ಅಕ್ಷತಾ ಕೊಲೆ ಪ್ರಕರಣ: ಸಮಗ್ರ ತನಿಕೆಗೆ ಆಗ್ರಹ

ಅಕ್ಷತಾ ಕೊಲೆ ಪ್ರಕರಣದ ಸಮಗ್ರ ತನಿಕೆಯಾಗಲಿ.
ಹೇನಬೇರು ಸೇರಿದಂತೆ ಬೈಂದೂರು ಭಾಗದ ಮೂಲಭೂತ ಸೌಕರ್ಯಗಳು ಅಭಿವೃದ್ಧಿಗೊಳ್ಳಲಿ.
ಬೈಂದೂರು ಬಂದ್, ಪ್ರತಿಭಟನಾ ಸಭೆಯಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದ ಊರವರು.

ಬೈಂದೂರು: ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವೇಳೆ ಹತ್ಯೇಗೀಡಾದ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಸಾವಿನ ಪ್ರಕರಣದ ಸಮಗ್ರ ತನಿಕೆಗೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೈಂದೂರು ವಿಧಾನಸಭಾ ವ್ಯಾಪ್ತಿಯ ಬಂದ್ ಹಾಗೂ ಬೃಹತ್ ಪ್ರತಿಭಟನಾ ಸಭೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ನಡೆಯಿತು.
ಇದನ್ನೂ ಓದಿ:-
ಬೈಂದೂರು ಅಕ್ಷತಾ ದೇವಾಡಿಗ ಕಗ್ಗೋಲೆ ಪ್ರಕರಣ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಒಕ್ಕೊರಲಿನಿಂದ ನಿರ್ಣಯಗಳನ್ನು ಕೈಗೊಂಡು ಬೈಂದೂರಿನ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು.
ಬೈಂದೂರಿನ ಕುಗ್ರಾಮವಾದ ಹೇನಬೇರುವಿಗೆ ಸಮರ್ಪಕವಾದ ಸಂಪರ್ಕ ರಸ್ತೆ, ಬಸ್ಸಿನ ವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿಯ ಹೇನಬೇರು ತಿರುವಿನಲ್ಲಿ ಸರಕಾರಿ ಬಸ್ ನಿಲುಗಡೆ ಸೌಲಭ್ಯ ಹಾಗೂ ಅಲ್ಲಿಯೇ ಅಕ್ಷತಾ ಹೆಸರಿನಲ್ಲಿ ಬಸ್ ನಿಲ್ದಾಣ ವ್ಯವಸ್ಥೆ,  ಹೇನುಬೇರು ಹಾಗೂ ಇತರೆಡೆ ಹೇರಳವಾಗಿ ಬೆಳೆದಿರುವ ಅಕೇಶಿಯಾ ಗಿಡಗಳನ್ನು ತೆರವುಗೊಳಿಸುವುದು, ಬೈಂದೂರು ಪರಿಸರದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಏಕಕಾಲದ ಸಮಯವನ್ನು ಪಾಲಿಸುವಂತೆ ಇಲಾಖೆ ಕ್ರಮ ಕೈಗೊಳ್ಳುವುದು, ಅಕ್ಷತಾ ಸಾವಿನಲ್ಲಿ ರಾಜಕೀಯ ಮಾಡದೇ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದು ಹಾಗೂ ಅಕ್ಷತಾ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಕಲ್ಪಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ನಿರತರು ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ದೇವಾಡಿಗ ಸಂಘಟನೆಯ ಮುಖಂಡರುಗಳಾದ ರಾಜು ದೇವಾಡಿಗ, ಶಂಕರ ಅಂಕದಕಟ್ಟೆ, ರಾಘವೇಂದ್ರ ಮಣಿಪಾಲ, ಎಸ್.ಡಿ. ಹೇನಬೇರು, ಸುಬ್ಬ ದೇವಾಡಿಗ, ಚರಣ್ ಬೈಂದೂರು, ಹಿರಿಯ ನಾಗರೀಕರ ವೇದಿಕೆಯ ವಸಂತ ಹೆಗ್ಡೆ, ಹೋಲಿಕ್ರಾಸ್ ಇಗರ್ಜಿಯ ಉಪಾಧ್ಯಕ್ಷ ರೋಬರ್ಟ್ ರೆಬೆಲ್ಲೊ, ಕಾರ್ಯದರ್ಶಿ ಶಿಶಿಲಿಯೋ ರೆಬೆರೋ, ಬೈಂದೂರು ಮಹಿಳಾ ಮಿತ್ರದ ಅಧ್ಯಕ್ಷೆ ದೇವಿ, ಲಾವಣ್ಯ ಬೈಂದೂರಿನ ಗಣೇಶ್ ಕಾರಂತ್, ಬಿಲ್ಲವ ಸಂಘದ ಅಧ್ಯಕ್ಷ ಶ್ರೀನಿವಾಸ ಉಬ್ಬೇರಿ, ವಿಶ್ವಕರ್ಮ ಸಂಘದ ಅಧ್ಯಕ್ಷ ನಾರಾಯಣ ಆಚಾರಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ಲಕ್ಷ್ಮಣ, ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಗೋಪಾಲ ನಾಯ್ಕ್, ಖಾರ್ವಿ ಯಾನೆ ಹರಿಕಾಂತ್ ಮಹಾಜನ್ ಸಂಘದ ಅಧ್ಯಕ್ಷ ನವೀನ್ ಚಂದ್ರ ಉಪ್ಪುಂದ, ಚೈತ್ರಾ, ವಿಲಾಸ್ ಕುಮಾರ್ ನಿಟ್ಟೆ ಮೊದಲಾದವರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು. ಕಾಲೇಜು ವಿದ್ಯಾರ್ಥಿಗಳು ಬೈಂದೂರು ಬೈಪಾಸ್ ನಿಂದ ಮೆರವಣಿಗೆಯಲ್ಲಿ ಸಾಗಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಹವಾಲುಗಳನ್ನು ತೋಡಿಕೊಂಡರು. ಗಿರೀಶ್ ಬೈಂದೂರು ಪ್ರತಿಭಟನಾ ಸಭೆಯನ್ನು ಸಂಘಟಿಸಿದ್ದರು.



















ಕುಂದಾಪ್ರ ಡಾಟ್ ಕಾಂ- editor@kundapra.com