ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುಮಾರು ಐದು ನೂರು ವರ್ಷಗಳ ಇತಿಹಾಸ ಹೊಂದಿರುವ ಬೈಂದೂರಿನ ಯಡ್ತರೆಯ ನಾಕಟ್ಟೆಯ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ಗರ್ಭಗೃಹ ಸಮರ್ಪಣೆ ಹಾಗೂ ಇಲ್ಲಿನ ಪ್ರಧಾನ ಶಕ್ತಿಗಳಾದ ಶ್ರೀಬ್ರಹ್ಮ, ಶ್ರೀಯಕ್ಷೆ, ಕೋಟಿ ಚೆನ್ನಯ್ಯ, ದೇಯಿಬೈದೆದಿ, ಮಾಯಿಂದಾಲೆ, ಹಾಗುಳಿ ಸಹಿತ ಹಲವು ಶಕ್ತಿಗಳಿಗೆ ಸಾನಿಧ್ಯ ಪ್ರತಿಷ್ಠಾಪನೆ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ, ಆಗಮ ಪಂಡಿತ ಕೇಂಜ ಶ್ರೀಧರ ತಂತ್ರಿಯವರ ಮಾರ್ಗದರ್ಶನದಲ್ಲಿ ಸೋಮವಾರ ವೈಭವದಿಂದ ಜರುಗಿತು.

ಭಾನುವಾರ ಬೆಳಿಗ್ಗೆ ಪುಣ್ಯಾಹ, ದೇವನಾಂದಿ, ಮಹಾಸಂಕಲ್ಪ, ಜೀವ ಕಲಶ, ಶ್ರೀ ಬ್ರಹ್ಮಬದರ್ಕಳ ದೇವರ ಪುನ: ಪ್ರತಿಷ್ಠೆ, ಕಲಾತತ್ವ ಹೋಮ, ರಾತ್ರಿ 7-50ರ ಶುಭಮುಹೂರ್ತದಲ್ಲಿ ಜೀವಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಿತು. ಸಂಜೆ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರು ಕೋಟಿ ಚೆನ್ನಯ್ಯ ಯಕ್ಷಗಾನ ಪ್ರದರ್ಶಿಸಿದರು. 

ಸೋಮವಾರ ಬೆಳಿಗ್ಗೆ ಮೀನ ಲಗ್ನ ಸುಮೂಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ, ಪಲ್ಲಪೂಜೆ, ಶ್ರೀ ಬ್ರಹ್ಮಬದರ್ಕಳ ದೇವರ ದರ್ಶನ ಸೇವೆ, ಹಾಲಾವಳಿ, ಮಹಾಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. ಸಂಜೆ ಅಗೇಲು ಸೇವೆ, ಶ್ರೀ ಬ್ರಹ್ಮಬದರ್ಕಳ ಸಂದರ್ಶನದ ಹಾಲಾವಳಿ, ರಾತ್ರಿ ಪಂಜುರ್ಲಿ ದೈವದ ವೈಭವದ ಕೋಲ ಸೇವೆ, ಗೆಂಡಸೇವೆ ನಡೆಯಿತು. ಮಂಗಳವಾರ ಗರಡಿ ಅರ್ಚಕರಿಂದ ಶುದ್ದೀಕರಣ ಹಾಗೂ ಪ್ರಸನ್ನ ಪೂಜೆ ನಡೆಯಲಿದೆ. 

ಸುಮಾರು 50-60 ವರ್ಷಗಳಿಂದ ತೀರಾ ಅಜೀರ್ಣ ವ್ಯವಸ್ಥೆಯಲ್ಲಿರುವ ಈ ಗರಡಿ ಭಕ್ತರು, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದಾಗಿ ಕಾಯಕಲ್ಪದ ಭಾಗ್ಯ ದೊರಕಿದ್ದು, ಉತ್ತರ ದಿಕ್ಕಿನ ಕೊನೆಯ ಗರೋಡಿ ಎಂಬ ಪ್ರತೀತಿ ಹೊಂದಿದೆ. ಸುಮಾರು ಎರಡು ಕೋಟಿ ಐವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರ ಮಾಡುವ ಮೂಲಕ ಸೋಮವಾರ ಲೋಕಾರ್ಪಣೆಗೊಂಡಿತು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷರಾದ ಸಸಿಹಿತ್ಲು ವೆಂಕಟ ಪೂಜಾರಿ, ಮಂಜುನಾಥ ಪೂಜಾರಿ ಗರಡಿಮನೆ ಮೇಲ್ಹಿತ್ಲು, ಪ್ರಧಾನ ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ ಹಾಗೂ ವಿವಿಧ ಸಮಿತಿಯ ಸದಸ್ಯರು, ಗ್ರಾಮಸ್ಥರು ಇದ್ದರು.