ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮನುಷ್ಯ ಜನ್ಮ ಕೊಟ್ಟ ನಂತರ ಅದರ ಲಾಲನೆ, ಪಾಲನೆ, ರಕ್ಷಣೆ ಮಾಡುವ ಶಕ್ತಿ ದೇವರ ಹತ್ತಿರ ಇದೆ. ಸತ್ಕರ್ಮ ಮಾಡುವ ಕಡೆ ದೇವರ ದಯೆ ಇರುತ್ತದೆ. ಪ್ರತಿಯೊಬ್ಬರ ಬಾಯಲ್ಲಿ ದೇವರ ನಾಮಸ್ಮರಣೆ, ನಾಮೋಚ್ಛಾರಣೆ ನಡೆಯಬೇಕು. ಪ್ರತಿಯೊಬ್ಬರಲ್ಲೂ ಸಹಕಾರ ಮನೋಭಾವ ಬೆಳೆದು ದೇವರ ಸೇವೆ ನಡೆಯಬೇಕು. ಇದರಿಂದ ದೇವರ ಅನುಗ್ರಹ ನಮಗೆ ಪ್ರಾಪ್ತಿಯಾಗಬೇಕು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಅವರು ಮುಂದಿನ ಮೊಕ್ಕಾಂಗೆ ಪ್ರಯಾಣ ಬೆಳೆಸುವ ಮುನ್ನ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಹರಿನಾಮ ಸಂಕೀರ್ತನೆ, ದೇವರ ನಾಮಸ್ಮರಣೆ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ದೇವರಿಗೆ ಸಂಬಂಧಪಟ್ಟ ಯಾವುದೇ ಕಾರ್ಯ ಮಾಡಿದರೂ ಅದು ವ್ಯರ್ಥವಾಗುವುದಿಲ್ಲ. ಮಾಡಿದ ಎಲ್ಲಾ ಕಾರ್ಯಗಳಿಗೆ ದೇವರು ಫಲ ನೀಡುತ್ತಾನೆ. ಅಧಿಕ ಮಾಸದಲ್ಲಿ ಸಣ್ಣ ದೇವರ ಕೆಲಸ ಮಾಡಿದರೂ ಅಕ್ಷಯ ಫಲ ಪ್ರಾಪ್ತಿಯಾಗುತ್ತದೆ. ಸತ್ಕರ್ಮ ಮಾಡಿದರೆ, ದೇವರ ನಾಮಸ್ಮರಣೆ ಮಾಡಿದರೆ, ದೇವರನ್ನು ಸಂಪ್ರೀತಿಗೊಳಿಸುವ ಕಾರ್ಯ ಮಾಡಿದರೆ ನಮಗೆ ಜೀವನದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆಯಾಗುದಿಲ್ಲ ಎಂದು ಅವರು ಆಶೀರ್ವದಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ಸದಾಶಿವ ನಾಯಕ್ ಮತ್ತು ಜಿ. ವೆಂಕಟೇಶ ನಾಯಕ್ ಶ್ರೀಗಳ ಪಾದಪೂಜೆ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಊರಿನ ಹತ್ತು ಸಮಸ್ತರು, ಸಮಾಜ ಬಾಂಧವರು ಮೊದಲಾದವರು ಉಪಸ್ಥಿತರಿದ್ದರು.