ರಂಗಸುರಭಿ - ೨೦೨೩: ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಉದ್ಘಾಟನೆ


ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು: ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುವ ತಾಕತ್ತು ರಂಗಭೂಮಿಯಲ್ಲಿರುವುದರಿಂದ ಇಲ್ಲಿ ತೊಡಗಿಸಿಕೊಳ್ಳುವವರ ಜವಾಬ್ದಾರಿ ಹೆಚ್ಚಿದೆ. ರಂಗಭೂಮಿಯ ಕಲಾವಿದರು ಜೊತೆ ಸೇರುವ ಬದುಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ಯೋಚಿಸುವ, ನಮ್ಮ ಹಾಗೂ ಜನರ ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ ಎಂದು ರಂಗನಟ ಹಾಗೂ ಶಿವಮೊಗ್ಗ ಸಾಹಿತ್ಯ ಸಮುದಾಯದ ಕಾರ್ಯದರ್ಶಿ ಕೆ. ಪ್ರಭಾಕರನ್ ಹೇಳಿದರು. 

ಶನಿವಾರ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಶ್ರೀ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗಸುರಭಿ - ೨೦೨೩ರ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನ, ದುಸ್ತರತೆ, ಜನರ ನೋವು, ನಲಿವಿನ ಬಗ್ಗೆ ಏನು ಹೇಳಬೇಕೋ ಅದನ್ನು ಅಂಜಿಕೆ, ಅಳುಕಿಲ್ಲದೇ ಧೈರ್ಯವಾಗಿ ಹೇಳಲು ರಂಗಭೂಮಿ ಒಂದೇ ಮಾಧ್ಯಮ. ಜನಗಳಿಗೆ ಅರಿವಿಗೆ ಬರುವಂತಹ ವಿಷಯಗಳನ್ನು ಪುರಾಣ, ಇತಿಹಾಸ ಅಥವಾ ಇನ್ಯಾವುದರಲ್ಲಿ ಸಿಗುವ ಕಥಾವಸ್ತುವನ್ನು ಬಳಸಿಕೊಂಡು ನಾಟಕದ ಮೂಲಕ ಜನರಿಗೆ ತಲುಪಿಸಬೇಕು. ವಿಶ್ವದ ಅನೇಕ ನಾಟಕ ಸಂಸ್ಥೆಗಳು ಈಗಾಗಲೇ ಇವುಗಳನ್ನು ರಂಗಭೂಮಿಗೆ ಅಳವಡಿಸಿಕೊಂಡಿದ್ದು, ಇದರಿಂದ ಸಮಾಜದಲ್ಲಿ ಭಾರಿ ಬದಲಾವಣೆಗಳಾದ ಉದಾಹರಣೆಗಳಿವೆ ಎಂದರು.

ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ ಚಂದ್ರಕಲಾ ರಾವ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ರಂಗಭೂಮಿಯ ಪ್ರತಿನಟನೂ ಎದುರಿಗೆ ತನ್ನನ್ನು ನೋಡುವವರಿದ್ದಾರೆ ಎಂಬ ಗ್ರಹಿಕೆಯ ಮೆಲೆ ನಟಿಸುತ್ತಾನೆ. ಆ ಮೂಲಕ ಪಾತ್ರವನ್ನು ಜೀವಿಸುತ್ತಾನೆ. ನಾಟಕ ಪ್ರೇಕ್ಷಕರನ್ನು ಭ್ರಮೆಯಿಂದ ವಾಸ್ತಗಳತ್ತ ಕರೆದೊಯ್ಯುವಂತಿರಬೇಕು. ರಂಗಭೂಮಿ ಲೋಕಭೂಮಿಯಾದಾಗ ನಮ್ಮಲ್ಲಿನ ತುಮುಲುಗಳನ್ನು, ಸಂವೇದನೆಯನ್ನು ಹಂಚಿಕೊಳ್ಳಲು ಸಾಧ್ಯವಿದೆ ಎಂದರು. 

ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ  ಅಧ್ಯಕ್ಷತೆ ವಹಿಸಿದ್ದರು. ಹದಿನೈದು ನೂತನ ಸದಸ್ಯರು ಸಂಸ್ಥೆಗೆ ಸೇರ್ಪಡೆಗೊಂಡರು. 

ನಿರ್ದೇಶಕ ಸುಧಾಕರ ಪಿ. ಇದ್ದರು. ಸಂಸ್ಥೆಯ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ಪ್ರಾಸ್ತಾವಿಸಿದರು. ಕಾರ್ಯದರ್ಶಿ ಭಾಸ್ಕರ ಬಾಡ ವಂದಿಸಿದರು. ಉಪಾಧ್ಯಕ್ಷ ಅಬ್ದುಲ್ ರವೂಫ್ ನಿರೂಪಿಸಿದರು. ನಂತರ ತೀರ್ಥಹಳ್ಳಿ ನಟ ಮಿತ್ರರು ತಂಡದ ಕಲಾವಿದರು ಶ್ರೀಕಾಂತ್ ಕುಮಟಾ ನಿರ್ದೇಶನದ ತುರುಬ ಕಟ್ಟುವ ಹದನ ನಾಟಕ ಪ್ರದರ್ಶನಗೊಂಡಿತು.