ಕಲೆ ವ್ಯವಹಾರಿಕವಾಗಿ ಇರಬಾರದು: ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಹಿಂಸೆ ಎನ್ನುವ ಪದ ಹಿಂಸೆಯನ್ನೇ ನೆನಪಿಸುತ್ತೆ. ಈ ಪದಕ್ಕೆ ಪರ್ಯಾಯವಾಗಿ ಬೇರೆ ಪದಗಳು ಕನ್ನಡಕ್ಕೆ ಬೇಕು. ಈ ಕುರಿತು ಪ್ರಾಜ್ಞರು ಹುಡುಕ ಬೇಕಾಗಿದೆ. ಕರಾವಳಿ ಭಾಗದಲ್ಲಿ ರಂಗ ಚಟುವಟಿಕೆಗಳು ಹೆಚ್ಚಳವಾಗಿ ನಡೆಯುತ್ತಿರುವುದು ಸಂತಸದ ವಿಷಯ. ಕಲೆ ವ್ಯವಹಾರಿಕವಾಗಿ ಇರಬಾರದು ಎಂದು ನಾಟ್ಯ ಶಾಸ್ತ್ರದಲ್ಲಿ ಪ್ರಸ್ತಾಪವಿದೆ. ಆದರೆ ಇಂದು ಹಣ ರಂಗ ಚಟುವಟಿಕೆಗೆ ಬೇಕೇ ಬೇಕಾಗಿದೆ. ಮಾಧವಿ ನಾಟಕ ಅತೀ ಕಡಿಮೆ ಹಣ ಬಳಕೆಯಿಂದ ರಂಗ ಪ್ರಯೋಗಗೊಳ್ಳುತ್ತಿರುವುದು ಗಮನಿಸಬೇಕಾದ ಸಂಗತಿ ಎಂದು ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ ಹೇಳಿದರು.


ಅವರು ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಮಕ್ಕಳ ನಾಟಕ ಶಾಲೆ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಕೈವಲ್ಯ ಕಲಾಕೇಂದ್ರ ಪ್ರಸ್ತುತಿಯ ದ್ವಿವ್ಯಕ್ತಿ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ನಿರ್ದೇಶಕ ಶ್ರೀಪಾದ ಭಟ್ ಮಾತನಾಡಿ, ಗಾಂಧಿಯನ್ನು ಅರ್ಧ ಹೆಣ್ಣು ಅಂತ ಕರೆದರು. ಮೌನ, ಉಪವಾಸ, ಸತ್ಯಕ್ಕಾಗಿ ಮಾಡುವ ಹಟ ಹೀಗೆ ಹೆಣ್ಣಿನ ಮೂಲಬೂತ ಗುಣಗಳು ಇದನ್ನೆಲ್ಲ ಬಳಸಿಕೊಂಡು ದೇಶಕ್ಕೆ ಒಳಿತನ್ನು ಬಯಸುವ ಮುಖವನ್ನು ಗಾಂಧೀಜಿ ಲೋಕಕ್ಕೆ ಪರಿಚಯಿಸುತ್ತಾರೆ. ಈ ರೀತಿ ತತ್ವಗಳನ್ನು ಆಧರಿಸಿದ ಬುದ್ಧ, ಏಸು ಈತರದವರು ಬಲಿಯಾಗುತ್ತಾ ಹೋಗುತ್ತಾರೆ. ಎಲ್ಲಿಯವರೆಗೆ ಅಹಿಂಸಾ ಪ್ರತಿಪಾದಕರು ಬಲಿಯಾಗುತ್ತಾರೋ ಮತ್ತೆ ಮತ್ತೆ ಅಹಿಂಸೆಯ ಬಗ್ಗೆ ಪ್ರೀತಿ, ಹೋರಾಟ ಹೆಚ್ಚುತ್ತದೆ. ಗಾಂಧಿಯ ಹುತಾತ್ಮ ದಿನವನ್ನು ಮಹಿಳೆಯರ ಕಥೆಗಳನ್ನು ಕೇಳಿಸುಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ನಿಟ್ಟಿನಲ್ಲಿ ಮಾಧವಿ ನಾಟಕ ಪ್ರಯೋಗಕ್ಕೆ ಬಂತು ಎಂದು ಅಭಿಪ್ರಾಯಪಟ್ಟರು. 
ದಿಮ್ಸಾಲ್ ಮಕ್ಕಳ ನಾಟಕ ಶಾಲೆಯ ನಿರ್ದೇಶಕಿ ಅಭಿಲಾಷ ಹಂದೆ, ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೊಕೂರು, ರಂಗ ಕಲಾವಿದ ರಾಘವೇಂದ್ರ ತುಂಗ, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. 
ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗದಲ್ಲಿ ಕೈವಲ್ಯ ಕಲಾಕೇಂದ್ರ ಪ್ರಸ್ತುತಿಯ ಸುಧಾ ಅಡುಕುಳ ರಚನೆಯ ನಾಟಕ ಮಾಧವಿ ರಂಗದಲ್ಲಿ ಪ್ರಸ್ತುತಿಗೊಂಡಿತು.