ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ: ಧ್ವಜಾರೋಹಣ, ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ


ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾ.೦೮ರಿಂದ ೧೭ರವರೆಗೆ ನಡೆಯಲಿರುವ ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಗುರುವಾರ ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ನಾಂದಿ ಪುಣ್ಯಾಹ, ಅಂಕುರಾವಾಸ ಸಿಂಹಯಾಗದ ನಂತರ ೧೧-೩೦ಕ್ಕೆ (ವೃಷಭಲಗ್ನ) ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು. 

ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್., ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರಾದ ಜಯಾನಂದ ಹೋಬಳಿದಾರ್, ಡಾ. ಅತುಲ್‌ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ್, ದೇವಳದ ಅರ್ಚಕರಾದ ನಾರ್ಸಿ ಗೋವಿಂದ ಅಡಿಗ, ಕೆ. ಎನ್. ಸುಬ್ರಹ್ಮಣ್ಯ ಅಡಿಗ ಮತ್ತಿತರರು ಇದ್ದರು. ಮಧ್ಯಾಹ್ನ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿತು. ಸಂಜೆ ಯಾಗಶಾಲಾ ಪ್ರವೇಶ, ರಜ್ಜು ಬಂಧನ, ಮುಹೂರ್ತಬಲಿ, ಭೇರಿತಾಡನ, ಕೌತುಕ ಬಂಧನದ ಬಳಿಕ ರಾತ್ರಿ ನಗರೋತ್ಸವ ನಡೆಯಿತು. 

ಮಾ.೦೯ರ ರಾತ್ರಿ ಮಯೂರಾರೋಹಣೋತ್ಸವ, ಮಾ.೧೦ರ ರಾತ್ರಿ ಡೋಲಾರೋಹಣೋತ್ಸವ, ಮಾ.೧೧ರ ರಾತ್ರಿ ಪುಷ್ಪಮಂಟಪಾರೋಹಣೋತ್ಸವ, ಮಾ.೧೨ರ ರಾತ್ರಿ ವೃಷಭಾರೋಹಣೋತ್ಸವ, ಮಾ.೧೩ರ ರಾತ್ರಿ ಗಜಾರೋಹಣೋತ್ಸವ, ಮಾ.೧೪ರ ಬೆಳಿಗ್ಗೆ ಶಿಖರ ಪ್ರತಿಷ್ಠೆ, ಸಂಜೆ ಹಿರೇರಂಗಪೂಜೆ, ರಾತ್ರಿ ಸಿಂಹಾರೋಹಣೋತ್ಸವ ಜರುಗಲಿದೆ. ಮಾ.೧೫ರಂದು ಬೆಳಿಗ್ಗೆ ಮುಹೂರ್ತ ಬಲಿ, ಕ್ಷಿಪ್ರಬಲಿ, ರಥಬಲಿ ನಂತರ ಮಧ್ಯಾಹ್ನ ೧೨-೩೦ಕ್ಕೆ ಮಿಥುನ ಲಗ್ನ ಮುಹೂರ್ತದಲ್ಲಿ ರಥಾರೋಹಣ ನಡೆಯಲಿದೆ. ಸಂಜೆ ಶ್ರೀಮನ್ಮಹಾರಥೋತ್ಸವ ಜರುಗಲಿದೆ. ಮಾ.೧೬ರ ರಾತ್ರಿ ಓಕುಳಿ, ಅವಭೃತಸ್ನಾನಾದಿ ಕರ್ಮಗಳು ನಡೆಯಲಿದ್ದು, ೧೭ರ ಬೆಳಿಗ್ಗೆ ಅಶ್ವಾರೋಹಣೋತ್ಸವದ ಬಳಿಕ ಮಹಾಪುರ್ಣಾಹುತಿ, ಧ್ವಜಾಅವರೋಹಣ, ಪೂರ್ಣಕುಂಭಾಭಿಷೇಕ ಹಾಗೂ ಅಂಕುರ ಪ್ರಸಾದ ವಿತರಣೆಯಾಗಲಿದೆ. ಅಲ್ಲದೇ ಜಾತ್ರಾ ಅವಧಿಯ ಆರು ದಿನ ಪ್ರತಿಸಂಜೆ ೫ಕ್ಕೆ ಮಾಂಗಲ್ಯೋತ್ಸವ (ಕಟ್ಟೆ ಉತ್ಸವ) ನಡೆಯಲಿದೆ. ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಸಕಲ ಸಿದ್ದತೆ ಮಾಡಲಾಗಿದೆ. ಭಕ್ತರು ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ದೇವಳದ ಆಡಳಿತ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.