ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸಂಪ್ರದಾಯ ದಿನಾಚರಣೆ ʼಸಂಸ್ಕೃತಿʼ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಪರಿಶ್ರಮದೊಂದಿಗೆ ಸತ್ಯನಿಷ್ಠ ಬದುಕನ್ನು ರೂಪಿಸಿಕೊಳ್ಳಬೇಕು. ತಂದೆ, ತಾಯಿ, ಗುರುಗಳು ನೀಡುವ ಜೀವನ ಪಾಠವನ್ನು ಸರಿಯಾಗಿ ಅರ್ಥೈಸಿಕೊಂಡರೆ ಅದೇ ಸಂಸ್ಕೃತಿ. ಹಿರಿಯರು ಅನುಸರಿಸಿಕೊಂಡು ಬಂದಿರುವ ಬದುಕು, ಆಚಾರ-ವಿಚಾರಗಳು ಆಚರಣೆ ಸಂಪ್ರದಾಯಗಳೆಲ್ಲವೂ ಪರಿಶ್ರಮದಿಂದ ಕೂಡಿದ್ದು ಅವುಗಳು ಮುಂದಿನ ಜನಾಂಗಕ್ಕೆ ಆಸರೆಯಾಗಬೇಕು ಎಂದು ಹುಬ್ಬಳ್ಳಿಯ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್‌ನ ಆಡಳಿತ ನಿರ್ದೇಶಕ ರಾಜೇಂದ್ರ ವಿ. ಶೆಟ್ಟಿ ಹೇಳಿದರು.

ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಸಂಪ್ರದಾಯ ದಿನಾಚರಣೆ "ಸಂಸ್ಕೃತಿ"ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ನಮ್ಮ ನೆಲದ ಸಂಸ್ಕೃತಿ ಆಚರಣೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ಜೀವನದುದ್ದಕ್ಕೂ ಶ್ರಮಸಂಸ್ಕೃತಿಯನ್ನು ವಿದ್ಯಾರ್ಥಿಗಳು ಗೌರವಿಸಬೇಕು ಎಂದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರೇಷ್ಮಾ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಕಾರ್ಯದರ್ಶಿ ಆಕಾಶ್ ಬಿ. ಶೆಟ್ಟಿ ಉಪಸ್ಥಿತರಿದ್ದರು. 

ಕಾಲೇಜಿನ ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಸಮರ್ಥ್ ಸ್ವಾಗತಿಸಿ, ಪ್ರತಿನಿಧಿ ನಿರೀಕ್ಷಾ ವಂದಿಸಿ, ಮಿಥಿಲೇಶ್ ನಿರೂಪಿಸಿದರು.