ಕತ್ತಲಾಗುತ್ತೆ ಕುಂದಾಪುರ, ವಿದ್ಯುತ್ತಿಗೆ ಬೇಕಿದೆ ಬೇರೊಂದು ಆಕರ

ಕುಂದಾಪುರ: ಜಿಲ್ಲಾದ್ಯಂತ ಏಕಾಏಕಿ ತಲೆದೂರಿದ ವಿದ್ಯುತ್ ಸಮಸ್ಯೆಯಿಂದಾಗಿ ಕುಂದಾಪುರ ತಾಲೂಕಿನ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಯಿತು. ಹಿರಿಯಡಕದ ಉಪಕೇಂದ್ರದಲ್ಲಿನ ವಿದ್ಯುತ್ ದುರಸ್ಥಿಯ ಕಾರಣ ನೀಡಿ ನಿಲ್ಲಸಲಾಗಿದ್ದ ವಿದ್ಯುತ್ ಸಂಪರ್ಕದಿಂದಾಗಿ ಎರಡು ದಿನವಿಡಿ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಯಿತು. 

ಎಂದಿನಂತೆ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆ ಸಾಮಾನ್ಯವೆಂದು ಭಾವಿಸಲಾಗಿತ್ತು. ಹೀಗೆಂದು ಮೆಸ್ಕಾಂ ಪ್ರಕಟಣೆಯಲ್ಲಿಯೂ ತಿಳಿಸಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ 7ಗಂಟೆಯಿಂದಲೇ ವಿದ್ಯುತ್ ನಿಲುಗಡೆಗೊಂಡು ರಾತ್ರಿ 9:45ರ ಸುಮಾರಿಗೆ ಮತ್ತೆ ಚಾಲನೆಗೊಳಿಸಲಾಯಿತು. ಇಷ್ಟಕ್ಕೆ ಮುಗಿತೆಂದುಕೊಂಡರೇ ಯಾವುದೇ ಮುನ್ಸೂಚನೆಗಳಿಲ್ಲದೇ ಮತ್ತೆ ಬುಧವಾರ ಬೆಳಿಗ್ಗೆಯೂ ವಿದ್ಯುತ್ ನಿಲುಗಡೆಗೊಂಡಿದ್ದರಿಂದ ಜನರೂ ತೊಂದರೆಯುಂಟಾಯಿತು. ಬಧವಾರ ಸಂಜೆ 6:30 ಸುಮಾರಿಗೆ ಮತ್ತೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾದರೂ ಹಲವೆಡೆ ಲೋ ವೋಲ್ಟೆಜ್, ಮತ್ತೆ ಮತ್ತೆ ವಿದ್ಯುತ್ ಕಡಿತಗೊಳಿಸುವುದು ಕಂಡುಬಂತು. (ಕುಂದಾಪ್ರ ಡಾಟ್ ಕಾಂ ವರದಿ)

ದಿನವೂ ವಿದ್ಯುತ್ ಸಮಸ್ಯೆಯೇ...
ಮಳೆ ಕಡಿಮೆಯಾಗಿರುವುದು, ವಿದ್ಯುತ್ ಅಭಾವ, ರಾಷ್ಟ್ರೀಯ ಹೆದ್ದಾರಿಯ ಬಳಿಯ ಕಂಬಗಳ ತೆರವು ಕಾರ್ಯಾಚರಣೆ, ದುರಸ್ತಿ ಮುಂತಾದ ಕಾರಣಗಳಿಂದಾಗಿ ತಾಲೂಕಿನ ಬೈಂದೂರು, ಗಂಗೊಳ್ಳಿ, ಅಮಾಸೆಬೈಲು, ಶಂಕರನಾರಾಯಣ ಸೇರಿದಂತೆ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ವಿದ್ಯುತ್ ನಿಲುಗಡೆಗೊಳ್ಳುವುದು ಮಾಮೂಲಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಹೀಗೆ ವಿದ್ಯುತ್ ನಿಲುಗಡೆ ಮಾಡುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ವಿದ್ಯಾರ್ಥಿಗಳಿಗೆ ಹಾಗೂ ದಿನನಿತ್ಯದ ಅಗತ್ಯಗಳಿಗೆ ವಿದ್ಯುತ್ ಅವಲಂಬಿಸಿದವರಿಗೆ ತೊಂದರೆಯಾಗುತ್ತಲೇ ಇದೆ. ವಿದ್ಯುತ್ ನಿಲುಗಡೆಗೆ ಒಂದು ನಿರ್ದಿಷ್ಟ ಸಮಯವನ್ನು ನಿಗದಿ ಮಾಡಬೇಕು ಎಂದು ಜನಸಾಮಾನ್ಯರು ಇಲಾಖೆಯನ್ನು ಆಗ್ರಹಿಸುತ್ತಲೇ ಬಂದಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

ಸೋಲಾರ್, ಇನ್ವರ್ಟರ್ ಮೊರೆ: 
ಇತ್ತಿಚಿನ ದಿನಗಳಲ್ಲಿ ಜನರು ಸೋಲಾರ್ ದೀಪಗಳು ಹಾಗೂ ಇನ್ವರ್ಟರ್ ಶಕ್ತಿಗೆ ಹೆಚ್ಚು ಮೊರೆ ಹೋಗುತ್ತಿರುವುದುರಿಂದ ಮೆಸ್ಕಾಂ ಕಛೇರಿಗೆ ಕರೆ ಮಾಡಿ ವಿದ್ಯುತ್ ಶೀಘ್ರ ದುರಸ್ತಿಗೊಳಿಸಿ ಎಂದು ಹೇಳುವವರು ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಹಣವಂತರು ಸೋಲಾರ್, ಇನ್ವರ್ಟರ್ ಹಾಕಿಕೊಳ್ಳುತ್ತಾರೆ. ನಾವೇನು ಮಾಡೋಣ ಎನ್ನುವ ಗ್ರಾಮೀಣ ಪ್ರದೇಶದ ಮಧ್ಯಮ ವರ್ಗದ ಜನರು ಮೆಸ್ಕಾಂಗೆ ಶಾಪ ಹಾಕುತ್ತಾ ದೀಪದ ಬೇಳಕಿನಲ್ಲಿ ಇರುವುದನ್ನು ರೂಢಿಸಿಕೊಂಡಿದ್ದಾರೆ. ಹಾಗಾಗಿ ಮೆಸ್ಕಾಂಗೆ ಹೆಚ್ಚಿನ ಒತ್ತಡವೂ ಇಲ್ಲ. ಇಲಾಖೆಯೂ ಕೈಗಾರಿಕಾ ಪ್ರದೇಶಗಳಿಗೆ ಹೆಚ್ಚಿನ ವಿದ್ಯುತ್ ನೀಡಿ ಜನರಿಗೆ ಪವರ್ ಕಟ್ ಸಮಸ್ಯೆಯನ್ನು ಹೆಚ್ಚಿಸುತ್ತಲೇ ಇದೆ. ಇತ್ತಿಚಿಗೆ ಇಲಾಖೆಯಿಂದ ಸೋಲಾರ್ ನೀಡುವ ಯೋಜನೆ ಜಾರಿಯಾಗಿತ್ತಾದರೂ ಅದರ ಫಲಾನುಭಾವಿಗಳೇಷ್ಟು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

ಚಿಮಣಿ ಭಾಗ್ಯದ ಎಸ್.ಎಂ.ಎಸ್:
ಅನಿಯಮಿತ ಪವರ್ ಕಟ್ ಆಗುತ್ತಿರುವುದು ಸಾಮಾಜಿಕ ತಾಣಗಳಲ್ಲಿಯೂ ಸಾಕಷ್ಟು ಟೀಕೆಗೆ ಒಳಗಾಗುತ್ತಿದೆ. ಕಳೆದ ಒಂದು ವಾರದಿಂದ ಫೇಸ್ಬುಕ್/ವಾಟ್ಸಪ್ ನಲ್ಲಿ ಹೀಗೊಂದು ಸಂದೇಶ ರವಾನೆಯಾಗುತ್ತಿದೆ.  "ಉಡುಪಿ ಜಿಲ್ಲೆಯ ಜನತೆಗೊಂದು ಸಂತಸದ ಸುದ್ದಿ. ಪ್ರತಿದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಮಧ್ಯಾಹ್ನ 3ಗಂಟೆಯಿಂದ ಸಂಜೆ 5ಗಂಟೆ ಹಗೂ ರಾತ್ರಿ 8ರಿಂದ 11 ಗಂಟೆಯ ವರೆಗೆ ಧಾರಾಳವಾಗಿ  ಭಯ ಅಂಜಿಕೆ ಇಲ್ಲದೇ ಧಾರಾಳವಾಗಿ ನಿಮ್ಮ ಮನೆಯ ಬಟ್ಟೆಗಳನ್ನು ಮೆಸ್ಕಾಂನ ವಿದ್ಯುತ್ ತಂತಿಗಳ ಮೇಲೆ ಒಣಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಹಾಗಿ ಸಂಪರ್ಕಿಸಿ ಮೆಸ್ಕಾಂ!!!"

ಪರ್ಯಾಯ ಇಂಧನ ಮೂಲಕ್ಕೆ ಬೇಕು ಸರಕಾರದ ಪ್ರೋತ್ಸಾಹ
ಈಗಾಗಲೇ ಇರುವ ಪರ್ಯಾಯ ಇಂಧನ ಮೂಲವನ್ನು ಗಟ್ಟಿಗೊಳಿಸುವ ಕೆಲಸವನ್ನು ನಮ್ಮ ಸರಕಾರಗಳು ಮಾಡಬೇಕಿದೆ. ಸೂರ್ಯನ ಬೆಳಕು, ಗಾಳಿ ಹಾಗೂ ಉಷ್ಣ ಶಕ್ತಿಗಳನ್ನು ಬಳಸಿ ವಿದ್ಯುತ್ ಉತ್ವಾದಿಸುವ ಯೋಜನೆಗಳನ್ನು ಪ್ರತಿ ಜಿಲ್ಲೆಯಲ್ಲಿಯೂ ಆರಂಭಿಸುವ ಮಹತ್ತರವಾದ ನಿರ್ಣಯವನ್ನು ಕೈಗೊಳ್ಳಬೇಕಿದೆ. ಪರ್ಯಾಯ ಇಂಧನ ಮೂಲದ ಉಪಯೋಗ ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ದೊರಕುವಂತೆ ಮಾಡುವ ಮಹತ್ತರವಾದ ಜವಾಬ್ದಾರಿ ಸರಕಾರದ ಮೇಲಿದೆ. ಇವುಗಳೊಂದಿಗೆ ವಿದ್ಯುಚ್ಚಕ್ತಿ ನಿಗಮದಲ್ಲಿಯೂ ಒಂದಿಷ್ಟು ಹೊಸ ತಂತ್ರಜ್ಞಾನಗಳ ಬಳಕೆಯಾದರೆ ಈ ವಿದ್ಯುತ್ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬಹುದೇನೊ... (ಕುಂದಾಪ್ರ ಡಾಟ್ ಕಾಂ ವರದಿ)

-ಸುನಿಲ್ ಹೆಚ್. ಜಿ. ಬೈಂದೂರು

ಕುಂದಾಪ್ರ ಡಾಟ್ ಕಾಂ- editor@kundapra.com