ಎಂಡೋ ಸಲ್ಫಾನ್ ಸಂತ್ರಸ್ಥರಿಗೆ ವಿವಿಧ ಸೌಲಭ್ಯಗಳನ್ನುಒದಗಿಸಿ: ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜ.19: ಎಂಡೋಸಲ್ಫಾನ್ ಪೀಡಿತರಿಗೆ ಅಗತ್ಯ ವೈದ್ಯಕೀಯ ನೆರವುಗಳನ್ನು ಒದಗಿಸುವುದರ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ , ಅವರ ಕುಂದು ಕೊರತೆಗಳಿಗೆ ಸ್ಪಂದಿಸುವ ಕಾರ್ಯವನ್ನು ಚಾಚೂ ತಪ್ಪದೆ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಸೂಚಿಸಿದರು.



ಅವರು ಇಂದು ನಗರದ ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಎಂಡೋಸಲ್ಫಾನ್ ಪೀಡಿತ ಸಂತ್ರಸ್ಥರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಹಾಗೂ ಕುಂದುಕೊರತೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಎಂಡೋಸಲ್ಫಾನ್ ಭಾದ್ಯತೆಯಿಂದ ಕೆಲವರು ಶಾಶ್ವತ ಅಂಗವಿಕಲತೆಯನ್ನು ಹೊಂದಿದರೆ ಇನ್ನೂ ಕೆಲವರು ಮಾರಕ ರೋಗಗಳಾದ ಕ್ಯಾನ್ಸರ್, ಅಸ್ತಮಾ, ಚರ್ಮರೋಗ, ಅಪಸ್ಮಾರ ಮತ್ತಿತರ ರೋಗಗಳಿಗೆ ತುತ್ತಾಗುತ್ತಿದ್ದಾರೆ , ಇವರಿಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸರ್ಕಾರದ ಇತರೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು. 

ಎಂಡೋಸಲ್ಫಾನ್ ಭಾಧಿತ ಪ್ರದೇಶಗಳಲ್ಲಿ ಅಂಗವಿಕಲತೆ ಹೊಂದದೇ ಇತರೇ ಕಾಯಿಲೆಗಳನ್ನು ಇದರಿಂದಲೇ ಉಂಟಾಗಿದೆ ಎಂಬುದರ ಬಗ್ಗೆ ಸರ್ವೆ ಕಾರ್ಯವನ್ನು ಮಾಡಿಸುವುದರೊಂದಿಗೆ ಅವರಿಗೆ ಅಂಗವಿಕಲರಿಗೆ ನೀಡುವ ಸೌಲಭ್ಯಗಳನ್ನು ಒದಗಿಸುವ ಕುರಿತು ರಾಜ್ಯಮಟ್ಟದ ಮಂಡಳಿಗೆ ಶಿಫಾರಸ್ಸು ಮಾಡಬೇಕೆಂದು ಸೂಚನೆ ನೀಡಿದರು.

ಸರ್ಕಾರದ ಸೌಲಭ್ಯಗಳು ಆದೇಶಗಳು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ಕುರಿತ ಮಾಹಿತಿಗಳನ್ನು ಪೀಡಿತರಿಗೆ ತಲುಪಲು ಅನುಕೂಲವಾಗುವ ರೀತಿಯಲ್ಲಿ ಜಿಲಾಮಟ್ಟದ ವೆಬ್ಸೈಟ್ ನ್ನು ತೆರೆಯಬೇಕು , ಇದರಲ್ಲಿಯೇ ಅವರುಗಳ ಕುಂದು ಕೊರೆತೆ ಅರ್ಜಿಗಳನ್ನು ಸಲ್ಲಿಸಲು ಅನುವು ಮಾಡಿಕೊಡುವುದರ ಜೊತೆಗೆ ಅವುಗಳಿಗೆ ನಿಯಮಾನುಸಾರವಾಗಿ ಸ್ಪಂದಿಸುವ ಕಾರ್ಯ ತತ್ಕ್ಷಣದಲ್ಲಿ ಮಾಡಬೇಕು ಎಂದರು.

ಎಂಡೋ ಪೀಡಿತ ವಿಕಲಚೇತನರಿಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಲು ಶಾಶ್ವತ ಪುರ್ನವಸತಿ ಕೇಂದ್ರವನ್ನು ಭಾಧಿತ ಪ್ರದೇಶಗಳಲ್ಲಿ ತೆರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಗುರುತಿನ ಚೀಟಿ ಹಾಗೂ ಪಾಸ್ ನ್ನು ತಪ್ಪದೇ ನೀಡಬೇಕು ಎಂದರು.

ತಾಲೂಕು ಮಟ್ಟದಲ್ಲಿ ಎಂಡೋಸಲ್ಫಾನ್ ಸಂತೃಸ್ತರಿಗೆ ಸೌಲಭ್ಯ ನೀಡುವ ಹಾಗೂ ಕುಂದು ಕೊರತೆಗಳನ್ನು ಚರ್ಚಿಸುವ ಸಭೆಗಳನ್ನು ಪ್ರತೀ 3 ತಿಂಗಳಿಗೊಮ್ಮೆ ಕರೆಯಬೇಕು ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚನೆ ನೀಡಿದರು

ಜಿಲ್ಲೆಯಲ್ಲಿ ಗೇರು ಬೀಜದ ಮರಳಿಗೆ ಹಾನಿ ಉಂಟು ಮಾಡುವ ಕೀಟಗಳ ನಿಯಂತ್ರಣಕ್ಕೆ ಕುಂದಾಪುರ ತಾಲೂಕಿನ 29, ಉಡುಪಿಯ 5 ಹಾಗೂ ಕಾರ್ಕಳದ 9 ಗ್ರಾಮಗಳು ಸೇರಿದಂತೆ 43 ಗ್ರಾಮಗಳಲ್ಲಿ ಎಂಡೋಸಲ್ಫಾನ್ ಸಿಂಪಡಿಸಿದ್ದು, ಇದು ಸುತ್ತಲಿನ ಇತರೆ ಗ್ರಾಮಗಳಿಗೂ ಭಾಧಿಸಿ ಒಟ್ಟು 86 ಗ್ರಾಮ ಜನರಿಗೆ ತೊಂದರೆ ಉಂಟಾಗಿರುತ್ತದೆ ಎಂದರು.

ಜಿಲ್ಲೆಯಲ್ಲಿ 669 ಪುರುಷ , 620 ಮಹಿಳೆ , 353 ಮಕ್ಕಳೂ ಸೇರಿದಂತೆ ಒಟ್ಟು 1642 ಎಂಡೋಸಲ್ಫಾನ್ ಪೀಡಿತರಾಗಿದ್ದು ಅವರಲ್ಲಿ 120 ಜನ ಮರಣ ಹೊಂದಿ, ಪ್ರಸ್ತುತ 1522 ಪೀಡಿತರಿದ್ದಾರೆ. ಅವರಲ್ಲಿ 203 ಜನರಿಗೆ ಶೇ.25 ರಷ್ಟು , 351 ಜನರಿಗೆ ಶೇ.25 ರಿಂದ 59 ರಷ್ಟು ಹಾಗೂ 968 ಜನರಿಗೆ ಶೇ.60 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುತ್ತಾರೆ ಎಂದರು. 

ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ,ಶಾಶ್ವತ ಪುರ್ನವಸತಿ ಕೇಂದ್ರವನ್ನು ತೆರೆಯುವವರೆಗೂ ಪೀಡಿತರಿಗೆ ಫಿಜಿಯೋಥೆರಪಿ ಚಿಕಿತ್ಸೆಯನ್ನು ವಿಕಲಚೇತನರ ಇಲಾಖೆ ಹಾಗೂ ಎನ್.ಜಿಓ ಗಳ ಸಹಯೋಗದೊಂದಿಗೆ ನೀಡಬೇಕೆಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂಧ್ರಗಳಿಗೆ ಚಿಕಿತ್ಸೆಗಾಗಿ ಬರುವ ಎಂಡೋಸಲ್ಪಾನ್ ಪೀಡಿತರಿಗೆ ಔಷಧಿ ಗಳನ್ನು ನೀಡಲು ಆದ್ಯತೆಯ ಮೇಲೆ ಖರೀದಿ ಮಾಡಿ, ಉಚಿತವಾಗಿ ವಿತರಿಸಬೇಕು ಎಂದರು.

ಸಭೆಯಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿ, ಎಂಡೋಸಲ್ಫಾನ್ ಪೀಡಿತರಿಗೆ ಅವಶ್ಯವಿರುವ ಬೇಡಿಕೆಗಳನ್ನು ಸಮಿತಿಯ ಮುಂದೆ ತಂದರು, ಬಾಧಿತ ಪ್ರದೇಶದಲ್ಲಿ ಜನ್ಮ ಹೊಂದಿದ ಹೆಣ್ಣು ಮಕ್ಕಳು ಮದುವೆಯಾಗಿ ಇತರೆ ಪ್ರದೇಶಗಳಿಗೆ ಹೋಗಿದ್ದು, ಅವರುಗಳಿಗೆ ಜನಿಸಿದ ಮಕ್ಕಳಿಗೂ ಸಹ ಎಂಡೋಸಲ್ಫಾನ್ ದುಷ್ಪರಿಣಾಮ ಬೀರಿದ್ದು ಅವರಿಗೂ ಸಹ ಸವಲತ್ತುಗಳನ್ನು ಒದಗಿಸಬೇಕು ಎಂದರು.

ಸಭೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಡಾ.ಪ್ರಶಾಂತ್ ಭಟ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ತಾಲೂಕುಗಳ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.