗೋ, ಏನೋ ಎಂಬುದು ಯಾರಿಗೂ ತಿಳಿದಿಲ್ಲ. ಬದುಕಿದ್ದಾಗ ಜನ ನೆನಪಿಸಿಕೊಳ್ಳುತ್ತಾರೆ. ಆದರೆ ಇಹಲೋಕದ ಪಯಣ ಮುಗಿದ ಮೇಲೆ  ನೆನಪಿಸಿಕೊಳ್ಳುವವರ್ಯಾರು? ಮರಣದ ಬಳಿಕವೂ ಉಳಿಯುವ ವ್ಯಕ್ತಿಯ ಹೆಸರನ್ನಷ್ಟೇ ಅಲ್ಲದೇ ಅವರನ್ನು ಪತ್ಯಕ್ಷವಾಗಿ ನೋಡಬೇಕೆಂದಿದ್ದರೇ, ಆ ಮೂಲಕ ವೈದ್ಯವಿಜ್ಞಾನದ ಹೊಸ ಆವಿಷ್ಕಾರಗಳಿಗೆ ನೆರವಾಗಬೇಕೆಂದಿದ್ದರೇ ಇರುವುದೊಂದೇ ಮಾರ್ಗ. ಅದು ಮರಣೋತ್ತರ ದೇಹದಾನ.

ಮರಣದ ಬಳಿಕ ದೇಹವನ್ನು ಸುಟ್ಟು ಇಲ್ಲವೇ ಹೂತು ಮಣ್ಣಲ್ಲಿ ಮಣ್ಣಾಗಿಸುವ ಬದಲಿಗೆ ಅದು ವೈದ್ಯಕೀಯ ಲೋಕದ ಪ್ರಯೋಗ, ಸಂಶೋಧನೆಗಳಿಗೆ ನೆರವಾದರಷ್ಟು ಒಳ್ಳೆಯದು ಎಂಬುದನ್ನು ಅರಿತ ಗೋಪಾಲ ಶೆಟ್ಟಿ  ಹಾಗೂ ಪುಪ್ಪಾ ಗೋಪಾಲ ಶೆಟ್ಟಿ ದಂಪತಿಗಳುಮರಣೋತ್ತರ ತಮ್ಮ ದೇಹವನ್ನು ದಾನ ಮಾಡಲು ಒಪ್ಪಿಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕರಾವಳಿ ಕ್ರಾಂತಿ ಪಾಕ್ಷಿಕದ ಸಂಪಾದಕರಾಗಿರುವ ಗೋಪಾಲ ಶೆಟ್ಟಿ, ಹಲವಾರು ಸಮಾಜಕಾರ್ಯ ಕೆಲಸಗಳಲ್ಲಿಯೂ ಸದಾ ನಿರತರು. ಗೋಪಾಲ ಶೆಟ್ಟಿ ಹಾಗೂ ಪುಪ್ಪಾ ದಂಪತಿಗಳು ದೈವಭಕ್ತರಾದರೂ ತಮ್ಮ  ಧರ್ಮದಂತೆ ಮರಣೊತ್ತರದ ಧಾರ್ಮಿಕ ಕ್ರಿಯಾ ಕರ್ಮಗಳನ್ನು ನೆರವೇರಿಸುವುದಕ್ಕಿಂತಲೂ ದೇಹದಾನದಿಂದ ಮಾನವ ಕೋಟಿಗೆ ಆಗುವ ಸಂಶೋಧನೆಯ ಲಾಭ ಅತಿ ಶ್ರೇಷ್ಠ ಎಂಬುದನ್ನು ಅರಿತು ಈ ನಿರ್ಧಾರಕ್ಕೆ  ಬಂದಿದ್ದಾರೆ.

ಇವರುಗಳು ಮಣಿಪಾಲದ ಕರ್ಸೂರ್ಬಾ ಮೆಡಿಕಲ್ ಕಾಲೇಜಿನೊಂದಿಗೆ ಮರಣೋತ್ತರ ದೇಹದಾನ ಮಾಡುವ ಮೃತ್ಯು ಪತ್ರಕ್ಕೆ ಸಹಿ ಮಾಡಿ ಒಪ್ಪಂದ ಮಾಡಿಕೊಳ್ಳಲಾಗಿದ್ದು (ನೊಂದಣಿ ಸಂಖ್ಯೆ522, 523),  ಮರಣೋತ್ತರ ದೇಹದಾನ ಮಾಡಿದ ವ್ಯಕ್ತಿ ಮರಣ ಹೊಂದಿದ 24 ತಾಸುಗಳ ಒಳಗಾಗಿ ಕುಟುಂಬಸ್ಥರು ಮಾಹಿತಿ ನೀಡಿದರೆ ಸ್ಥಳಕ್ಕೆ ಬಂದು ದೇಹವನ್ನು  ಕೊಂಡೊಯ್ಯುವ ಸಂಪೂರ್ಣ ಜವಾಬ್ದಾರಿ  ಕಾಲೇಜಿನವರದ್ದಾಗಿದೆ.

* ಆತ್ಮವೇ ಇಲ್ಲದ ಮೇಲೆ ದೇಹವೇ ನಶ್ವರ. ಅದಕ್ಕೆ ಸದ್ಗತಿಯನ್ನು ಕಾಣಿಸುವುದರಲ್ಲಿ ಅರ್ಥವೇ ಇಲ್ಲ ಎಂದೆನಿಸುತ್ತೆ. ಮರಣದ ಬಳಿಕ ಸುಮ್ಮನೆ ದೇಹವನ್ನು ಮಣ್ಣಾಗಿಸುವುದಕ್ಕಿಂತ ದಾನ ಮಾಡಿದರೆ ವೈದ್ಯ ವಿಜ್ಞಾನದ ಪ್ರಯೋಗಗಳಿಗೆ ಸಾಕಷ್ಟು ಸಹಕಾರಿಯಾದಿತು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ - ಗೋಪಾಲ ಶೆಟ್ಟಿ ಹಾಗೂ ಪುಪ್ಪಾ ಗೋಪಾಲ ಶೆಟ್ಟಿ ದಂಪತಿ

ವರದಿ: ಸುನಿಲ್ ಹೆಚ್. ಜಿ. ಬೈಂದೂರು

ಕುಂದಾಪ್ರ ಡಾಟ್ ಕಾಂ- editor@kundapra.com